
ಪ್ರಗತಿವಾಹಿನಿ ಸುದ್ದಿ: ಜಗಳ ಬಿಡಿಸಲು ಹೋದ 16 ವರ್ಷದ ಎಸ್ಎಸ್ಎಲ್ ಸಿ ವಿದ್ಯಾರ್ಥಿ ಮೇಲೆ ಅನ್ಯ ಕೋಮಿನ ಬಾಲಕರು ಹಲ್ಲೆಗೆ ನಡೆಸಿದ ಪರಿಣಾಮ ಬಾಲಕ ಸಾವಪ್ಪಿದ ಘಟನೆ ನಡೆದಿದೆ.
ಶಿವಮೊಗ್ಗ ನಗರದ ಸೂಳೆಬೈಲು ಬಡಾವಣೆಯಲ್ಲಿ ಸೋಮವಾರ ಸಂಜೆ ಭೀಕರ ಘಟನೆಯೊಂದು ನಡೆದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.
ಮೃತ ಬಾಲಕನನ್ನು ಸೂಳೆಬೈಲು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ ಸಂಕೇತ್, ವಿಶೇಷ ತರಗತಿ ಮುಗಿಸಿ ಹೊರಬಂದಾಗ ಕೆಲ ವಿದ್ಯಾರ್ಥಿಗಳ ನಡುವೆ ಜಗಳ ನಡೆಯುತ್ತಿತ್ತು. ಪರಿಸ್ಥಿತಿ ತೀವ್ರವಾಗುತ್ತಿದ್ದಂತೆ ಅದನ್ನು ಬಿಡಿಸಲೆಂದು ಸಂಕೇತ್ ಮಧ್ಯಪ್ರವೇಶಿಸಿದ್ದಾನೆ. ಆದರೆ, ಇದೇ ವೇಳೆ ನಾಲ್ವರು ವಿದ್ಯಾರ್ಥಿಗಳು ಅವನ ಮೇಲೆ ಹಲ್ಲೆ ನಡೆಸಿದರೆಂದು ತಿಳಿದುಬಂದಿದೆ.
ಹಲ್ಲೆಯ ವೇಳೆ ಎದೆಯ ಭಾಗಕ್ಕೆ ಬಲವಾದ ಹೊಡೆತ ಬಿದ್ದ ಪರಿಣಾಮ ಸಂಕೇತ್ ಅಸ್ವಸ್ಥನಾಗಿ ಕುಸಿದು ಬಿದ್ದಿದ್ದಾನೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆಯೇ ಅವನು ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಘಟನೆ ಸಂಬಂಧಿಸಿ ತುಂಗನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಇಬ್ಬರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ತಿಳಿಸಿದ್ದಾರೆ.
ಮೃತ ಸಂಕೇತ್ ಕುಟುಂಬದವರ ಆಕ್ರಂದನ ಮನಮುಗಿಲು ಮುಟ್ಟಿದ್ದು, ಸಂಕೇತ್ ಓದಿನಲ್ಲಿ ಮುಂಚೂಣಿಯಲ್ಲಿದ್ದ ಶಾಂತ ಸ್ವಭಾವದ ವಿದ್ಯಾರ್ಥಿ ಎಂದು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.
ಹಲ್ಲೆಗೊಳಗಾದ ಗಿರೀಶ್ ಹೇಳಿದ್ದೇನು?
ಸ್ಕೂಲಿಂದ ಹೊರಗಡೆ ಬಂದಾಗ ಫೀಲ್ಡ್ ಗೆ ಕರೆದುಕೊಂಡು ಹೋಗಿ ಐದಾರು ಜನರು ಸಿಕ್ಕಾಪಟ್ಟೆ ಹೊಡೆದಿದ್ದಾರೆ. ನನಗೆ ಹೊಡೆತ ಬಿದ್ದ ತಕ್ಷಣ ಪ್ರಜ್ಞೆ ತಪ್ಪಿದಂತಾಯಿತು. ಪ್ರಜ್ಞೆ ಬಂದ ನಂತರ ಸಂಕೇತ ಕೆಳಗಡೆ ಬಿದ್ದಿದ್ದನ್ನು ನೋಡಿ ಸರ್ ಅವರನ್ನು ಕರೆದುಕೊಂಡು ಬಂದೆ. ಸರ್ ಕೂಡಲೇ ಸಂಕೇತ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಸೂಳೇಬೈಲು ಈದ್ಗಾ ನಗರದ ಹುಡುಗರಿಂದ ಹಲ್ಲೆ ನಡೆದಿದೆ. 10ನೇ ತರಗತಿ ಫೇಲ್ ಆಗಿರುವ ವಿದ್ಯಾರ್ಥಿಗಳು 9ನೇ ತರಗತಿಯಲ್ಲಿ ಕುಳಿತುಕೊಂಡು ಗಲಾಟೆ ಮಾಡುತ್ತಾರೆ.
ಶಾಲೆಯ ಹೆಡ್ ಮಾಸ್ಟರ್ ಇದ್ರೂ ಗಲಾಟೆ ಮಾಡ್ತಾರೆ. ಬೆಳಗ್ಗೆ 8:30 ಗೆ ಹೋದವರು ರಾತ್ರಿ 9:30ವರೆಗೂ ಶಾಲೆ ಇರುತ್ತದೆ. ಸ್ಪೆಷಲ್ ಕ್ಲಾಸ್ ಇರುವ ಹಿನ್ನೆಲೆಯಲ್ಲಿ ಪೋಷಕರು ಬಂದು ಕರೆದುಕೊಂಡು ಹೋಗುತ್ತಾರೆ ಎಂದು ಗಿರೀಶ್ ಹೇಳಿದ್ದಾನೆ.




