
ಭಾರತದಿಂದ ಸಹಾಯ ಪಡೆದರೂ ಬಿಡದ ನಯವಂಚಕ ಬುದ್ದಿ
ಪ್ರಗತಿವಾಹಿನಿ ಸುದ್ದಿ ಚೆನ್ನೈ:
ದ್ವೀಪ ರಾಷ್ಟ್ರ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನಿಂದ ಅಕ್ಷರಶಃ ನಲುಗಿಹೋಗಿದೆ. ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಬಂದಿದ್ದು ಆರ್ಥಿಕ ತುರ್ತು ಪರಿಸ್ಥಿತಿಯೂ ಘೊಷಣೆಯಾಗಿದೆ. ಶ್ರೀಲಂಕಾದ ಹದಗೆಟ್ಟ ಆರ್ಥಿಕ ಸ್ಥಿತಿಯನ್ನು ಅರಿತು ಭಾರತ ಸಾಕಷ್ಟು ಸಹಾಯ ಮಾಡುತ್ತಿದೆ. ನೂರಾರು ಕೋಟಿ ಮೌಲ್ಯದ ಇಂಧನ, ಆಹಾರ ಪದಾರ್ಥಗಳನ್ನು ಪೂರೈಕೆ ಮಾಡುತ್ತಿದೆ. ಖ್ಯಾತ ಕ್ರಿಕೇಟಿಗ ಸನತ್ ಜಯಸೂರ್ಯ ಸೇರಿದಂತೆ ಶ್ರೀಲಂಕಾದ ಅನೇಕ ಗಣ್ಯರು ಭಾರತ ಮಾಡಿದ ಉಪಕಾರವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಇಷ್ಟಾದರೂ ತನ್ನ ಕುಹಕ ಬುದ್ದಿ ಬಿಡದ ಶ್ರೀಲಂಕಾ, ಭಾರತದ ಮೀನುಗಾರರ ಬಿಡುಗಡೆಗೆ ಒಬ್ಬೊಬ್ಬ ಮೀನುಗಾರರಿಗೆ ತಲಾ ೧ ಕೋಟಿ ರೂ. ಕೇಳಿದೆ.
ಇತ್ತೀಚೆಗೆ ತಮಿಳುನಾಡಿನ ರಾಮೇಶ್ವರಂನ ೧೨ ಮೀನುಗಾರರು ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಆಕಸ್ಮಿಕವಾಗಿ ಭಾರತದ ಸಮುದ್ರ ಗಡಿಯನ್ನು ದಾಟಿ ಶ್ರೀಲಂಕಾ ಗಡಿಯೊಳಗೆ ಪ್ರವೇಶಿಸಿದ್ದರು. ಶ್ರೀಲಂಕಾ ನೌಕಾಪಡೆ ಈ ಎಲ್ಲ ೧೨ ಮೀನುಗಾರರನ್ನು ವಶಕ್ಕೆ ಪಡೆದಿದೆ.
ಬಳಿಕ ಶ್ರೀಲಂಕಾದ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ಪ್ರತಿ ಮೀನುಗಾರರಿಗೆ ತಲಾ ೧ ಕೋಟಿ ರೂ.ನಂತೆ ಜಾಮೀನು ನೀಡಿ ಬಿಡಿಸಿಕೊಂಡು ಹೋಗುವಂತೆ ನ್ಯಾಯಾಲಯ ಆದೇಶ ಮಾಡಿದೆ.
ಶ್ರೀಲಂಕಾ ನ್ಯಾಯಾಲಯದ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಮೇಶ್ವರಂ ಮೀನುಗಾರರ ಸಂಘಟನೆಯ ಮುಖ್ಯಸ್ಥ ಜೇಸುದಾಸ್, ಮೀನುಗಾರರ ಬಳಿ ಅಷ್ಟೊಂದು ಹಣವಿದ್ದರೆ ಅವರು ಈ ವೃತ್ತಿಗೆ ಬರುತ್ತಲೇ ಇರಲಿಲ್ಲ. ಶ್ರೀಲಂಕಾ ಸರಕಾರದ ಜೊತೆ ಭಾರತ ಸರಕಾರ ಚರ್ಚಿಸಿ ಮೀನುಗಾರರ ಬಿಡುಗಡೆಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಭೂಕಂಪ