Kannada NewsKarnataka NewsLatestNationalPolitics

*ಗ್ಯಾರೆಂಟಿ ನೆಪದಲ್ಲಿ ಕಾರ್ಯಕರ್ತರ ಸಲಹುವ ಸರ್ಕಾರ: ಪ್ರಹ್ಲಾದ್ ಜೋಶಿ*

  • ಅನುಷ್ಠಾನ ಸಮಿತಿಗೆ ಮುಂಗಡ ಭತ್ಯೆ; ಗೃಹಲಕ್ಷ್ಮೀ ಕೃಪಾಕಟಾಕ್ಷ
  • ರಾಜ್ಯ ಸರ್ಕಾರದ ಕ್ರಮಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ಷೇಪ

ಪ್ರಗತಿವಾಹಿನಿ ಸುದ್ದಿ, ನವದೆಹಲಿ: ರಾಜ್ಯ ಕಾಂಗ್ರೆಸ್‌ ಸರ್ಕಾರ, ಗ್ಯಾರೆಂಟಿ ನೆಪದಲ್ಲಿ ತನ್ನ ಕಾರ್ಯಕರ್ತರನ್ನು ಸಲಹುತ್ತಿದೆ ಅಷ್ಟೇ! ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.

Home add -Advt

ಗ್ಯಾರೆಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಳೆದ ಮೂರು ತಿಂಗಳಿಂದಲೂ ಮಹಿಳೆಯರಿಗೆ ʼಗೃಹಲಕ್ಷ್ಮಿʼ ಹಣ ನೀಡಿಲ್ಲ. ಆದರೆ, ಗ್ಯಾರೆಂಟಿ ಅನುಷ್ಠಾನ ಸಮಿತಿಗೆ ಮಾತ್ರ 3 ತಿಂಗಳ ಮುಂಗಡ ಭತ್ಯೆ ಬಿಡುಗಡೆಗೆ ಆದೇಶಿಸಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ಸಿಗರಿಗೆ ʼಗೃಹಲಕ್ಷ್ಮಿʼ ವರ: ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರೆಂಟಿ ಸ್ಕೀಂಗಳು ಆ ಪಕ್ಷದ ಕಾರ್ಯಕರ್ತರಿಗೆ ಆದಾಯದ ಮೂಲವಾಗಿವೆ. ʼಗೃಹಲಕ್ಷ್ಮಿʼ ನಿಜಕ್ಕೂ ಆ ಪಕ್ಷದವರಿಗೆ ವರದಾನವಾಗಿದೆ, ವರಮಾನ ತರುವ ಯೋಜನೆಯಾಗಿದೆ ಎಂದಿದ್ದಾರೆ.

ಅನುಷ್ಠಾನ ಸಮಿತಿಗೆ ಮುಂಗಡ ಸಂಬಳವೇ?: ಕಾಂಗ್ರೆಸ್‌ ನಾಯಕರು ಅಧಿಕಾರಕ್ಕೆ ಬರುವ ಮುನ್ನ ʼಮಹಿಳೆಯರಿಗೆ ಪ್ರತಿ ತಿಂಗಳು ₹2,000 ಟಕಾಟಕ್ ಹಾಕೇಬಿಡ್ತೀವಿʼ ಎಂದರು. ಆದರೆ, ಮೂರ್ನಾಲ್ಕು ತಿಂಗಳುಗಟ್ಟಲೇ ಹಾಕದೆ ಸತಾಯಿಸುತ್ತಿದೆ. ಪ್ರಶ್ನಿಸಿದರೆ ಅದೇನು ಸಂಬಳವೇ? ಎನ್ನುತ್ತಾರೆ. ಹಾಗಾದರೆ ಗ್ಯಾರೆಂಟಿ ಅನುಷ್ಠಾನ ಸಮಿತಿಗೆ ಕೊಡುತ್ತಿರುವುದೇನು? ಎಂದು ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.

ಗ್ಯಾರೆಂಟಿ ಸಮಿತಿಗೇಕೆ ಮುಂಗಡ ಭತ್ಯೆ?: ಮಹಿಳೆಯರಿಗೆ ಪ್ರತಿ ತಿಂಗಳು ಕೊಡಲು ಹಣವಿಲ್ಲ. ಆದರೆ, ಗ್ಯಾರೆಂಟಿ ಅನುಷ್ಠಾನ ಸಮಿತಿಗೆ ಒಟ್ಟಿಗೇ 5 ತಿಂಗಳು (3 ತಿಂಗಳು ಮುಂಗಡ) ಭತ್ಯೆಯಾಗಿ ₹7.65 ಕೋಟಿ ಬಿಡುಗಡೆ ಮಾಡಿದೆ. ರಾಜ್ಯದ ಜನರಿಗೆ ಮಾತ್ರ ಆಗಸ ತೋರಿಸಿ ಮಂಕುಬೂದಿ‌ ಎರಚುತ್ತಿದೆ ಎಂದು ಆರೋಪಿಸಿದ್ದಾರೆ.

ಸಚಿವ‌ ಸತೀಶ್ ಜಾರಕಿಹೊಳಿ ʼಪ್ರತಿ ತಿಂಗಳು ‌ಗೃಹಲಕ್ಷ್ಮಿ ಹಣ ಕೊಡದಿದ್ರೆ ಆಕಾಶ ಏನೂ ಕಳಚಿ ಬೀಳಲ್ಲ’ ಎಂಬ ದುರಹಂಕಾರದ ಮಾತನಾಡುತ್ತಿದ್ದಾರೆ. ಮತ್ತೆ ಕೆಲವರು ಅದೇನು ಸಂಬಳವೇ? ಎಂದು ಪ್ರತಿಕ್ರಿಯಿಸಿದರು. ಹಾಗಾದರೆ ಗ್ಯಾರೆಂಟಿ ಸಮಿತಿಯಲ್ಲಿರುವ ಕಾಂಗ್ರೆಸ್‌ ಮುಖಂಡರಿಗೆ, ಕಾರ್ಯಕರ್ತರಿಗೆ ಮುಂಗಡ ಭತ್ಯೆಗೆ ಆದೇಶ ಕೊಟ್ಟಿದ್ದಾರಲ್ಲ ಇದೇನು? ಎಂದು ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.

₹ 7200 ಕೋಟಿ ಬಾಕಿ: ರಾಜ್ಯದ 1.25 ಕೋಟಿ ಮಹಿಳೆಯರಿಗೆ ಕಳೆದ ಮೂರು ತಿಂಗಳಿಂದ ಗೃಹಲಕ್ಷ್ಮೀ ಹಣ ಸಂದಾಯವಾಗಿಲ್ಲ. ಅಂದಾಜು ₹7200 ಕೋಟಿ ಹಣ ಬಿಡುಗಡೆ ಬಾಕಿ ಉಳಿಸಿಕೊಂಡಿದೆ. ಖಜಾನೆ ಪೂರ್ತಿ ಖಾಲಿ ಮಾಡಿದೆ ಎಂದು ಜೋಶಿ ಟೀಕಿಸಿದ್ದಾರೆ.

ರಾಜ್ಯ ಕಾಂಗ್ರೆಸ್‌ ಸರ್ಕಾರ ಶ್ರೀಸಾಮಾನ್ಯರನ್ನು ಕಡೆಗಣಿಸಿದ್ದು, ತನ್ನ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಮುಂಗಡ ಭತ್ಯೆ ನೀಡಿ ಅವರನ್ನು ಸಲಹುತ್ತಿದೆ. ಕಾಂಗ್ರೆಸ್ ಸರ್ಕಾರ ದುರಾಡಳಿತ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Articles

Back to top button