
ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ರಾಜ್ಯ ಸರ್ಕಾರ ವಿನೂತನ ಯೋಜನೆ ಆರಂಭಿಸಿದೆ. ಆನ್ ಲೈನ್ ನಲ್ಲಿ ಬುಕ್ ಮಾಡಿದರೆ ಜಲಮಂಡಳಿಯಿಂದಲೇ ನೇರವಾಗಿ ಮನೆ ಬಾಗಿಲಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ.
ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಫೇಸ್ ಬುಕ್ ನಲ್ಲಿ ಮಾಹಿತಿ ನೀಡಿದ್ದಾರೆ. ‘ಸಂಚಾರಿ ಕಾವೇರಿ’ ಎಂಬ ವಿನೂತನ ಯೋಜನೆ ಮೂಲಕ ಬೆಂಗಳೂರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬೇಸಿಗೆ ಸಮಯದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ, ಗಗನಕ್ಕೇರುವ ಟ್ಯಾಂಕರ್ ದರಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ನನ್ನ ಸೂಚನೆಯ ಮೇರೆಗೆ, BWSSB ವತಿಯಿಂದ ‘ಸಂಚಾರಿ ಕಾವೇರಿ’ ಎಂಬ ವಿನೂತನವಾದ ಯೋಜನೆಯನ್ನು ಪರಿಚಯಿಸುತ್ತಿದ್ದೇವೆ. ಈ ಯೋಜನೆ ದೇಶದಲ್ಲೇ ಮೊದಲು! ಖಾಸಗಿ ಟ್ಯಾಂಕರ್ಗಳ ದರ ಏರಿಕೆಯ ಸಮಸ್ಯೆಗೆ ಪರಿಹಾರವಾಗಿ, ಬೆಂಗಳೂರಿನ ಜನತೆಗೆ ನಿಗದಿತ ದರದಲ್ಲಿ ಶುದ್ಧ ನೀರು ದೊರಕುವ ವ್ಯವಸ್ಥೆ ಇದಾಗಿದೆ ಎಂದುದಿದ್ದಾರೆ.
ಆನ್ಲೈನ್ ಬುಕ್ಕಿಂಗ್ ಮಾಡಿದರೆ, ಬಿಐಎಸ್ ಪ್ರಮಾಣೀಕೃತ ಶುದ್ಧ ಕುಡಿಯುವ ನೀರು ಇನ್ನು ಮುಂದೆ ಬೆಂಗಳೂರು ಜಲಮಂಡಳಿಯ ಟ್ಯಾಂಕರ್ಗಳ ಮೂಲಕವೇ ಮನೆ ಬಾಗಿಲಿಗೆ ಸರಬರಾಜು ಆಗಲಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರನ್ನು ‘ಟ್ಯಾಂಕರ್ ಸಿಟಿ’ ಎಂದು ಕರೆದವರಿಗೆ ಈ ಮೂಲಕ ತಕ್ಕ ಉತ್ತರವನ್ನು ನೀಡಲಿದ್ದೇವೆ! ಎಂದು ಇದೇ ವೇಳೆ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.