*ಶ್ರೀ ಭಗವಾನ ಮಹಾವೀರ ಜಯಂತಿ: ಶಾಂತಿ, ಸಹನೆ, ತಾಳ್ಮೆ ಜೀವನದ ಮಂತ್ರಗಳಾಗಬೇಕು: ಮಹಾಪೌರ ಮಂಗೇಶ ಪವಾರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶಾಂತಿ, ಸಹನೆ, ತಾಳ್ಮೆ ಜೀವನದ ಮಂತ್ರಗಳಾಗಬೇಕು. ಆ ಮೂಲಕ ಪರೋಪಕಾರ ಜೀವನ ಸಾಗಿಸಬೇಕೆಂಬ ಸಂದೇಶವನ್ನು ಭಗವಾನ ಮಹಾವೀರರು ನೀಡಿದ್ದಾರೆ ಎಂದು ಮಹಾಪೌರರಾದ ಮಂಗೇಶ ಪವಾರ ಅವರು ನುಡಿದರು.
ನಗರದ ಕುಮಾರ ರಂಗಂಮದಿರದಲ್ಲಿ ಗುರುವಾರ (ಏ.10) ಜರುಗಿದ ಶ್ರೀ ಭಗವಾನ ಮಹಾವೀರ ಜನ್ಮಕಲ್ಯಾಣಕ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹುಟ್ಟಿನಿಂದ ಯಾರು ಮೇಲಲ್ಲ, ಕೀಳಲ್ಲ. ತನ್ನ ಕಾಯಕದಿಂದ ಉತ್ತಮ ಅಥವಾ ಕನಿಷ್ಠನಾಗುತ್ತಾನೆಂಬ ಮಾತಿನಂತೆಯೇ ಮನಸ್ಸು,ವಚನ,ಕಾಯಕ ಶುದ್ಧಿಯಿಂದ ಆತ್ಮ ಸುಸಂಕೃತವಾಗುವುದೆಂಬ ದಿವ್ಯ ಮಂತ್ರ ಹೇಳಿಕೊಟ್ಟ ಮಾನವ ಸಮಾಜದ ಮಹಾ ಬೆಳಕಾಗಿದ್ದಾರೆ.
ಮಹಾವೀರರ ವಿಚಾರಧಾರೆಗಳು ಸರ್ವರಿಗೂ ಸಮಬಾಳು, ಸಮಪಾಲು ನೀಡುವ ಧರ್ಮ ತೀರ್ಥದಂತಿದ್ದು ಪ್ರತಿಯೊಬ್ಬರು ಅವರ ವಿಚಾರ ಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಹಾಪೌರ ಮಂಗೇಶ ಪವಾರ ಅವರು ಕರೇ ನೀಡಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಶ್ರೀಕಾಂತ ಶಾನವಾಡ ಅವರು ಮಾತನಾಡಿ ಭಗವಾನ ಮಹಾವೀರರ 2624 ಜನ್ಮಕಲ್ಯಾಣಕ ಮಹೋತ್ಸವ ಇದಾಗಿದೆ. ಮನುಷ್ಯ ಹೇಗೆ ಬದುಕು ಬೇಕು ಎಂಬುದನ್ನು ಎರಡು ಸಾವಿರ ವರ್ಷಕ್ಕೂ ಹಿಂದೆ ಭಗವಾನ ಮಹಾವೀರರು ಸಾರಿದ್ದಾರೆ.
ಅಹಿಂಸೆ ಎಂಬ ಮೂಲ ಮಂತ್ರದೊಂದಿಗೆ ಧರ್ಮ ಸಂಘಟನೆ ಮಾಡಿದರು. ಅಹಿಂಸೆ ಎನ್ನುವ ಮಂತ್ರ, ತಂತ್ರ ಹಾಗೂ ವೈದ್ಧಿಕ ಸಿದ್ಧಾಂತಗಳನ್ನು ಭಗವಾನ ಮಹಾವೀರರು ಇಡೀ ವಿಶ್ವಕ್ಕೆ ಸಾರಿದರು. ಪ್ರಪಂಚಕ್ಕೆ ಧರ್ಮ ಎಂಬುದು ಏನು ಎಂದು ತಿಳಿಸಿಕೊಟ್ಟವರು ಭಗವಾನ ಮಾಹವೀರರು ಎಂದು ಶಾನವಾಡ ಅವರು ತಿಳಿಸಿದರು.
ಧ್ಯಾನವೇ ಮಹಾವೀರರ ಜೀವನವಾಗಿತ್ತು, ಮಹಾವೀರರಿಗೆ ಧ್ಯಾನದ ಸಂದರ್ಭದಲ್ಲಿ ಕೊಟ್ಟಂತಹ ಕಷ್ಟ ಕೋಟಲೆಗಳಿಂದಾಗಿ ಅಹಿಂಸೆ ಬಗ್ಗೆ ಹೆಚ್ಚು ಪ್ರಚಾರ ಮಾಡಿದರು. ಜಗತ್ತಿನಲ್ಲಿ ಮಹಾವೀರರಾದಂತವರು ಮಹಾವೀರು ಒಬ್ಬರೆ ಎಂದರು.
ವೈಭೋಗದ ಜೀವನ ತ್ಯಜಿಸಿ ಕಠಿಣ ಸನ್ಯಾಸತ್ವ ಸ್ವೀಕರಿಸಿ ತಪಸ್ಸಿನಿಂದ ದಿವ್ಯ ಜ್ಞಾನ ಪಡೆದು ಅಹಿಂಸೊ ಪರಮ ಧರ್ಮ ಎಂಬ ತತ್ತ್ವವನ್ನು ಜಗತ್ತಿಗೆ ಕೊಟ್ಟಿದ್ದಾರೆ ಎಂದು ಉಪನ್ಯಾಸಕರಾದ ಶ್ರೀಕಾಂತ ಶಾನವಾಡ ಅವರು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಉಪ ಮಹಾಪೌರರಾದ ವಾಣಿ ವಿಲಾಸ ಜೋಶಿ, ನಗರ ಸೇವಕರಾದ ಪ್ರಿಯಾ ಸಾತಗೌಡ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೆಶಕಿ ವಿದ್ಯಾವತಿ ಭಜಂತ್ರಿ, ಸಮಾಜದ ಗಣ್ಯರುಗಳಾದ ಶಾಂತಿನಾಥ ಬುಡವಿ, ಸುನೀಲ ಚೌಗಲೆ, ಸಂತೋಷ ಸಾತಗೌಡ, ಸಾರ್ವಜನಿಕರು ಉಪಸ್ಥಿತರಿದ್ದರು. ಸುನಿತಾ ದೇಸಾಯಿ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಸುರೆಖಾ ಗೌರಗೊಂಡ ಹಾಗೂ ತಂಡದವರು ಭಜನೆ, ಪ್ರೇಮಾ ಉಪಾದ್ಯೆ ತಂಡದವರಿಂದ ನೃತ್ಯ ಪ್ರಸ್ತುತಿಸಲಾಯಿತು.