*ಎಂಇಎಸ್ ಸಂಘಟನೆ ನಿಷೇಧಿಸುವಂತೆ ಆಗ್ರಹ*

ಪ್ರಗತಿವಾಹಿನಿ ಸುದ್ದಿ: ನವೆಂಬರ್ 1 ಕರ್ನಾಟಕ ರಾಜ್ಯೋತ್ಸವದಂದು ಸಮಾಜ ದ್ರೋಹಿ ಎಂ ಇ ಎಸ್ ಗೆ ಕರಾಳ ದಿನಾಚರಣೆಗೆ ಅನುಮತಿ ನೀಡಬಾರದು ಮತ್ತು ಎಂಇಎಸ್ ಸಂಘಟನೆಯನ್ನು ನಿಷೇಧಿಸುವಂತೆ ಆಗ್ರಹಿಸಿ ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಮೇಗೌಡರ ಬಣ) ಜಿಲ್ಲಾಧ್ಯಕ್ಷ ವಾಜಿದ ಹಿರೇಕುಡಿ ನೇತೃತ್ವದಲ್ಲಿ ಇಂದು ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಈ ವೇಳೆ ಡಿಸಿಪಿ ರೋಹನ್ ಜಗದೀಶ ಅವರು ಮನವಿ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಕರವೇ ಮುಖಂಡರು, ಕನ್ನಡಿಗರ ಈ ಸಡಗರವನ್ನು ನೋಡಲಾಗದ ಕೆಲ ಸಮಾಜ ಘಾತಕ ಶಕ್ತಿಗಳು, ಕನ್ನಡ ದ್ವೇಶಿಗಳು, ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳು ಮಹಾರಾಷ್ಟ್ರ ಏಕೀಕರಣ ಸಮೀತಿ (ಎಂ.ಇ.ಎಸ್) ಹೆಸರಿನಲ್ಲಿ ಇದೇ ದಿನದಂದು ದೊಂಬಿಯೆಬ್ಬಸಿ, ಶಾಂತಿ ಪ್ರೀಯ ಕನ್ನಡಿಗರಲ್ಲಿ ಅಶಾಂತಿ ಮೂಡಿಸುವ ಮತ್ತು ದುಷ್ಕೃತ್ಯ ವೆಸಗಿ ತಮ್ಮ ಬೇಳೆ ಬೆಳಿಸಿಕೊಳ್ಳುವ ಷಡ್ಯಂತ್ರ ರೂಪಿಸಿದ್ದಾರೆ. ಕರ್ನಾಟಕ ಸರ್ಕಾರ ಇಂತಹ ದುಷ್ಟ ಶಕ್ತಿಗಳಿಗೆ ಕರಾಳ ದಿನಾಚರನೆಗೆ ಅನುಮತಿ ನೀಡಬಾರದು ಮತ್ತು ಎಂ.ಇ.ಎಸ್ ಸಂಘಟನೆಯನ್ನು ನಿಷೇಧಿಸುವಂತೆ ಆಗ್ರಹಿಸಿದರು.




