Kannada NewsKarnataka NewsLatestPolitics

*ಸಿಎಸ್ ಶಾಲಿನಿ ರಜನೀಶ್ ವಿರುದ್ಧದ ಆರೋಪಕ್ಕೆ ಕ್ಷಮೆ ಕೋರಿದ ಸ್ನೇಹಮಯಿ ಕೃಷ್ಣ*

ಪ್ರಗತಿವಾಹಿನಿ ಸುದ್ದಿ: ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ ನಂತರ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ವಿರುದ್ಧ ಮಾಡಿದ್ದ ಆರೋಪಗಳಿಗೆ ಅವರು ಸಾರ್ವಜನಿಕವಾಗಿ ಕ್ಷಮೆ ಕೋರಿದ್ದಾರೆ.


ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಬೆಂಗಳೂರು ಸೈಬರ್ ಠಾಣೆಯಲ್ಲಿ ವಿಚಾರಣೆ ಬಳಿಕ, “ಶಾಲಿನಿ ರಜನೀಶ್ ಅವರ ಕುರಿತು ವಿನೋದ್ ಎಂಬಾತ ತಪ್ಪು ಮಾಹಿತಿ ನೀಡಿದ್ದಾನೆ ಎಂಬುದು ತಿಳಿದುಬಂದಿದೆ. ನನ್ನಿಂದಾದ ತಪ್ಪಿಗೆ ನಾನು ಕ್ಷಮೆ ಕೇಳುತ್ತೇನೆ” ಎಂದು ತಿಳಿಸಿದ್ದಾರೆ.

Home add -Advt


ಆರೋಪಗಳಿಂದ ಸಂಚಲನ
ಸ್ನೇಹಮಯಿ ಕೃಷ್ಣ ಮೊದಲು ಮಾಡಿದ ಆರೋಪದಲ್ಲಿ, ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ಅವರು ಬಡ್ತಿ ಪಡೆಯಲು ಮುಖ್ಯ ಕಾರ್ಯದರ್ಶಿಗೆ ₹1.60 ಕೋಟಿ ಲಂಚ ನೀಡಿದ್ದಾರೆ ಎಂದು ಹೇಳಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ ಹಣ ಸಾಗಣೆ ನಡೆದ ಕಾರಿನ ಭಾವಚಿತ್ರವನ್ನೂ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು.


ಇದಕ್ಕೂ ಮೊದಲು ಅವರು ಸಾಮಾಜಿಕ ಜಾಲತಾಣದಲ್ಲಿ, ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯಗಳಿಗೆ ಸಲ್ಲಿಸಿದ ದೂರುಗಳ ದಾಖಲೆಗಳನ್ನೂ ಹಂಚಿಕೊಂಡಿದ್ದರು. ಜೊತೆಗೆ, ಈ ಹಣ ವ್ಯವಹಾರ ಮೈಸೂರು ನಗರದಲ್ಲಿ ನಡೆದಿರುವುದಾಗಿ ಹೇಳಿಕೆ ನೀಡಿದ್ದರು.


ಪ್ರಕರಣದ ಹಿನ್ನೆಲೆ
ಪೋಸ್ಟ್‌ಗಳಲ್ಲಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಸಂಬಂಧಿತ ಬಡ್ತಿ ವಿಚಾರದಲ್ಲಿ ಕೋಟ್ಯಾಂತರ ಹಣ ವ್ಯವಹಾರ ನಡೆದಿರುವ ಮಾಹಿತಿ ದೊರೆತಿದೆ ಎಂದು ಅವರು ಹೇಳಿದ್ದರು. ಈ ಆರೋಪಗಳು ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದವು.

ಬಂಧನ ಮತ್ತು ವಿಚಾರಣೆ ನಂತರ, ತಪ್ಪು ಮಾಹಿತಿಯ ಆಧಾರದಲ್ಲಿ ಆರೋಪ ಮಾಡಿದ್ದಾಗಿ ಒಪ್ಪಿಕೊಂಡಿರುವ ಸ್ನೇಹಮಯಿ ಕೃಷ್ಣ, ಮುಖ್ಯ ಕಾರ್ಯದರ್ಶಿಗೆ ಕ್ಷಮೆ ಕೇಳಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ.

Related Articles

Back to top button