Kannada NewsKarnataka NewsNationalPolitics

*ನಯಾಪೈಸೆ ಚೌಕಾಸಿ ಮಾಡದೆ ಅಷ್ಟೂ ವೇತನ ನೀಡಿದ್ದೇವೆ, ಈಗ ಕೆಲಸ ಮಾಡಿ: ಸಿಎಂ* 

ಪ್ರಗತಿವಾಹಿನಿ ಸುದ್ದಿ: ಆರ್ಥಿಕ ಇಲಾಖೆಗೆ ವಾಹನ, ಸಿಬ್ಬಂದಿ ಅಗತ್ಯವಿದ್ದರೆ ಕೊಡ್ತೇವೆ. ಆದರೆ ತೆರಿಗೆ ಸಂಗ್ರಹದ ಗುರಿ ಮುಟ್ಟಲೇಬೇಕು. ಇದರಲ್ಲಿ ರಾಜಿ ಆಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. 

ಬ್ಯಾಂಕ್ವೆಂಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್ಥಿಕ ಇಲಾಖೆ ವತಿಯಿಂದ ಹೊಸ ವಾಹನಗಳಿಗೆ ಚಾಲನೆ ನೀಡಿ, ಅನುಕಂಪ ಆಧಾರಿತ ನೇಮಕಾತಿ ಆದೇಶ ವಿತರಿಸಿ ಮಾತನಾಡಿದರು. 

Home add -Advt

ತೆರಿಗೆ ವಂಚಿಸುವವರನ್ನು ಪತ್ತೆ ಹಚ್ಚಲು, ತೆರಿಗೆ ಸೋರಿಕೆ ತಡೆಯಲು ಅಗತ್ಯವಾದ ಎಲ್ಲಾ ಅನುಕೂಲಗಳನ್ನು ಒದಗಿಸಿಕೊಡಲು ಸರ್ಕಾರ ಸಿದ್ದವಿದೆ. ಆದರೆ, ತೆರಿಗೆ ಸಂಗ್ರಹದ ಗುರಿ ಮುಟ್ಟಲೇಬೇಕು. ಇದರಲ್ಲಿ ರಾಜಿ ಆಗುವ ಪ್ರಶ್ನೆಯೇ ಇಲ್ಲ ಎಂದರು. 

ವೇತನ‌ ಆಯೋಗ ಶಿಫಾರಸ್ಸು ಮಾಡಿದ ವೇತನದಲ್ಲಿ ನಯಾಪೈಸೆ ಚೌಕಾಸಿ ಮಾಡದೆ ಅಷ್ಟೂ ವೇತನ ನೀಡಿದ್ದೇವೆ. ಸರ್ಕಾರಿ ನೌಕರರಿಂದಲೂ ಇಷ್ಟೇ ಪ್ರಮಾಣದಲ್ಲಿ ಕರ್ತವ್ಯ ನಿರೀಕ್ಷಿಸುತ್ತೇನೆ. ತೆರಿಗೆ ಸಂಗ್ರಹದಲ್ಲಿ ಗುರಿ ತಲುಪಲೇಬೇಕು ಎಂದರು. 

ನಮಗೆ 11495 ಕೋಟಿ ರೂಪಾಯಿ ಹದಿನೈದನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಹಣಕಾಸು ಸಚಿವೆ ಘೋಷಣೆ ಮಾಡಿದ್ದ ಹಣದಲ್ಲಿ ನಯಾ ಪೈಸೆಯನ್ನೂ ರಾಜ್ಯಕ್ಕೆ ಕೊಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ನಾವು ಗ್ಯಾರಂಟಿಗಳಿಗೆ ಹಣ  ತೆಗೆದಿಟ್ಟಿದ್ದೀವಿ. ಜೊತೆಗೆ 83 ಸಾವಿರ ಕೋಟಿಯನ್ನು ಬಂಡವಾಳ ವೆಚ್ಚಕ್ಕೆ ತೆಗೆದಿರಿಸಿದ್ದೀವಿ. ಕಳೆದ ವರ್ಷ ನಾವು 52 ಸಾವಿರ ಕೋಟಿ ಬಂಡವಾಳ ವೆಚ್ಚ ಮಾಡಿದ್ದೆವು. ಈ ವರ್ಷ 31 ಸಾವಿರ ಕೋಟಿ ಹೆಚ್ಚಿನ ಬಂಡವಾಳ ವೆಚ್ಚ ಕೊಟ್ಟಿದ್ದೀವಿ. ಆದರೂ, ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲ ಎಂದು ಬಿಜೆಪಿ ಆರೋಪಿಸುತ್ತಿದೆ ಎಂದು ಟೀಕಿಸಿದರು.

Related Articles

Back to top button