Latest

ಪದವಿ ನಂತರವೂ ನಿರಂತರ ಕಲಿಕೆ ಮುಂದುವರಿಸಬೇಕು -ಬಿ.ಗಿರೀಶ್ ಭಾರದ್ವಾಜ್

ವಿಟಿಯು ಘಟಿಕೋತ್ಸವ; ಚಿನ್ನದ ಪದಕ, ಪದವಿ ಪ್ರದಾನ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ೧೮ನೇ ಘಟಿಕೋತ್ಸವ ಸೋಮವಾರ ನಡೆಯಿತು. ಈ ಸಂದರ್ಭದಲ್ಲಿ ಎಂಜಿನಿಯರಿಂಗ್ ಪದವಿ ಹಾಗೂ ಸ್ನಾತಕೋತ್ತರ ಪದವಿಯ ವಿವಿಧ ವಿಭಾಗಗಳಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು.
ದಾವಣಗೆರೆಯ ಜೈನ್ ತಾಂತ್ರಿಕ ಮಹಾವಿದ್ಯಾಲಯದ ಸುಚಿತ್ರಾ ಎನ್. ಅವರು ಇರಿಗೇಶನ್ ಎಂಜಿನಿಯರಿಂಗ್ ಮತ್ತು ಹೈಡ್ರಾಲಿಕ್ ಸ್ಟ್ರಕ್ಚರ್ಸ್ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಪ್ರಥಮ ರ‍್ಯಾಂಕ್ ಪಡೆಯುವುದರ ಜತೆಗೆ ಒಟ್ಟು ಎಂಟು ಚಿನ್ನದ ಪದಕ ಹಾಗೂ ಒಂದು ನಗದು ಬಹುಮಾನವನ್ನು ಪಡೆದುಕೊಂಡರು.
ಘಟಿಕೋತ್ಸವ ಸಮಾರಂಭದಲ್ಲಿ ಒಟ್ಟು ಬಿಇ ಹಾಗೂ ಬಿ.ಟೆಕ್ ೬೪೮೮೧, ೬೧೯ ಬಿ.ಆರ್ಕಿಟೆಕ್ಟರ್, ೪೪೨೫ ಎಮ್‌ಬಿಎ, ೧೮೦೧ ಎಂಸಿಎ, ೨೮೫೯ ಎಂ.ಟೆಕ್, ೧೭೨ ಎಂ.ಟೆಕ್ (ಪಾರ್ಟ್ ಟೈಮ್), ೨೬ ಎಂ.ಆರ್ಕಿಟೆಕ್ಟರ್, ೩೩ ಎಂ.ಎಸ್ಸಿ ಎಂಜಿನಿಯರಿಂಗ್, ೬ ಡುಯಲ್ ಡಿಗ್ರಿ, ೪೧೮ ಜನರಿಗೆ ಪಿ.ಎಚ್‌ಡಿ ಪದವಿಯನ್ನು ಪ್ರದಾನ ಮಾಡಲಾಯಿತು.

ವಿಟಿಯು ಘಟಿಕೋತ್ಸವ: ಪದಕಗಳ ಪ್ರದಾನ

ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆ:
ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹಾಗೂ ಕುಲಾಧಿಪತಿಯೂ ಆಗಿರುವ  ರಾಜ್ಯಪಾಲ ವಜೂಭಾಯಿ ವಾಲಾ ಅವರ ಅನುಪಸ್ಥಿತಿಯಲ್ಲಿ ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ ಘಟಿಕೋತ್ಸವಕ್ಕೆ ಚಾಲನೆ ನೀಡಿದರು.

Home add -Advt

ಉಪರಾಷ್ಟ್ರಪತಿ ಬೆಳಗಾವಿ ಭೇಟಿ ರದ್ದು

ನಂತರ ಅತಿಥಿಗಳನ್ನು ಪರಿಚಯಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಕರಿಸಿದ್ದಪ್ಪ ಅವರು, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ವಿಶ್ವವಿದ್ಯಾನಿಲಯದ ಅಕಾಡೆಮಿಕ್ ಸಾಧನೆಯ ಹಾದಿಯನ್ನು ವಿವರಿಸಿದರು.
ವಿಟಿಯು ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಪರೀಕ್ಷೆಯ ನಂತರ ಎಲ್ಲ ಉತ್ತರ ಪತ್ರಿಕೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತದೆ. ಅದೇ ರೀತಿ ಪ್ರಶ್ನೆಪತ್ರಿಕೆಗಳನ್ನು ಕೂಡ ಆನ್‌ಲೈನ್ ಮೂಲಕವೇ ವಿತರಿಸಲಾಗುತ್ತದೆ ಎಂದರು.
ಪ್ರಸ್ತುತ ಸನ್ನಿವೇಶದಲ್ಲಿ ಜಾಗತಿಕ ಹಾಗೂ ರಾಷ್ಟ್ರಮಟ್ಟದಲ್ಲಿ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಬದಲಾವಣೆಗಳಾಗುತ್ತಿದ್ದು, ಇದಕ್ಕೆ ತಕ್ಕಂತೆ ವಿಟಿಯು ಕೂಡ ತನ್ನ ಕಾರ್ಯತಂತ್ರಗಳನ್ನು ರೂಪಿಸುವ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಸಂಕೀರ್ಣತೆಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಡಾಕ್ಟರ್ ಆಫ್ ಸೈನ್ಸ್ ಪ್ರದಾನ:
ಪದ್ಮಶ್ರೀ ಬಿ.ಗಿರೀಶ್ ಭಾರದ್ವಾಜ್ ಅವರಿಗೆ “ಡಾಕ್ಟರ್ ಆಫ್ ಸೈನ್ಸ್” ಗೌರವ ಪದವಿಯನ್ನು ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ ಅವರು ಪ್ರದಾನ ಮಾಡಿದರು.
ಗೌರವ ಪದವಿ ಸ್ವೀಕರಿಸಿ ಮಾತನಾಡಿದ ಬಿ.ಗಿರೀಶ್ ಭಾರದ್ವಾಜ್ ಅವರು, ಗ್ರಾಮೀಣ ಪ್ರದೇಶದ ಜನರ ಅನುಕೂಲಕ್ಕಾಗಿ ಮೇಲ್ಸೇತುವೆ ನಿರ್ಮಿಸಿರುವುದಕ್ಕೆ ಹೆಮ್ಮೆ ಮತ್ತು ಸಂತೃಪ್ತಿ ತಂದಿದೆ ಎಂದರು.
ಈ ಸೇತುವೆಗಳು ಗ್ರಾಮೀಣ ಜನರು ಜಗತ್ತಿಗೆ ತಮ್ಮನ್ನು ತೆರೆದುಕೊಳ್ಳುವ ಅವಕಾಶ ಕಲ್ಪಿಸುತ್ತದೆ. ಇದರಿಂದ ಅವರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ಬದಲಾಗುತ್ತದೆ.
ಬಲಿಷ್ಠ, ಸುರಕ್ಷಿತ ಮತ್ತು ಮಿತವ್ಯಯದ ಸೇತುವೆ ನಿರ್ಮಿಸುವುದು ನನ್ನ ಆಶಯವಾಗಿತ್ತು. ನನ್ನ ಕೆಲಸ ಗುರುತಿಸಿ ರಾಷ್ಟ್ರದ ಪ್ರತಿಷ್ಠಿತ ವಿಟಿಯು ನನಗೆ ಗೌರವ ಪದವಿ ನೀಡಿರುವುದು ಸಂತಸ ತಂದಿದೆ ಎಂದರು.
ಪದವಿ ನಂತರವೂ ಪ್ರತಿಯೊಬ್ಬರು ನಿರಂತರ ಕಲಿಕೆ ಮುಂದುವರಿಸಬೇಕು. ಶಿಕ್ಷಣದ ನಂತರ ಉದ್ಯೋಗ ಅರಸಿ ವಿದೇಶಗಳಿಗೆ ಹೋಗುವ ಬದಲು ಇಲ್ಲಿಯೇ ನೆಲೆ ನಿಂತು ದೇಶಸೇವೆಗೆ ಮುಂದಾಗಬೇಕು ಎಂದು ಪದ್ಮಶ್ರೀ ಗಿರೀಶ್ ಭಾರದ್ವಾಜ್ ಅವರು ಪದವಿಧರರಿಗೆ ಕರೆ ನೀಡಿದರು.
ಇದಕ್ಕೂ ಮುಂಚೆ ನಡೆದ ಘಟಿಕೋತ್ಸವ ಮೆರವಣಿಗೆಯಲ್ಲಿ ವಿಟಿಯು ಕುಲಸಚಿವರಾದ ಡಾ.ಸತೀಶ್ ಅಣ್ಣಿಗೇರಿ ಅವರು ದಂಡಧಾರಿಯಾಗಿ ನೇತೃತ್ವ ವಹಿಸಿದ್ದರು. ವಿವಿಧ ವಿಭಾಗಗಳ ಡೀನ್ ಗಳು ಘಟಿಕೋತ್ಸವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅನೇಕ ಗಣ್ಯರು, ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿಯ ಸದಸ್ಯರು, ಸೆನೆಟ್ ಸದಸ್ಯರು, ಪ್ರಾಧ್ಯಾಪಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಪಾಲಕರು ಸೇರಿದಂತೆ ಸಾವಿರಾರು ಜನರು ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.

 

(ಪ್ರಗತಿವಾಹಿನಿ ಸುದ್ದಿಗಳನ್ನು ಇತರರಿಗೆ ಮತ್ತು ಇತರ ಗ್ರುಪ್ ಗಳಿಗೆ ಶೇರ್ ಮಾಡಿ)

Related Articles

Back to top button