
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಮೂರ್ತಿ ತಯಾರಕರು ಹಾಗೂ ಸಾರ್ವಜನಿಕರಲ್ಲಿ, ಗಣೇಶೋತ್ಸವ ಮಹಾ ಮಂಡಳಿಗಳಿಗೆ ಮಹಾನಗರ ಪಾಲಿಕೆಯಿಂದ ಮಹತ್ವದ ಸೂಚನೆ ನೀಡಲಾಗಿದೆ.
ಪಿ.ಓ.ಪಿ.ಯಿಂದ ತಯಾರಿಸಲಾದ ಅಥವಾ ಬಣ್ಣಲೇಪಿತ ವಿಗ್ರಹಗಳನ್ನು ತಯಾರಿಸುವುದು ಮತ್ತು ಜಲಮೂಲಗಳಲ್ಲಿ ನದಿ, ಕಾಲುವೆ ಅಥವಾ ಬಾವಿಗಳಲ್ಲಿ ವಿಸರ್ಜಿಸುವುದನ್ನು ನಿರ್ಬಂಧಿಸಲಾಗಿದ್ದು, ಕಾರಣ ಸಾರ್ವಜನಿಕರು ಮುಂಬರುವ ಗಣೇಶ ಹಬ್ಬದ ಪ್ರಯುಕ್ತ ಪಿ.ಓ.ಪಿ.ಯಿಂದ ತಯಾರಿಸಿದ ಅಥವಾ ಬಣ್ಣ ಲೇಪಿತ ವಿಗ್ರಹಗಳನ್ನು ಬಳಸದೇ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ವಿಗ್ರಹಗಳನ್ನು ಮಾತ್ರ ಬಳಸಲು ಕೋರಲಾಗಿದೆ.
ಮುಂಬರುವ ದಿನಗಳಲ್ಲಿ ಪಿ.ಓ.ಪಿ. ಬ್ಯಾಗ್ಗಳು ಹಾಗೂ ಪಿ.ಓ.ಪಿ.ಯಿಂದ ತಯಾರಿಸಿದ ಅಥವಾ ಬಣ್ಣ ಲೇಪಿತ ವಿಗ್ರಹಗಳು ಲಭ್ಯವಾದಲ್ಲಿ ಜಲಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯ್ದೆ 1974 ರ ಕಲಂ 45-ಎ ಅಡಿಯಲ್ಲಿ ಅವುಗಳನ್ನು ವಶಪಡಿಸಿಕೊಂಡು ನಿಯಮಾನುಸಾರ ದಂಡ ವಿಧಿಸುವ ಕ್ರಮ ಕೈಕೊಳ್ಳಲಾಗವುದು ಎಂದು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.