*ಕಾಂಗ್ರೆಸ್ ಗ್ಯಾರಂಟಿ ಬೇಕೋ? ಬಿಜೆಪಿ ಲೂಟಿ ರಾಜಕಾರಣ ಬೇಕೋ? ರಣದೀಪ್ ಸುರ್ಜೇವಾಲಾ ಪ್ರಶ್ನೆ*

ಪ್ರಗತಿವಾಹಿನಿ ಸುದ್ದಿ: ಒಬ್ಬ ಗೃಹಿಣಿ ಹೊಸ ಮನೆಗೆ ಬಂದಾಗ ಕಿಟಕಿಯ ಮೂಲಕ ಎದುರು ಮನೆಯ ಗೋಡೆಯನ್ನು ನೋಡುತ್ತಿದ್ದಳು. ಆಕೆ ಯಾವಾಗಲೂ ಆ ಮನೆಯ ಗೋಡೆ ಎಷ್ಟು ಕೊಳಕಾಗಿದೆ ಎಂದು ಗಂಡನ ಬಳಿ ದೂರುತ್ತಿದ್ದಳು. ಒಂದು ದಿನ ಗೋಡೆ ಸ್ವಚ್ಛವಾಗಿದೆ ಎಂದು ಆಕೆಗೆ ಅನ್ನಿಸಿತು. ಅದನ್ನು ಗಂಡನಿಗೂ ಹೇಳಿದಳು. ಆದರೆ ಆ ಗೋಡೆ ಮೊದಲಿನಿಂದಲೂ ಸ್ವಚ್ಛವಾಗಿಯೇ ಇತ್ತು, ನಮ್ಮ ಮನೆಯ ಕಿಟಕಿಯ ಗಾಜಿನಲ್ಲೇ ಕೊಳಕು ತುಂಬಿತ್ತು. ಅದನ್ನು ಸ್ವಚ್ಛ ಮಾಡಿದ್ದರಿಂದ ಈಗ ಗೋಡೆ ಸ್ವಚ್ಛವಾಗಿ ಕಾಣುತ್ತಿದೆ ಎಂದು ಗಂಡ ಹೇಳುತ್ತಾನೆ. ಇದೊಂದು ನೀತಿ ಕಥೆ ಅಷ್ಟೆ. ಈ ಕಥೆ ರಾಜ್ಯ ಬಿಜೆಪಿಗೆ ಸರಿಯಾಗಿ ಹೊಂದುತ್ತದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ಕೇಂದ್ರ ಸರ್ಕಾರ ವಿರುದ್ಧದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಮ್ಮ ಮನೆಯ ಕಿಟಕಿಯನ್ನೇ ಸ್ವಚ್ಛವಾಗಿಟ್ಟುಕೊಳ್ಳದ ಇವರು ಕಾಂಗ್ರೆಸ್ನ ಗೋಡೆ ಕೊಳಕಾಗಿದೆ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಕೊಳಕಾಗಿರುವುದು ಅವರ ಕಿಟಕಿಯೇ ಹೊರತು ನಮ್ಮ ಗೋಡೆಯಲ್ಲ ಎಂಬುದು ಇನ್ನೂ ಅವರಿಗೆ ತಿಳಿದಿಲ್ಲ ಎಂದು ಟಾಂಗ್ ನೀಡಿದರು.
ಈಗ ಜನಾಕ್ರೋಶ ಎಂಬ ಹೋರಾಟದ ಮೂಲಕ ರಾಜ್ಯ ರಾಜಕೀಯದಲ್ಲಿ ಸಕ್ರಿಯವಾಗಿರಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕರಾದ ಆರ್.ಅಶೋಕ ಹಾಗೂ ಎಲ್ಲಾ ಬಿಜೆಪಿ ನಾಯಕರು ತಮ್ಮ ಕಿಟಕಿಯ ಕೊಳೆಯನ್ನು ತೆಗೆಯಲು ಯತ್ನಿಸಿದ್ದರೆ ಇಂತಹ ಹೋರಾಟದ ಅಗತ್ಯವೇ ಇರಲಿಲ್ಲ ಎಂದರು.
ಜನಾಕ್ರೋಶದ ಹೋರಾಟದಲ್ಲಿ ಪ್ರಮುಖವಾಗಿ ಬೆಲೆ ಏರಿಕೆಯ ವಿಷಯವನ್ನು ಪ್ರಸ್ತಾಪಿಸಲಾಗಿದೆ. ವಿಪರ್ಯಾಸವೆಂದರೆ ಈ ಹೋರಾಟ ಆರಂಭವಾದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಅಡುಗೆ ಅನಿಲದ ಸಿಲಿಂಡರ್ಗೆ 50 ರೂ. ಏರಿಕೆ ಮಾಡಿದೆ. ಇದನ್ನು ಕೂಡ ಬಿಜೆಪಿಯವರು ಹೋರಾಟದಲ್ಲಿ ಸೇರಿಸಿಕೊಳ್ಳಬಹುದಿತ್ತು! ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ರವರ ನೇತೃತ್ವದ ನಮ್ಮ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳ ಮೂಲಕ ಪ್ರತಿ ಕುಟುಂಬಕ್ಕೆ ವಾರ್ಷಿಕ ಸುಮಾರು 55 ಸಾವಿರ ರೂ. ನೀಡುತ್ತಿದೆ. ಇವು ಕುಟುಂಬಗಳ ಆರ್ಥಿಕ ಶಕ್ತಿಯನ್ನು, ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿದೆ. ಇಂತಹ ಒಂದೇ ಒಂದು ಯೋಜನೆಯನ್ನು ಹಿಂದಿನ ಬಿಜೆಪಿ ಸರ್ಕಾರವಾಗಲೀ, ಕೇಂದ್ರ ಸರ್ಕಾರವಾಗಲೀ ನೀಡಿಯೇ ಇಲ್ಲ. ಈ ಯೋಜನೆಗಳ ಜೊತೆಗೆ, ಕೆಲವು ಕ್ಷೇತ್ರಗಳಲ್ಲಿ ಮಾತ್ರ ಜನರಿಗೆ ಸ್ವಲ್ಪವೂ ಹೊರೆಯಾಗದಂತೆ ಬೆಲೆ ಪರಿಷ್ಕರಣೆ ಮಾಡಲಾಗಿದೆ. ಉದಾಹರಣೆಗೆ ಹಾಲಿನ ದರವನ್ನೇ ನೋಡಿ. ಉಳಿದ ರಾಜ್ಯಗಳಿಗೆ ಹೋಲಿಸಿದರೆ ನಂದಿನಿ ಹಾಲಿನ ದರ ಈಗಲೂ ಅತಿ ಕಡಿಮೆಯೇ ಇದೆ. ಹೀಗೆ ಅಲ್ಪ ದರ ಏರಿಸಿದ್ದರೂ, ಅದರ ಲಾಭವನ್ನು ರೈತರಿಗೆ ನೀಡಲಾಗುತ್ತಿದೆ .
ಇದೇ ವಿಷಯವನ್ನು ಇಟ್ಟುಕೊಂಡು ಜನರ ಮೇಲೆ ತೆರಿಗೆ ಹೊರೆ ಎಂದು ಅಪಪ್ರಚಾರ ಮಾಡುವ ಬಿಜೆಪಿ ನಾಯಕರು, ನಿಜವಾದ ಬೆಲೆ ಏರಿಕೆ ಏನು ಎಂಬುದನ್ನು ಅವರದ್ದೇ ಕೇಂದ್ರ ಸರ್ಕಾರದಲ್ಲಿ ನೋಡಬಹುದು.
ಬೆಲೆ ಏರಿಕೆಯ ಬರೆ ಕಳೆದ ಹನ್ನೊಂದು ವರ್ಷಗಳಿಂದ ಕೇಂದ್ರ ಸರ್ಕಾರ ಮಾಡುತ್ತಿರುವ ಬೆಲೆ ಏರಿಕೆ ಹಾಗೂ ತೆರಿಗೆ ಹಂಚಿಕೆಯಲ್ಲಿನ ಮೋಸದ ಬಗ್ಗೆಯೂ ಜನಾಕ್ರೋಶದ ಹೋರಾಟ ಮಾಡಬಹುದು. ಅಡುಗೆ ಅನಿಲದ ಬೆಲೆ ಏರಿಕೆಯನ್ನೂ ಈಗ ರಾಜ್ಯ ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಕ್ಕೆ ಹೋಗಿ ಅಲ್ಲಿನ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರ ಸ್ನೇಹ ಬೆಳೆಸಿದರೂ, ಅವರೇನೂ ತೆರಿಗೆ ಬರೆಯನ್ನು ಹಾಕುವುದರಿಂದ ಹಿಂದಡಿ ಇಟ್ಟಿಲ್ಲ.
ಈ ತೆರಿಗೆ ಸಮರದಿಂದಾಗಿ ಕಚ್ಚಾ ತೈಲದ ದರ ಒಂದು ಬ್ಯಾರೆಲ್ಗೆ (159 ಲೀಟರ್) ಸುಮಾರು 10 ಡಾಲರ್ (ಅಂದಾಜು 850 ರೂ.) ಇಳಿಕೆಯಾಗಿದೆ. ಬ್ರೆಂಟ್ ಕಚ್ಚಾ ತೈಲ ದರ ಬ್ಯಾರೆಲ್ಗೆ 72.94 ಡಾಲರ್ ಇದ್ದು, ಈಗ 62.91 ಡಾಲರ್ಗೆ ಇಳಿದಿದೆ. ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲ ದರ ಬ್ಯಾರೆಲ್ಗೆ 59.34 ಡಾಲರ್ಗೆ ಬಂದಿದೆ. ಇಷ್ಟು ದರ ಇಳಿಕೆಯಾಗಿದ್ದರೂ ಅಡುಗೆ ಅನಿಲ ದರವನ್ನು 50 ರೂ. ನಷ್ಟು ಏರಿಸಿ ಹೊರೆ ಹಾಕಿರುವುದು ಬಿಜೆಪಿಯ ಜನ ವಿರೋಧಿತನವನ್ನು ಎತ್ತಿ ತೋರಿಸುತ್ತದೆ. ಇದು ಕೇವಲ ಬೆಲೆ ಏರಿಕೆ ಬರೆಯಲ್ಲ, ಇದು ಬಾಸುಂಡೆ ಬರೆ.
ಜೊತೆಗೆ ಪೆಟ್ರೋಲ್-ಡೀಸೆಲ್ ಮೂಲಕ 36.58 ಲಕ್ಷ ಕೋಟಿ ರೂ. ಮೊತ್ತವನ್ನು ಕೇಂದ್ರ ಸರ್ಕಾರ ಸಂಗ್ರಹಿಸುತ್ತಿದೆ. ಇದು ಗ್ಯಾರಂಟಿಗಳಂತಹ ಯೋಜನೆಗಳ ಮೂಲಕ ಜನರನ್ನೇನೂ ಮರಳಿ ತಲುಪುತ್ತಿಲ್ಲ. ಹಾಗಾದರೆ ಈ ಹಣ ಎಲ್ಲಿ ಹೋಗುತ್ತಿದೆ ಎಂಬುದೇ ಯಕ್ಷ ಪ್ರಶ್ನೆ. ಕಳೆದ ಒಂದು ವರ್ಷದಲ್ಲಿ ಸಸ್ಯಾಹಾರಿ ಊಟದ ಬೆಲೆ 57% ನಷ್ಟು ಏರಿಕೆಯಾಗಿದೆ. ಅಡುಗೆ ಎಣ್ಣೆ, ಬೇಳೆ, ತರಕಾರಿ ಮೊದಲಾದ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಆರೋಗ್ಯ ಕ್ಷೇತ್ರದಲ್ಲಿ 14% ನಷ್ಟು ಹಣದುಬ್ಬರ ಕಂಡುಬಂದಿದೆ. ಈ ನಡುವೆ ಸುಧಾರಣೆಯ ಹೆಸರಲ್ಲಿ ತಂದ ಜಿಎಸ್ಟಿಯಿಂದಾಗಿ ಎಲ್ಲಾ ಕಡೆ ತೆರಿಗೆ ಕಂಡುಬಂದಿದೆ. ಸಿನಿಮಾ ನೋಡುವಾಗ ತಿನ್ನುವ ಪಾಪ್ಕಾರ್ನ್ಗೂ ಜಿಎಸ್ಟಿ ತಪ್ಪಿಲ್ಲ. ಜೀವ ವಿಮೆ, ಅರೋಗ್ಯ ವಿಮೆಗಳ ಮೇಲೂ 18% ಜಿಎಸ್ಟಿ ಹೇರಲಾಗಿದೆ, ಮೊದಲ ಬಾರಿಗೆ ಕೃಷಿ ಉತ್ಪನ್ನಗಳಿಗೂ ಜಿಎಸ್ಟಿಯ ಬರೆ ಬಿದ್ದಿದೆ. ಎಟಿಎಂ ಶುಲ್ಕವನ್ನೂ ಏರಿಸಲಾಗಿದೆ ಎಂದು ಗುಡುಗಿದರು.