Kannada NewsKarnataka NewsLatest

*ಎತ್ತಿನಹೊಳೆ ಯೋಜನೆ: ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಐಐಎನ್ ಪ್ಲಾಟಿನಂ 2025 ರಾಷ್ಟ್ರೀಯ ಪ್ರಶಸ್ತಿ*

ಅಕ್ವಡಕ್ಟ್ ಇಂಜಿನಿಯರಿಂಗ್ ತಂತ್ರಜ್ಞಾನದ ಮೂಲಕ ಆರೋಗ್ಯ, ಸುರಕ್ಷತೆ, ಪರಿಸರ ಸ್ನೇಹಿ ಮಾದರಿ ಯೋಜನೆ ಜಾರಿಗೆ ಪುರಸ್ಕಾರ

Home add -Advt

ಪ್ರಗತಿವಾಹಿನಿ ಸುದ್ದಿ: ಅಕ್ವಡಕ್ಟ್ ಇಂಜಿನಿಯರಿಂಗ್ ತಂತ್ರಜ್ಞಾನದ ಮೂಲಕ ಆರೋಗ್ಯ, ಸುರಕ್ಷತೆ, ಪರಿಸರ ಸ್ನೇಹಿ ಮಾದರಿಯಲ್ಲಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತಕ್ಕೆ (VJNL) 2025ನೇ ಸಾಲಿನ ಪ್ರತಿಷ್ಠಿತ ಐಐಎನ್ ಪ್ಲಾಟಿನಮ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ಮೂಲಸೌಕರ್ಯ ಕ್ಷೇತ್ರದಲ್ಲಿ ಕೌಶಲ್ಯ ಅಭಿವೃದ್ಧಿ, ತಂತ್ರಜ್ಞಾನ ಆವಿಷ್ಕಾರಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ರೂಪಿತವಾಗಿರುವ ಇನ್ಫ್ರಾಸ್ಟ್ರಕ್ಚರ್ ಸ್ಕಿಲ್ ಡೆವಲಪ್ಮೆಂಟ್ ಅಕಾಡಮಿ (ISDA) ಸಂಸ್ಥೆಯು ವಿಜೆಎನ್ಎಲ್ ಗೆ ಕಳೆದ ಜೂನ್ 14 ರಂದು ನವದೆಹಲಿಯಲ್ಲಿ ಈ ಪ್ರಶಸ್ತಿಯನ್ನು ನೀಡಿದೆ.

ವಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಸಣ್ಣಚಿತ್ತಯ್ಯ ಹಾಗೂ ಅಧಿಕಾರಿಗಳ ತಂಡ ಮಂಗಳವಾರ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶಸ್ತಿ ಫಲಕದೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಗುರುತ್ವಾ ಕಾಲುವೆ ಸರಪಳಿಯ 199.620 ಕಿ.ಮೀ ನಿಂದ 210.090 ಕಿ.ಮೀ ವರೆಗೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಸಮೀಪ 10.47 ಕಿ.ಮೀ ಉದ್ದದ 3300 ಕ್ಯೂಸೆಕ್ ಸಾಮರ್ಥ್ಯದ ಬೃಹತ್ ಮೇಲ್ಗಾಲುವೆ ನಿರ್ಮಾಣ ಕಾಮಗಾರಿಯನ್ನು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದಿಂದ 2018 ರಲ್ಲಿ ಆರಂಭಿಸಿ 2023ರಲ್ಲಿ ಪೂರ್ಣಗೊಳಿಸಲಾಗಿದೆ.

ಎತ್ತಿನಹೊಳೆ ಯೋಜನೆಯಲ್ಲಿ “ಅಕ್ವಡಕ್ಟ್ (ಬೃಹತ್ ಮೇಲ್ಗಾಲುವೆ) ಇಂಜಿನಿಯರಿಂಗ್ ತಂತ್ರಜ್ಞಾನ”ದ ಮೂಲಕ 10.47 ಕಿ.ಮೀ ಉದ್ದದ ಉನ್ನತ ಗುರುತ್ವಾಕರ್ಷಣ ಕಾಲುವೆ ಹಾಗೂ 520 ವಿಶೇಷ ಸೇತುಬಂಧಗಳನ್ನು ನಿರ್ಮಿಸಲಾಗಿದೆ. ಈ ಯೋಜನೆಯಲ್ಲಿ ಅವಳಿ ತೊಟ್ಟಿಗಳು, ಸರ್ವೀಸ್ ರಸ್ತೆಗಳ ಸಮನ್ವಯತೆಯಿಂದ ಕಾರ್ಯಾಚರಣೆ ದಕ್ಷತೆಗಾಗಿ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.

10.47 ಕಿ.ಮೀ ಉದ್ದದ ಬೃಹತ್ ಮೇಲ್ಗಾಲುವೆ ಕಾಮಗಾರಿಯನ್ನು ಪೂರ್ಣಗೊಳಿಸಲು 1162.69 ಕೋಟಿ ಹಾಗೂ ಭೂಸ್ವಾಧೀನಕ್ಕೆ 40.99 ಕೋಟಿ ಸೇರಿ ಒಟ್ಟು 1203.68 ಕೋಟಿ ರೂಪಾಯಿ ವೆಚ್ಚವಾಗಿದೆ.

Related Articles

Back to top button