
ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂಬ ಹೇಳಿಕೆ
ಪ್ರಗತಿ ವಾಹಿನಿ ಸುದ್ದಿ, ಬೆಂಗಳೂರು –
ಭೂತ ಕೋಲ, ಪಂಜುರ್ಲಿ ಮೊದಲಾಗಿ ದಕ್ಷಿಣ ಕನ್ನಡದಲ್ಲಿ ಆಚರಣೆಯಲ್ಲಿರುವ ದೈವಾರಾಧನೆಗಳು ಹಿಂದೂ ಸಂಸ್ಕೃತಿಯ ಭಾಗವಲ್ಲ ಎಂಬ ನಟ ಚೇತನ್ ಹೇಳಿಕೆ ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇನ್ನೊಂದೆಡೆ ರಿಷಬ್ ಶೆಟ್ಟಿ ಅವರ ತಂದೆ, ಸ್ವತಃ ಜ್ಯೋತಿಷ್ಯ ವಿದ್ಯಾಪಾರಂಗತರಾಗಿರುವ ಭಾಸ್ಕರ ಶೆಟ್ಟಿ ಅವರು ಚೇತನ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ಧೂರವಾಣಿ ಮೂಲಕ ನೀಡಿರುವ ಸಂದರ್ಶನದಲ್ಲಿ ಭೂತ ಕೋಲ, ಪಂಜುರ್ಲಿ, ಗುಳಿಗ ಇವು ಹೇಗೆ ಹಿಂದೂ ಸಂಸ್ಕೃತಿಯ ಭಾಗ ಎಂಬುದನ್ನು ರಿಷಬ್ ತಂದೆ ವಿವರಿಸಿದ್ದಾರೆ.
ದಕ್ಷಿಣ ಕನ್ನಡವನ್ನು ಪರಶುರಾಮ ಸೃಷ್ಟಿ ಎನ್ನುತ್ತೇವೆ. ಇಲ್ಲಿರುವ ಭೂತಕೋಲ, ಪಂಜುರ್ಲಿ ಮೊದಲಾದ ದೈವಗಳ ಆರಾಧನೆ ಬಿಹಾರ ರಾಜಸ್ಥಾನ ಮೊದಲಾಗಿ ದೇಶದ ಹಲವು ಭಾಗಗಳಲ್ಲಿ ಕಂಡುಬರುತ್ತದೆ. ಅಲ್ಲಿ ಕೋಲ ಇತ್ಯಾದಿ ಶಬ್ದಗಳ ಬಳಕೆ ಇಲ್ಲ ಹೊರತಾಗಿ ಆಚರಣೆ ಒಂದೇ ಆಗಿದೆ ಎಂದು ಭಾಸ್ಕರ ಶೆಟ್ಟಿ ವಿವರಿಸಿದ್ದಾರೆ.
ಈ ದೈವಗಳು ಹಿಂದೂ ಸಂಸ್ಕೃತಿಯ ಭಾಗವಾಗಿತ್ತೇ ಇಲ್ಲವೇ ಎಂಬುದನ್ನು ನೋಡಲು ರಾಮಾಯಣವನ್ನು ಸರಿಯಾಗಿ ಓದಿಕೊಳ್ಳಬೇಕು ಎಂದು ಭಾಸ್ಕರ ಶೆಟ್ಟಿ ತಿರುಗೇಟು ನೀಡಿದ್ದಾರೆ.
ರಾಮಾಯಣದಲ್ಲಿ ರಾವಣನ ಮಗ ಇಂದ್ರಜಿತನ ಸಾವು ಗುಳಿಕದಿಂದ ಆಗುತ್ತದೆ. ಗುಳಿಕ ಅಂದರೆ ಮಣ್ಣಿನ ಉಂಡೆ, ಗುಳಿಕವು ರಾಮಾಯಣದಲ್ಲೂ ಇರುವ ದೈವ.
ಇನ್ನು ರಾಮಾಯಣದಲ್ಲಿ ರಾವಣ ಬ್ರಾಹ್ಮಣ, ರಾಮ ಕ್ಷತ್ರಿಯ ಎಂದು ಉಲ್ಲೇಖವಿದೆ. ಅಂದಮೇಲೆ ರಾಮಾಯಣದಲ್ಲಿ ಹಿಂದೂಧರ್ಮ ಇತ್ತು ಎಂಬುದು ಸ್ಪಷ್ಟ. ಅದೇ ರಾಮಾಯಣದಲ್ಲಿ ಗುಳಿಕ ದೈವವೂ ಇರುವ ಕಾರಣ ಗುಳಿಕ ಹಿಂದೂ ಆಚರಣೆಯ ಭಾಗ ಎಂಬುದು ಸರ್ವವಿಧಿತ ಎಂದು ಭಾಸ್ಕರ ಶೆಟ್ಟಿ ಹೇಳಿದ್ದಾರೆ.
ಪಂಜುರ್ಲಿ ಎಂದರೆ ವರಾಹ ದೇವರ ಸ್ಥಳೀಯವಾಗಿ ಕರೆಯುವ ಹೆಸರಾಗಿದೆ. ವರಾಹ ದೇವರು ಹಿಂದೂ ಪುರಾಣದ ಅವತಾರದಲ್ಲಿ ಏಳನೇ ಅವತಾರ.
ಗುಳಿಕ, ಮಾಂದಿ, ದೈವ ಮೊದಲಾದ ದೇವರು ಕಾಣಸಿಗಬೇಕಿದ್ದರೆ ರಾಮಾಯಣವನ್ನು ಸರಿಯಾಗಿ ಅಧ್ಯಯನ ಮಾಡಿ ಎಂದು ಹೇಳಿದ್ದಾರೆ.
https://pragati.taskdun.com/latest/bhutakolachetanclarificationkanatara-filmreshab-shetty/