Latest

*ಪೊದೆಯಲ್ಲಿ ಪತ್ತೆಯಾಯ್ತು ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯ ರುಂಡ*

ಪ್ರಗತಿವಾಹಿನಿ ಸುದ್ದಿ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಮೀನಾಳ ರುಂಡ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಧಿಸಿದಂತೆ ವಿದ್ಯಾರ್ಥಿಯ ರುಂಡ ಸೂರ್ಲಬ್ಬಿ ಗ್ರಾಮದ ಪೊದೆಯಲ್ಲಿ ಪತ್ತೆಯಾಗಿದೆ.

ಕೊಡಗು ಜಿಲ್ಲೆಯ ಸೂರ್ಲಬ್ಬಿ ಗ್ರಾಮದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಮೀನಾಳನ್ನು ಮೇ 9ರಂದು ಪ್ರಕಾಶ್ ಅಲಿಯಾಸ್ ಓಂಕಾರಪ್ಪ ಎಂಬಾತ ರುಂಡ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದ. ಬಳಿಕ ರುಂಡವನ್ನು ಬೆಟ್ಟದಲ್ಲಿ ಬಿಸಾಕಿ ಪರಾರಿಯಾಗಿದ್ದ.

ಎರಡು ದಿನಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಪ್ರಕಾಶ್ ಅಲಿಯಾಸ್ ಓಂಕಾರಪ್ಪನನ್ನು ಕೊಡಗು ಜಿಲ್ಲೆಯ ಸೋಮವಾರಪೇಟೆಯ ಹಮ್ಮಿಯಾಲ ಗ್ರಾಮದ ಬೆಟ್ಟದಲ್ಲಿ ಅಡಗಿ ಕುಳಿತಿದ್ದವನನ್ನು ಪೊಲೀಸರು ಇಂದು ಬಂಧಿಸಿದ್ದರು. ವಿದ್ಯಾರ್ಥಿನಿ ಮೀನಾಳ ರುಂಡವನ್ನು ಬೆಟ್ಟದಲ್ಲಿ ಎಸೆದಿದ್ದಾಗಿ ಆರೋಪಿ ಹೇಳಿದ್ದ.

ವಿದ್ಯಾರ್ಥಿನಿಯ ರುಂಡಕ್ಕಾಗಿ ಹುಡುಕಾಡಿದ ಪೊಲೀಸರಿಗೆ ಆಕೆಯನ್ನು ಹತ್ಯೆ ಮಾಡಿದ್ದ ಸೂರ್ಲಬ್ಬಿ ಗ್ರಾಮದ ಜಾಗದಿಂದ 300 ಮೀಟರ್ ದೂರದಲ್ಲಿ ಪೊದೆಯೊಂದರಲ್ಲಿ ರುಂಡ ಪತ್ತೆಯಾಗಿದೆ.

ಎಸ್.ಎಸ್.ಎಲ್ ಸಿ ಫಲಿತಾಂಶದ ದಿನ ವಿದ್ಯಾರ್ಥಿನಿ ಮೀನಾಳ ಜೊತೆ ಆರೋಪಿ ಪ್ರಕಾಶ್ ಅಲಿಯಾಸ್ ಓಂಕಾರಪ್ಪನ ನಿಶ್ಚಿತಾರ್ಥವಾಗಿತ್ತು. ಅಪ್ರಾಪ್ತ ಬಾಲಕಿಗೆ ನಿಶ್ಚಿತಾರ್ಥ ವಿಷಯ ತಿಳಿದ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ನಿಶ್ಚಿತಾರ್ಥ ನಿಲ್ಲಿಸಿದ್ದರು. ಬಾಲಕಿಗೆ 18 ವರ್ಷವಾಗುವವರೆಗೆ ಮದುವೆ ಮಾಡುವಂತಿಲ್ಲ ಎಂದು ತಿಳಿಸಿದ್ದರು. ಆದರೆ ಅದೇ ದಿನದಂದು ಪ್ರಕಾಶ್ ಅಲಿಯಾಸ್ ಓಂಕಾರಪ್ಪ ವಿದ್ಯಾರ್ಥಿನಿ ಮೀನಾಳನ್ನು ರುಂಡ ಕತ್ತರಿಸಿ ಕೊಲೆ ಮಾಡಿದ್ದ. ಆರೊಪಿಯ ಕೃತ್ಯಕ್ಕೆ ನಿಖರ ಕಾರಣ ತನಿಖೆಯಿಂದಷ್ಟೇ ತಿಳಿಯಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button