ನಾಗರಿಕ ವಿಮಾನ ಹಾರಾಟ ಬಂದ್, ಸನ್ನದ್ಧ ಸ್ಥಿತಿಗೆ ಆದೇಶ
ಪ್ರಗತಿವಾಹಿನಿ ಸುದ್ದಿ, ನವದೆಹಲಿ
ನಿನ್ನೆ ನಡೆದ ದಾಳಿಯ ಹಿನ್ನೆಲೆಯಲ್ಲಿ ತೀವ್ರ ಕಂಗೆಟ್ಟಿರುವ ಪಾಕಿಸ್ತಾನ ಯಾವುದೇ ರೀತಿಯಲ್ಲಿ ಪ್ರತೀಕಾರಕ್ಕೆ ಮುಂದಾಗುವ ಸಾಧ್ಯತೆ ಇದೆ. ಹಾಗಾಗಿ ಭಾರತ ದೇಶಾದ್ಯಂತ ಕಟ್ಟೆಚ್ಚರ ವಹಿಸಿದ್ದು, ನಿರಂತರವಾಗಿ ಸಭೆಯ ಮೇಲೆ ಸಭೆಗಳನ್ನು ನಡೆಸುತ್ತಿದೆ.
ನಿನ್ನೆ ನಡೆದ ದಾಳಿಯಲ್ಲಿ ಒಟ್ಟೂ 300 ಜನರು ಸಾವನ್ನಪ್ಪಿದ್ದಾಗಿ ಪಾಕಿಸ್ತಾನಿ ಮಾಧ್ಯಮಗಳು ಬರೆದಿವೆ. ಬುಧವಾರ ಬೆಳಗ್ಗೆ ಜಮ್ಮು ಗಡಿಯಲ್ಲಿ ಭಾರತದ ಸರಕು ಸಾಗಣೆ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಪತನಗೊಂಡಿದ್ದನ್ನು ಪಾಕಿಸ್ತಾನ ತಾನೇ ಹೊಡೆದುರುಳಿಸಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಆದರೆ ಭಾರತ ಇದನ್ನು ಸ್ಪಷ್ಟವಾಗಿ ನಿರಾಕರಿಸಿದೆ. ಅಲ್ಲದೆ ಪಾಕಿಸ್ತಾನದ ಒಂದು ಯುದ್ದ ವಿಮಾನವನ್ನು ಹೊಡೆದುರುಳಿಸಿದ್ದಾಗಿ ಭಾರತ ತಿಳಿಸಿದೆ.
ಈ ಮಧ್ಯೆ, ಭಾರತದ ಯುದ್ದ ವಿಮಾನಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲು ಸೂಚಿಸಲಾಗಿದೆ. ಯಾವುದೇ ಕ್ಷಣದಲ್ಲಿ ದಾಳಿಗೆ ಸಜ್ಜಾಗಿರುವಂತೆ ಆದೇಶಿಸಲಾಗಿದೆ. ಗಡಿ ಭಾಗದ ಆಸ್ಪತ್ರೆಗಳಲ್ಲಿ ಸಹ ಔಷಧ ಸಂಗ್ರಹಗಳೊಂದಿಗೆ ಸನ್ನದ್ಧ ಸ್ಥಿತಿಯಲ್ಲಿರುವಂತೆ ಸೂಚಿಸಲಾಗಿದೆ.
ಪಾಕಿಸ್ತಾನ ಕೂಡ ದೇಶಾದ್ಯಂತ ಕಟ್ಟೆಚ್ಚರ ವಹಿಸಿದ್ದು, ಪ್ರತೀಕಾರಕ್ಕೆ ನಿರಂತರ ಪ್ರಯತ್ನ ನಡೆಸುತ್ತಿದೆ.
ಭಾರತದ ಗಡಿ ಭಾಗದ, ವಿಶೇಷವಾಗಿ ಪಂಜಾಬ್ ರಾಜ್ಯದ ವಿಮಾನ ನಿಲ್ದಾಣಗಳಿಂದ ವಿಮಾನ ಹಾರಾಟಗಳನ್ನು ನಿಲ್ಲಿಸಲಾಗಿದೆ. ಪಾಕಿಸ್ತಾನವೂ ಗಡಿ ಪ್ರದೇಶದ ವಿಮಾನ ನಿಲ್ದಾಣಗಳನ್ನು ಬಂದ್ ಮಾಡಿದೆ.
ಎಲ್ಲೆಡೆ ಯುದ್ಧ ಸನ್ನದ್ಧ ಸ್ಥಿತಿ ನಿರ್ಮಾಣವಾಗಿದ್ದು, ಕ್ಷಣ ಕ್ಷಣದ ಮಾಹಿತಿಯನ್ನು ಕೇಂದ್ರ ಗೃಹ ಇಲಾಖೆ, ಮತ್ತು ರಕ್ಷಣಾ ಇಲಾಖೆ ಪಡೆದುಕೊಳ್ಳುತ್ತಿದೆ.