*ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಸ್ವಾಮೀಜಿ ಮಠದಲ್ಲಿ ಲಾಂಗು, ಮಚ್ಚುಗಳು ಪತ್ತೆ*

ಕಾಮುಕ ಸ್ವಯಂಘೋಷಿತ ಸ್ವಾಮೀಜಿ ಅರೆಸ್ಟ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸ್ವಯಂ ಘೋಷಿತ ಸ್ವಾಮೀಜಿ ಮಠಕ್ಕೆ ಬರುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಕಿಡ್ನಾಪ್ ಮಾಡಿ, ರಾಯಚೂರು ಹಾಗೂ ಬಾಲಕೋಟೆಯ ಲಾಡ್ಜ್ ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ. ಆತನನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರು ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆ, ರಾಯಭಾಗ ತಾಲೂಕಿನ ಮೆಖಳಿ ಗ್ರಾಮದ ಮಠದ ಲೋಕೇಶ್ವರ ಸ್ವಾಮಿ ಮೂಡಲಗಿ ತಾಲೂಕಿನ ಬಾಲಕಿಯ ಮೇಲೆ ಅತ್ಯಾಚಾರ ವೆಸಗಿರುವ ಆರೋಪದಡಿ ಪ್ರಕರಣ ದಾಖಲಾಗಿದೆ.
ಮನೆಗೆ ಹೊರಟ ಬಾಲಕಿ ಬಳಿ ತಾನು ಕುಟುಂಬಕ್ಕೆ ಪರಿಚಯಸ್ತ ಸ್ವಾಮೀಜಿ ಎಂದು ಮನೆಗೆ ಬಿಡುವುದಾಗಿ ಕಾರಲ್ಲಿ ಕೂರಿಸಿಕೊಂಡು ಮನೆ ಬಂದರು ಗಾಡಿ ನಿಲ್ಲಿಸದೆ ಬಾಗಲಕೋಟೆ ಮೂಲಕ ರಾಯಚೂರಿನತ್ತ ಪ್ರಯಾಣ ಬೆಳೆಸಿ ಲಾಡ್ಜ್ ಒಂದರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ವೆಸಗಿ ಅಲ್ಲಿಂದ ಮಹಾಲಿಂಗಾಪುರದ ಬಸ್ ನಿಲ್ದಾಣದಲ್ಲಿ ಬಾಲಕಿಯನ್ನ ಬಿಟ್ಟು “ಮನೆಯಲ್ಲಿ ವಿಷಯ ಹೇಳಿದರೆ ಜೀವ ಸಹಿತ ಬಿಡಲ್ಲ” ಎಂದು ಧಮ್ಕಿ ಹಾಕಿದನಂತೆ. ನೊಂದ ಬಾಲಕಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾಳೆ ಎಂದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಮಠದಲ್ಲಿ ಲಾಂಗು ಮಚ್ಚುಗಳು ಪತ್ತೆಯಾಗಿದ್ದು, ಇವುಗಳ ಕುರಿತು ಕೂಡ ತನಿಖೆ ನಡೆಸಲಾಗುವುದು. ಲಾಡ್ಜ್ ಸೇರಿದಂತೆ ಇನ್ನುಳಿದ ಕಡೆಗಳಿಂದ ಮಾಹಿತಿಯನ್ನು ಪಡೆದು, ಸೋಮವಾರ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿ, ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲಾಗುವುದು ಎಂದರು.