ಶಾಸಕ ಬಂದ್ರೂ ಬಡಿಯುತ್ತೇನೆ, ಅಂಬಿರಾವ್ ಬಂದ್ರೂ ಬಡಿಯುತ್ತೇನೆ

ಪ್ರಗತಿವಾಹಿನಿ ಸುದ್ದಿ, ಅಂಕಲಗಿ –ಜಾರಕಿಹೊಳಿ ಸಹೋದರರ ಜಗಳ ಈಗ ಕಾರ್ಯಕರ್ತರ ಮಧ್ಯೆ ಮಾರಾ ಮಾರಿ ಹಂತಕ್ಕೆ ಹೋಗಿದೆ. ರಮೇಶ ಜಾರಕಿಹೊಳಿ ಅಳಿಯ ಅಂಬಿರಾವ್ ಪಾಟೀಲ್ ಮತ್ತು ಕಾರ್ಯಕರ್ತ ರಾಜು ತಳವಾರ ಎನ್ನುವವರು ಕಾಂಗ್ರೆಸ್ ಗೋಕಾಕ ಗ್ರಾಮೀಣ ಅಧ್ಯಕ್ಷರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿಲಾಗಿದ್ದು, ಶನಿವಾರ ಪ್ರಕರಣ ವಿಕೋಪಕ್ಕೆ ಹೋಗಿದೆ.
ಘಟನೆಯನ್ನು ಖಂಡಿಸಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಲಖನ್ ಜಾರಕಿಹೊಳಿ ಅಂಕಲಗಿ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಎಚ್ಚರಿಕೆ ನೀಡಿ ಬಂದಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ರಾಜು ತಳವಾರ ನಿರಂತರವಾಗಿ ಹಲ್ಲೆ ಮಾಡುತ್ತಿದ್ದಾನೆ. ಇದು ಮುಂದುವರಿದರೆ ನಾವೇ ಅವನ ಮನೆಗೆ ಹೋಗಿ ಬಡಿಯುತ್ತೇವೆ. ಶಾಸಕ ಬಂದ್ರೂ ಬಡಿಯುತ್ತೇನೆ. ಅಂಬಿರಾವ್ ಬಂದ್ರೂ ಬಡಿಯುತ್ತೇನೆ. ನೀವು ಹೇಗೆ ಸಂಬಾಳಿಸುತ್ತೀರಿ ಗೊತ್ತಿಲ್ಲ ಎಂದು ಸತೀಶ್ ಎಚ್ಚರಿಸಿದರು.
ಕಳೆದ 6 ತಿಂಗಳಿನಿಂದಲೂ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ, ಬಯ್ದಾಟ ನಡೆಯುತ್ತಿದೆ. ಇದಕ್ಕೆ ನ್ಯಾಯ ಸಿಗುವವರೆಗೂ ನಾವು ಬಿಡುವುದಿಲ್ಲ. ಪೊಲೀಸ್ ಠಾಣೆಯಲ್ಲೇ ಧರಣಿ ನಡೆಸಲೂ ಹಿಂಜರಿಯುವುದಿಲ್ಲ. ನಿಮ್ಮ ಸರ್ವೀಸ್ ಗಿಂತ ಹೆಚ್ಚು ನನಗೆ ಅನುಭವ ಇದೆ. ನೀವು ಕ್ರಮಕೈಗೊಳ್ಳದಿದ್ದಲ್ಲಿ ಏನು ಮಾಡಬೇಕೆಂದು ನನಗೆ ಗೊತ್ತಿದೆ ಎಂದೂ ಸತೀಶ್ ಜಾರಕಿಹೊಳಿ ಪೊಲೀಸರಿಗೆ ಎಚ್ಚರಿಸಿದರು.
ಈ ವೇಳೆ ಮಾತನಾಡಿದ ಲಖನ್ ಜಾರಕಿಹೊಳಿ, 20 ವರ್ಷದಿಂದ ಇದೇ ಆಗುತ್ತಿದೆ. ಅದನ್ನು ನೋಡಿಯೇ ನಾವು ಅವರನ್ನು ಬಿಟ್ಟಿದ್ದೇವೆ. ಇದು ಮುಂದುವರಿಯಲು ಅವಕಾಶ ಕೊಡಬೇಡಿ ಎಂದು ಎಚ್ಚರಿಸಿದರು. ಈ ವೇಳೆ ನೂರಾರು ಕಾರ್ಯಕರ್ತರು ಅಲ್ಲಿ ಜಮಾಯಿಸಿದ್ದರು.




