*ವಿದ್ಯಾರ್ಥಿಗೆ ಜನಿವಾರ ತೆಗೆಸಿದ್ದು ದುರುದ್ದೇಶಪೂರಕ: ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ್ ಭಾಸ್ಕರ್ ಹೆಗಡೆ ಖಂಡನೆ

ಪ್ರಗತಿವಾಹಿನಿ ಸುದ್ದಿ: ಶಿರಸಿ: ಇತ್ತೀಚಿನ ದಿನಗಳಲ್ಲಿ ಈ ರೀತಿಯ ಅಸಂಗತ ಪ್ರಕರಣಗಳು ಹೆಚ್ಚುತ್ತಿರುವುದು ಸಮಾಜದ ಸ್ವಾಸ್ಥ್ಯದ ವಿಷಯದಲ್ಲಿ ತೀವ್ರ ಆತಂಕಕಾರಿ, ನಾಗರಿಕ ಸಮಾಜ ತಲೆ ತಗ್ಗಿಸುವ ಹಾಗಾಗಿದೆ ಎಂದು ಶ್ರೀರಾಮಚಂದ್ರಪುರ ಮಠದ ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ್ ಭಾಸ್ಕರ್ ಹೆಗಡೆ ಅಸಮಧಾನಿಸಿದ್ದಾರೆ.
ಅದರಲ್ಲಿಯೂ ವಿದ್ಯಾರ್ಥಿಗಳ ಪರೀಕ್ಷೆಯ ಸಂದರ್ಭದಲ್ಲಿ ಜನಿವಾರ ತೆಗೆಸಿದ್ದು ತೀವ್ರ ಕೀಳು ಮಟ್ಟದ ಮನಸ್ಸಿನ ಪ್ರತೀಕ ಹಾಗೂ ದುರುದ್ದೇಶದಿಂದ ಕೂಡಿದ ಕಾರ್ಯ ಎನ್ನುವುದು ಸ್ಪಷ್ಟವಾಗುತ್ತದೆ. ಯಾರಾದರೂ ಒಬ್ಬರು ಈ ರೀತಿಯ ಕೃತ್ಯಕ್ಕೆ ಮುಂದಾದಾಗ ಅಲ್ಲಿರುವ ಸಂಬಂಧ ಪಟ್ಟ ಸರ್ವರು ಸುಮ್ಮನೆ ಇದ್ದು ಅದನ್ನು ನೋಡುತ್ತಾ ಬಂದಿದ್ದು ನಿಜಕ್ಕೂ ಕಳವಳಕಾರಿ ಎಂದಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷೆಗಾಗಿ ವರ್ಷವಿಡೀ ಅಭ್ಯಾಸ ಮಾಡಿ, ಒಂದು ರೀತಿಯ ಒತ್ತಡದಲ್ಲಿ ಇರುವಾಗ ಅವರು ಯಾವುದನ್ನೂ ಗಮನಿಸದೆ ನಿಯಮ ಬಾಹಿರವಾದ ಕೃತ್ಯವನ್ನು ಎಸೆಗಿದ್ದು ಅಕ್ಷಮ್ಯ ಅಪರಾಧ. ಇಂತವರಿಗೆ ಸರಕಾರ, ಸಂಬಂಧಪಟ್ಟ ಅಧಿಕಾರಿಗಳು ಸರಿಯಾದ ಶಿಕ್ಷೆಯನ್ನ ನೀಡಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಬೇಕು ಎಂದು ಮೋಹನ್ ಹೆಗಡೆ ಪ್ರತಿಕ್ರಿಯಿಸಿದ್ದಾರೆ.
ಸಿಇಟಿ ಪರೀಕ್ಷೆ ಬರೆಯಲಿಕ್ಕೆ ಆಗದಿರುವ ವಿದ್ಯಾರ್ಥಿಗೆ ತಕ್ಷಣ ಪರ್ಯಾಯ ವ್ಯವಸ್ಥೆಯನ್ನು ಮಾಡಿ ಯಾವುದೇ ರೀತಿ ಅನ್ಯಾಯವಾಗದ ಹಾಗೆ ವಿದ್ಯಾರ್ಥಿಯ ಭವಿಷ್ಯವನ್ನು ಹಾಗೂ ಆತ್ಮಗೌರವವನ್ನು ರಕ್ಷಿಸಿ, ನ್ಯಾಯ ಕೊಡಬೇಕು ಎಂದೂ ಅವರು ವಿನಂತಿಸಿದ್ದಾರೆ. ಮುಂದೆಯೂ ಸಹ ಇಂತಹ ಕೃತ್ಯವನ್ನು ಆಗದಂತೆ ತಡೆಯುವ ಮುನ್ನೆಚ್ಚರಿಕೆಯನ್ನು ವಹಿಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ಜಾತಿಗಣತಿಯ ಕುರಿತು ಪ್ರತಿಕ್ರಿಯಿಸಿರುವ ಅವರು ನಮ್ಮ ಸಮಾಜದ ಎಲ್ಲಾ ಕಡೆಯ ಮಾಹಿತಿಯನ್ನು ಸಂಗ್ರಹಿಸಿದಾಗ ಜಾತಿ ಗಣತಿಗಾಗಿ ಸಂಪರ್ಕಿಸಲಿಲ್ಲ ಈ ವಿಷಯವೇ ನಮ್ಮಲ್ಲಿ ಬಹುತೇಕರಿಗೆ ತಿಳಿದಿಲ್ಲ. ಆದುದರಿಂದ ಈ ಗಣತಿ ಪರಿಪೂರ್ಣವಲ್ಲ. ಸಾಕಷ್ಟು ನ್ಯೂನತೆಗಳಿಂದ ತುಂಬಿದೆ ಎಂದು ಹೇಳಿದರು.