Belagavi NewsBelgaum NewsKannada NewsKarnataka NewsLatest

*ವಿಕಲಚೇತನರ ದ್ವಿಚಕ್ರ ವಾಹನ ಯೋಜನೆಯಲ್ಲೂ ಮಧ್ಯವರ್ತಿಗಳು*

ಮಧ್ಯವರ್ತಿಗಳು/ವ್ಯಕ್ತಿಗಳು ಒಡ್ಡುವ ಆಮಿಷಕ್ಕೆ ಒಳಗಾಗದಿರಲು ಕೋರಿಕೆ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಿವಿಧ ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ ಹಣ ವಸೂಲಿ ಮಾಡುತ್ತಿರುವ ದೂರು ಬಂದ ಹಿನ್ನೆಲೆಯಲ್ಲಿ ಸ್ವತಃ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರೇ ದೂರು ನೀಡಿದ ಪ್ರಕರಣದ ಬೆನ್ನಲ್ಲೇ ಇದೀಗ ಮತ್ತೊಂದು ಮಧ್ಯವರ್ತಿಗಳ ಹಾವಳಿ ಬೆಳಕಿಗೆ ಬಂದಿದೆ.

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾದ ದೈಹಿಕ ವಿಕಲಚೇತನರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನ ಯೋಜನೆ ಅಡಿಯಲ್ಲಿ ಜಿಲ್ಲೆಯ ಅರ್ಹ ದೈಹಿಕ ವಿಕಲಚೇತನ ವ್ಯಕ್ತಿಗಳಿಗೆ ಸಂಪೂರ್ಣ ಉಚಿತವಾಗಿ ಯಂತ್ರಚಾಲಿತ ದ್ವಿಚಕ್ರ ವಾಹನವನ್ನು ಒದಗಿಸಲಾಗುತ್ತಿದೆ.
ಆದರೆ ಹಲವಾರು ಮದ್ಯವರ್ತಿಗಳು ಯಂತ್ರಚಾಲಿತ ದ್ವಿ-ಚಕ್ರ ವಾಹನ ಮಂಜೂರು ಮಾಡಿಸಿಕೊಡುವುದಾಗಿ ವಿಕಲಚೇತನ ವ್ಯಕ್ತಿಗಳಿಗೆ ಆಮಿಷ ಒಡ್ಡುತ್ತಿರುವ ಬಗ್ಗೆ ರಾಮದುರ್ಗ ತಾಲೂಕಿನ ವಿಕಲಚೇತನ ವ್ಯಕ್ತಿಯಿಂದ ಇಲಾಖೆಗೆ ದೂರು ಬಂದಿದೆ.

ಆದ್ದರಿಂದ ವಿಕಲಚೇತನ ವ್ಯಕ್ತಿಗಳಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ಮಂಜೂರು ಮಾಡಲು ಯಾವುದೇ ಮದ್ಯವರ್ತಿಗಳು /ವ್ಯಕ್ತಿಗಳು ಒಡ್ಡುವ ಆಮಿಷಕ್ಕೆ ಒಳಗಾಗಬಾರದೆಂದು ಹಾಗೂ ಇಂತಹ ವ್ಯಕ್ತಿಗಳು ಕಂಡು ಬಂದಲ್ಲಿ ಅಥವಾ ದೂರವಾಣಿ ಕರೆಗಳು ಬಂದಲ್ಲಿ ವಿಷಯವನ್ನು ತಮ್ಮ ತಾಲೂಕಿನ ವ್ಯಾಪ್ತಿಯ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಬೆಳಗಾವಿ ಇವರಿಗೆ (ಮೊಬೈಲ್ ಸಂಖ್ಯೆ: ೮೦೫೦೬೦೯೦೯೮) ವರದಿ ಮಾಡಲು ಜಿಲ್ಲೆಯ ಎಲ್ಲಾ ದೈಹಿಕ ವಿಕಲಚೇತನರಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

Home add -Advt

ಕೆಲವು ದಿನಗಳ ಹಿಂದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ವಿವಿಧ ಹುದ್ದೆ ಕೊಡಿಸುವುದಾಗಿ ಹಣ ವಸೂಲಿ ಮಾಡುತ್ತಿರುವ ಕುರಿತು ಸಾಕಷ್ಟು ದೂರು ಕೇಳಿ ಬಂದಿತ್ತು. ಆಗ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರೇ ಸ್ವತಃ ಬೆಳಗಾವಿ ಎಸ್ಪಿ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಲಿಖಿತ ದೂರು ನೀಡಿದ್ದರು. ಆ ಪ್ರಕರಣದ ತನಿಖೆ ನಡೆಯುತ್ತಿದೆ.

ಸಚಿವರೇ ಸ್ವತಃ ಮುತುವರ್ಜಿ ವಹಿಸಿ ಮಧ್ಯವರ್ತಿಗಳ ಹಾವಳಿ ತಡೆಯಲು ಮುಂದಾದರೂ ಮತ್ತೆ ಇಂತಹ ಪ್ರಕರಣ ನಡೆಯುತ್ತಿರುವುದು ವಿಪರ್ಯಾಸವಾಗಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೆಲವರನ್ನಾದರೂ ಒಳಗೆ ಹಾಕಿದಲ್ಲಿ ಇದಕ್ಕೆ ಕಡಿವಾಣ ಹಾಕಬಹುದು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಕೈ ಮೀರಬಹುದು.


Related Articles

Back to top button