
ಪ್ರಗತಿವಾಹಿನಿ ಸುದ್ದಿ: ಪೊಲೀಸ್ ಠಾಣೆಯ ಬಳಿಯೇ ನಡು ರಸ್ತೆಯಲ್ಲಿ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದು ಪತಿ ಮಹಾಶಯ ಪರಾರಿಯಾಗಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.
ಸೆಲ್ವಿನ್ ಫ್ರಾನ್ಸಿಸ್ ಪತ್ನಿಯನ್ನು ಕೊಂದ ಪತಿ. ಪತಿ-ಪತ್ನಿ ನಡುವೆ ಭಿನಾಭಿಪ್ರಾಯವುಂಟಾಗಿ ಕಳೆದ ಆರು ತಿಂಗಳಿಂದ ಪತ್ನಿ ಪತಿಯಿಂದ ದೂರವಿದ್ದಳು. ಆದರೆ ಪತಿ ಮಹಾಶಯ ಆಕೆಯ ಕಚೇರಿ ಬಳಿ ಬಂದು ತೊಂದರೆಕೊಡುತ್ತಿದ್ದ ಎನ್ನಲಾಗಿದೆ. ಅಲ್ಲದೇ ಇಂದು ಕೂಡ ಪತ್ನಿ ಜೊತೆ ಸೆಲ್ವಿನ್ ಫ್ರಾನ್ಸಿಸ್ ಜಗಳವಾಡಿದ್ದನಂತೆ. ಪತಿಯ ಕಾಟಕ್ಕೆ ಬೇಸತ್ತು ಇಂದು ಪತ್ನಿ ಪತಿ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ದೂರು ಹಿನ್ನೆಲೆಯಲ್ಲಿ ಪೊಲೀಸರು ಸೆಲ್ವಿನ್ ಫ್ರಾನ್ಸಿಸ್ ಗೆ ಕರೆ ಮಾಡಿದ್ದಾರೆ. ಆದರೆ ಪೊಲೀಸರಿಗೆ ತಾನು ಬಹಳ ದೂರದಲ್ಲಿದ್ದೇನೆ ಎಂದು ಹೇಳಿದ್ದಾನೆ. ಅಸಲಿಗೆ ಸೆಲ್ವಿನ್ ಫ್ರಾನ್ಸಿಸ್ ಅದೇ ಠಾಣೆಯ ಬಳಿಯೆ ಬಂದು ಪತ್ನಿ ಪೊಲೀಸ್ ಠಾಣೆಯಿಂದ ಹೊರಬರುವುದನ್ನೇ ಕಾದಿದ್ದ. ಪತ್ನಿ ಪೊಲೀಸ್ ಠಾಣೆಯಿಂದ ಹೊರ ಬರುತ್ತಿದ್ದಂತೆ ಕೆಲದೂರದವರೆ ಹೋಗಿ ಬಳಿಕ ಪತ್ನಿ ಜೊತೆ ಮಾತನಾಡಿ ಸ್ವಲ್ಪ ದೂರ ಆಕೆ ಜೊತೆ ಸಾಗಿದ್ದಾನೆ. ಬಳಿಕ ಪತ್ನಿಗೆ ಮನಬಂದಂತೆ ಇರಿದು ಹತ್ಯೆಗೈದು ಸ್ಥಳದಿಂದ ಪರಾರಿಯಾಗಿದ್ದಾನೆ.
ಪರಾರಿಯಾಗಿರುವ ಸೆಲ್ವಿನ್ ಫ್ರಾನ್ಸಿಸ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.