Kannada NewsKarnataka News

*SIR ಅಕ್ರಮ; ಚುನಾವಣಾಧಿಕಾರಿಗೆ ಎನ್ಡಿಎ ನಿಯೋಗ ದೂರು*

SIR ಅಕ್ರಮ; ಚುನಾವಣಾಧಿಕಾರಿಗೆ ಎನ್ಡಿಎ ನಿಯೋಗ ದೂರು*

  • ಸಿಎಂ ಡಿಕೆ ಶಿವಕುಮಾರ್ ಚುನಾವಣಾ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದ್ದಾರೆ; ಕೇಂದ್ರ ಸಚಿವರ ಆಕ್ರೋಶ
  • ಭರ್ತಿ ಮಾಡಿದ ಅರ್ಜಿ ಕಡ್ಡಾಯವಾಗಿ ಮರುಪರಿಶೀಲಿಸಲು ಪಟ್ಟು

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಷಡ್ಯಂತ್ರದಿಂದ ರಾಜ್ಯಾದ್ಯಂತ SIR ಪ್ರಕ್ರಿಯೆಯಲ್ಲಿ ತೀವ್ರ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನೇತೃತ್ವದಲ್ಲಿ NDA ಸೋಮವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿತು.

“ರಾಜ್ಯದಲ್ಲಿ SIR ಪ್ರಕ್ರಿಯೆಯಲ್ಲಿ ತೀವ್ರ ಅಕ್ರಮ ನಡೆಯುತ್ತಿರುವುದರಿಂದ ವಿಶ್ವಾಸಾರ್ಹವಲ್ಲದ ಹಾಗೂ ದೋಷಪೂರಿತ ಮತದಾರರ ಪಟ್ಟಿ ಸೃಷ್ಟಿಯಾಗುವ ಅಪಾಯವಿದೆ” ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚುನಾವಣಾ ಆಯೋಗದ ಗಮನ ಸೆಳೆದರು.

ಜೋಶಿ ಅವರ ನೇತೃತ್ವದಲ್ಲಿ ಮುಖ್ಯ ಚುನಾವಣಾಧಿಕಾರಿ ಬಳಿ ದೂರು ಸಲ್ಲಿಸಿದ ಎನ್.ಡಿ.ಎ ನಾಯಕರು, SIR ಅಕ್ರಮ ಕುರಿತು ತ್ವರಿತವಾಗಿ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಅಕ್ರಮಗಳು ನಡೆದ ಪ್ರದೇಶಗಳಲ್ಲಿ ಮರು ಪರಿಶೀಲನೆ ನಡೆಸಬೇಕೆಂದು ಆಗ್ರಹಿಸಿದರು.

Home add -Advt

ಕೇಂದ್ರ ಚುನಾವಣಾ ಆಯೋಗ ನಿಗದಿಪಡಿಸಿದ ಮಾರ್ಗಸೂಚಿ ಮತ್ತು ಕಾರ್ಯವಿಧಾನಗಳ ಮೂಲಕವೇ SIR ನಡೆಯಬೇಕು.‌ ಕಡ್ಡಾಯವಾಗಿ ಮನೆ-ಮನೆಗೆ ತೆರಳಿ ಮತದಾರರ ಪರಿಶೀಲನೆ ನಡೆಸಬೇಕು. ಹಾಗಿದ್ದರೂ, ಹಲವೆಡೆ ಈ ನಿಯಮಗಳನ್ನು ಪಾಲಿಸದೆ ಸಮುದಾಯ ಭವನ, ಮಸೀದಿ ಹಾಗೂ ಬೂತ್ ಮಟ್ಟದ ಅಧಿಕಾರಿಗಳ ನಿವಾಸಗಳಲ್ಲೆಲ್ಲಾ ಅರ್ಜಿ ನಮೂನೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಪ್ರಲ್ಹಾದ ಜೋಶಿ ಚುನಾವಣಾಧಿಕಾರಿ ಎದುರು ದೂರಿದರು.

SIR ಪ್ರಕ್ರಿಯೆಗೆ ವಾಟ್ಸಪ್ ಗುಂಪುಗಳನ್ನು ರಚಿಸಿ, ಮತದಾರರನ್ನು ಒಂದು ಪ್ರದೇಶಕ್ಕೆ ಕರೆಸಲಾಗುತ್ತಿದೆ ಎಂಬ ದೂರುಗಳಿವೆ. ಈ ಬಗ್ಗೆ ಸಾಕಷ್ಟು ಸಾಕ್ಷಾಧಾರಗಳು ಸಾಮಾಜಿಕ ಜಾಲತಾಣಗಳಲ್ಲಿವೆ. ಈ ಎಲ್ಲ ಬೆಳವಣಿಗೆ ಮತದಾರರ ಪಟ್ಟಿಯ ನಿಖರತೆ, ಪಾರದರ್ಶಕತೆ ಮತ್ತು ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಗೆ ಧಕ್ಕೆ ಉಂಟುಮಾಡುತ್ತಿದೆ ಎಂದು ಜೋಶಿ ತೀವ್ರ ಕಳವಳ ವ್ಯಕ್ತಪಡಿಸಿದರು.

ಭರ್ತಿ ಮಾಡಿದ ಅರ್ಜಿ ಮರು ಪರಿಶೀಲಿಸಿ: ರಾಜ್ಯದಲ್ಲಿನ SIR ಅಕ್ರಮ ಪ್ರಕರಣದ ಕುರಿತು ತಕ್ಷಣವೇ ಸಮಗ್ರ ತನಿಖೆ ನಡೆಸಬೇಕು ಹಾಗೂ ಈಗಾಗಲೇ ಭರ್ತಿ ಮಾಡಿರುವ ಎಲ್ಲಾ ಅರ್ಜಿ (Enumeration) ನಮೂನೆಗಳನ್ನು ಕಡ್ಡಾಯವಾಗಿ ಮನೆ-ಮನೆಗೆ ಭೇಟಿ ನೀಡಿ ಮರು ಪರಿಶೀಲನೆ ಮಾಡುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಸಚಿವ ಪ್ರಲ್ಹಾದ್ ಜೋಶಿ ಮುಖ್ಯಚುನಾವಣಾ ಅಧಿಕಾರಿಗೆ ಪಟ್ಟು ಹಿಡಿದರು.

ಕಾನೂನು ಕ್ರಮಕ್ಕೆ ಆಗ್ರಹ:
ಅಕ್ರಮಗಳಿಗೆ ಕಾರಣರಾಗಿರುವ ಅಧಿಕಾರಿಗಳು ಹಾಗೂ ರಾಜಕೀಯ ಪದಾಧಿಕಾರಿಗಳ ವಿರುದ್ಧ ಅನ್ವಯವಾಗುವ ಕಾನೂನುಗಳಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜೋಶಿ ಸೇರಿದಂತೆ ಎನ್‌ಡಿಎ ನಾಯಕರು ಒತ್ತಾಯಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕು: ದೂರು ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಜೋಶಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚುನಾವಣಾ ವ್ಯವಸ್ಥೆ ಬುಡಮೇಲು ಮಾಡಲು ಹೊರಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಹೊಸದಾಗಿ ಎನ್ಯುಮರೇಷನ್ ಮಾಡಲು ಮುಖ್ಯ ಚುನಾವಣಾ ಅಧಿಕಾರಿ ಅವರಿಗೆ ಆಗ್ರಹಿಸಿದ್ದೇವೆ. ರಾಜ್ಯ ಸರ್ಕಾರದವರ ಕುಮ್ಮಕ್ಕು, ಧಮ್ಕಿಯಿಂದ ಇಲ್ಲಿ ಅಕ್ರಮ ನಡೆಯುತ್ತಿದೆ ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣಾಧಿಕಾರಿ ಪೆನ್ ಡ್ರೈವ್ ಸಮೇತ ಸಾಕ್ಷಿ: ರಾಜ್ಯದಲ್ಲಿ ಮದರಸಾ, ಮಸೀದಿಗಳಲ್ಲಿ, ಕಾಂಗ್ರೆಸ್ನ ಚುನಾಯಿತ ಪ್ರತಿನಿಧಿಗಳ ಮನೆಯಲ್ಲಿ, SIR ನಡೆಯುತ್ತಿದೆ.‌ ಬಿಎಲ್ಎಗಳನ್ನು ಕೂಡ ಕರೆದು ಮಾಡುತ್ತಿಲ್ಲ. ಈ ಬಗ್ಗೆ ದಾಖಲೆ ಇರುವ ಪೆನ್ಡ್ರೈವ್ ಅನ್ನು ಚುನಾವಣಾ ಅಧಿಕಾರಿಯವರಿಗೆ ನೀಡಿದ್ದೇವೆ. ವಾಟ್ಸಪ್ ಗ್ರೂಪ್ ಮಾಡಿ, ನಿಗದಿತ ಸ್ಥಳಕ್ಕೆ ಕರೆಸಿಕೊಳ್ಳುತ್ತಿದ್ದಾರೆ. ಈ ಮೊದಲು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ‌, ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ನ ನಿಖಿಲ್ ಕುಮಾರಸ್ವಾಮಿ ದೂರು ನೀಡಿದ್ದಾರೆ. ಅಷ್ಟಾದರೂ ಸುಧಾರಣೆ ಆಗಿಲ್ಲ. ಹಾಗಾಗಿ ಈಗ ಮತ್ತೊಮ್ಮೆ ಕ್ರಮಕ್ಕಾಗಿ ಆಯೋಗಕ್ಕೆ ಪಟ್ಟು ಹಿಡಿದಿದ್ದೇವೆ ಎಂದರು ಜೋಶಿ.

ಬಿಎಲ್ ಒಗಳ ಐಡಿ ಕಾರ್ಡಲ್ಲಿ ಶಾಸಕರ ಫೋಟೋ!: ವಾಟ್ಸಾಪ್ ಗ್ರೂಪ್, ಬಿಎಲ್ಒಗಳ ಐಡಿ ಕಾರ್ಡ್ನಲ್ಲಿ ಶಾಸಕರ ಫೋಟೋ ಹಾಕಿದ್ದಾರೆ ಎಂದು ಸಚಿವ ಪ್ರಲ್ಹಾದ ಜೋಶಿ ಸರ್ಕಾರದ ವ್ಯವಸ್ಥೆ ವಿರುದ್ಧ ಹರಿ ಹಾಯ್ದರು.

SIR ವಿಫಲಕ್ಕೆ ಯತ್ನ: ಎಸ್ಐಆರ್ ಪ್ರಕ್ರಿಯೆ ವಿಫಲಗೊಳಿಸುವ ತಂತ್ರ ಇದಾಗಿದೆ. ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ಆದ ಬಳಿಕ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಬಾಂಗ್ಲಾ ದೇಶದವರನ್ನು ಮತಪಟ್ಟಿಗೆ ಸೇರಿಸಲು ಅವಕಾಶ ನೀಡಿದ್ದಾರೆ. ಈಗಾಗಲೇ ಸುಪ್ರೀಂ ಕೋರ್ಟ್ ಎಸ್ಐಆರ್ ಮಾಡಲು ಅವಕಾಶ ಇದೆ ಎಂದಿದೆ. ಅಪ್ಪ, ಅಮ್ಮ, ಕುಟುಂಬದವರಿಗೆ ಮಾತ್ರ ಅವಕಾಶ ಇದೆ. ಆದರೆ ಸಂಬಂಧಿಕರೂ ಆಗಬಹುದೆಂದು ಮಾಡಿದ್ದಾರೆ. ಇದನ್ನು ಕುತಂತ್ರದಿಂದ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಿಎಂ ಡಿಕೆ ಶಿವಕುಮಾರ್ ಅಕ್ರಮವಾಗಿ ಜಿಬಿಎ ವ್ಯಾಪ್ತಿಯಲ್ಲಿ ಎಸ್ಐಆರ್ ಮಾಡುತ್ತಿದ್ದಾರೆ. ಹಿಂಡು ಹಿಂಡಾಗಿ ಮಾಡಲಾಗುತ್ತಿದೆ. ಆಯ್ದ ಬೂತ್‌ಗಳಲ್ಲಿ ಪ್ರತ್ಯೇಕ ಎಸ್ಐಆರ್ ಮಾಡುತ್ತಿದ್ದಾರೆ. ಮನೆ ಮನೆಗೆ ಹೋಗದಿದ್ದರೆ ಅವನು ಭಾರತೀಯನೋ? ಬಾಂಗ್ಲಾ ದೇಶದವನೋ? ಯಾರಿಗೆ ಗೊತ್ತಾಗಲಿದೆ ಎಂದು ಜೋಶಿ ಪ್ರಶ್ನಿಸಿದರು.

Related Articles

Back to top button