*ಸಮತೋಲಿತ ರಸಗೊಬ್ಬರಗಳ ಬಳಕೆಯಿಂದ ಮಣ್ಣಿನ ಸತ್ವರಕ್ಷಣೆ: ಹೆಚ್.ಡಿ.ಕೋಳೆಕರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೃಷಿಯಲ್ಲಿ ಮಿತಿಮೀರಿದ ಯೂರಿಯಾ ಹಾಗೂ ರಾಸಾಯನಿಕ ಪೀಡೆನಾಶಕಗಳ ಬಳಕೆಯು ಪರಿಸರ ಹಾಗೂ ಮಾನವನ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಲ್ಲದೇ ಭೂಮಿಯ ಫಲವತ್ತತೆಯೂ ಕೂಡ ಕ್ಷೀಣಿಸುತ್ತಿದೆ. ಆದ್ದರಿಂದ ಆರೋಗ್ಯಕರ ಮಣ್ಣು ಹಾಗೂ ಪರಿಸರವನ್ನು ಮುಂದಿನ ಪೀಳಿಗೆಗೆ ಬಿಟ್ಟುಹೋಗಲು ವ್ಯವಸ್ಥಿತ ಹಾಗೂ ವೈಜ್ಞಾನಿಕ ಕೃಷಿಯ ಅವಶ್ಯಕತೆ ಇದೆ ಎಂದು ಬೆಳಗಾವಿ ಜಂಟಿ ಕೃಷಿ ನಿರ್ದೇಶಕರು ಹೆಚ್.ಡಿ.ಕೋಳೆಕರ ಹೇಳಿದರು.
ಬೆಳಗಾವಿ ತಾಲೂಕಿನ ಧಾಮಣೆ (ಎಸ್.) ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ ಭೂಮಿ ತಾಯಿ ರಕ್ಷಣಾ ಕಣ್ಣಾವಲು ಸಮಿತಿಯ ಸಭೆ, ಬೀಜೋಪಚಾರ ಆಂದೋಲನ ಹಾಗೂ ಸುರಕ್ಷಿತ ಕೀಟನಾಶಕ ಬಳಕೆ ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಾ ಸಹಾಯಕ ಕೃಷಿ ನಿರ್ದೇಶಕರಾದ ಎಂ.ಎಸ್. ಪಟಗುಂದಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕೃಷಿಯಲ್ಲಿ ಅತಿಯಾದ ಯೂರಿಯಾ ಬಳಕೆಯಿಂದ ಆಗುವ ಹಾನಿಯ ಬಗ್ಗೆ ಮಾತನಾಡುತ್ತಾ ಯೂರಿಯಾದ ರಸಗೊಬ್ಬರಕ್ಕೆ ಬದಲಾಗಿ ಬಳಸಬಹುದಾದ ಇತರೆ ಸಂಯುಕ್ತ ರಸಗೊಬ್ಬರಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಕೆ.ಎಲ್.ಇ. ಕೆ.ವಿ.ಕೆ. ಮತ್ತಿಕೊಪ್ಪ ವಿಜ್ಞಾನಿ ಎಸ್.ಎಮ್.ವಾರದ ಅವರು ಬೀಜೋಪಚಾರದ ಮಹತ್ವ, ವಿಧಾನ ಹಾಗೂ ಪ್ರಯೋಜನಗಳ ಕುರಿತು ಸವಿವರವಾಗಿ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಗ್ರಾಮದ ಪಿ.ಕೆ.ಪಿ.ಎಸ್. ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿ.ಕೆ.ಪಿ.ಎಸ್. ಅಧ್ಯಕ್ಷರಾದ ಶ್ರೀಮಂತಗೌಡಾ ಪಾಟೀಲ, ಗ್ರಾಮ ಆಡಳಿತ ಅಧಿಕಾರಿ ಸಿದ್ದು ಮರಾಠ, ಗ್ರಾಮದ ಪ್ರಗತಿಪರ ರೈತರು, ರೈತ ಮಹಿಳೆಯರು, ಕೃಷಿ ಸಖಿಯರು, ಪರಿಕರ ಮಾರಾಟಗಾರರು ಹಾಜರಿದ್ದರು.



