*ಸಾಹಿತ್ಯ ಲೋಕದ ದಿಗ್ಗಜ ಇನ್ನು ನೆನಪು ಮಾತ್ರ: ಪಂಚಭೂತಗಳಲ್ಲಿ ಲೀನರಾದ ಸಾಹಿತಿ ಎಸ್.ಎಲ್.ಭೈರಪ್ಪ*

ಪ್ರಗತಿವಾಹಿನಿ ಸುದ್ದಿ: ಸರಸ್ವತಿ ಪುತ್ರ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರ ಅಂತ್ಯಕ್ರಿಯೆ ಮೈಸೂರಿನ ಚಾಮುಂಡಿ ಬೆಟ್ಟದ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ವಯೋಸಹಜ ಕಾಯಿಲೆಯಿಂದ ಬಳಲಿತ್ತಿದ್ದ 94 ವರ್ಷದ ಎಸ್.ಎಲ್.ಭೈರಪ್ಪ ಸೆಪ್ಟೆಂಬರ್ ೨೪ರಂದು ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ತೆಯಲ್ಲಿ ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದರು. ಅವರ ಅಂತ್ಯಕ್ರಿಯೆ ಇಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ, ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿತು.
ಎಸ್.ಎಲ್.ಭೈರಪ್ಪ ಅವರ ಪುತ್ರರಾದ ಉದಯ್ ಶಂಕರ್ ಹಾಗೂ ರವಿಶಂಕರ್ ಅವರು ತಂದ್ರ್ಯ ಪಾರ್ಥಿವಶರೀರಕ್ಕೆ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದರು. ಬಳಿಕ ಪಾರ್ಥಿವಶರೀರಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು.
ಎಸ್.ಎಲ್.ಭೈರಪ್ಪ ಅಂತ್ಯಕ್ರಿಯೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಹೆಚ್.ಸಿ.ಮಹದೇವಪ್ಪ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಎಸ್.ಎಲ್.ಭೈರಪ್ಪ ಬರೆದಿದ್ದ ವಿಲ್ ಭಾರಿ ಚರ್ಚೆಗೆ ಕಾರಣವಾಗಿತ್ತು. ಅವರ ಅಂತ್ಯಕ್ರಿಯೆಯ ಸ್ಥಳದ ಬಗ್ಗೆಯೂ ಗೊಂದಲವುಂಟುಮಾಡಿತ್ತು. ನನ್ನ ಅಂತ್ಯಕ್ರಿಯೆಯನ್ನು ನನ್ನ ಮಕ್ಕಳಾದ ಉದಯ್ ಶಂಕರ್ ಹಾಗೂ ರವಿ ನಡೆಸುವಂತಿಲ್ಲ. ಬೆಂಗಳೂರಿನ ಕೆಂಗೇರಿ ನಿವಾಸಿ ಸಹನಾ ವಿಜಯ್ ಕುಮಾರ್ ಅವರೇ ನೆರವೇರಿಸಬೇಕು ಎಂದು ಬರೆದಿಟ್ಟಿದ್ದ ಉಯಿಲು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಕೊನೆಗೂ ಅಂತಿಮವಾಗಿ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಭೈರಪ್ಪ ಅವರ ಪುತ್ರರೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಸಾಹಿತ್ಯ ಲೋಕದ ದಿಗ್ಗಜ ಎಸ್.ಎಲ್.ಭೈರಪ್ಪ ಪಂಚಭೂತಗಳಲ್ಲಿ ಲೀನರಾಗಿದ್ದಾರೆ.