Latest

4 ವರ್ಷದಲ್ಲಿ 7 ಬಾರಿ ವರ್ಗಾವಣೆ: ಡಿ.ರೂಪಾ ಖಾರವಾದ ಟ್ವೀಟ್ ಮಾಡಿದ್ದೇಕೆ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಒಂದಿಲ್ಲೊಂದು ವಿಷಯದಲ್ಲಿ ಸುದ್ದಿಯಾಗುತ್ತಲೇ ಇರುವ ಐಪಿಎಸ್ ಅಧಿಕಾರಿ ಕಳೆದ 4 ವರ್ಷದಲ್ಲಿ 7 ಬಾರಿ ವರ್ಗಾವಣೆಗೊಳಗಾಗಿದ್ದಾರೆ.

ಈ ಬಾರಿ ಪೊಲೀಸ್ ಅಧಿಕಾರಿಗೆ ಸಂಬಂಧವೇ ಇಲ್ಲದ ಕರಕುಶಲ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ. ಅಧಿಕಾರ  ವಹಿಸಿಕೊಂಡಿರುವ ರೂಪಾ, ಕೆಲಸ ಮಾಡುವವರಿಗೆ ಎಲ್ಲಿಯಾದರೇನು ಎಂದು ಪ್ರಶ್ನಿಸಿದ್ದಾರೆ. ತಮಗೆ ಅಲ್ಲಿ ಕೆಲಸ ಮಾಡಲು ತುಂಬಾ ಇಷ್ಟವಾಗಿದೆ ಎಂದೂ ಹೇಳಿದ್ದಾರೆ.

2016ರಲ್ಲಿ ಸಕಾಲ ಯೋಜನೆಯಲ್ಲಿ ಹೆಚ್ಚುವರಿ ಯೋಜನಾ ನಿರ್ದೇಶಕಾರಿದ್ದ ರೂಪಾ, 2017ರಲ್ಲಿ ಬಂಧೀಖಾನೆ ಡಿಐಜಿಯಾಗಿ ವರ್ಗಾವಣೆಯಾಗಿದ್ದರು. ಜೈಲಿನಲ್ಲಿನ ಅಕ್ರಮಗಳ ಕುರಿತು ದ್ವನಿ ಎತ್ತಿದ ಹಿನ್ನೆಲೆಯಲ್ಲಿ ಅಲ್ಲಿಂದ ರಸ್ತೆ ಸುರಕ್ಷತೆ ಆಯುಕ್ತರನ್ನಾಗಿ ವರ್ಗಾಯಿಸಲಾಗಿತ್ತು.

ನಂತರದಲ್ಲಿ ಹೋಮ್ ಗಾರ್ಡ್ ಐಜಿಯಾಗಿ ವರ್ಗಾವಣೆ ಮಾಡಲಾಗಿತ್ತು. ಸ್ವಲ್ಪ ಕಾಲ ರೈಲ್ವೆ ಐಜಿಯಾಗಿ ವರ್ಗಾಯಿಸಿದ ಸರಕಾರ ನಂತರ ಗೃಹ ಇಲಾಖೆ ಸಹಾಯಕ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಿತ್ತು. ಸಧ್ಯ ಕರಕುಶಲ ಅಭಿವೃದ್ಧಿ ನಿಗಮದ ಎಂಡಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಈ ಬಾರಿ ಅವರನ್ನು ವರ್ಗಾವಣೆ ಮಾಡಿದ್ದ ಸೆಫ್ ಸಿಟಿ ಯೋಜನೆಯಲ್ಲಿ ಇನ್ನೋರ್ವ ಐಪಿಎಸ್ ಅಧಿಕಾರಿ ಹೇಮಂತರ ನಿಂಬಾಳಕರ್ ಮತ್ತು ರೂಪಾ ನಡುವೆ ನಡೆದ ಆರೋಪ -ಪ್ರತ್ಯಾರೋಪ ಪ್ರಕರಣ.  ಈ ಪ್ರಕರಣದಲ್ಲಿ ಇಬ್ಬರನ್ನೂ ವರ್ಗಾವಣೆ ಮಾಡಲಾಗಿದೆ.

ಇದಕ್ಕಾಗಿ ರೂಪಾ ಸರಕಾರದ ವಿರುದ್ಧ ಖಾರವಾದ ಟ್ವೀಟ್ ಮಾಡಿದ್ದಾರೆ.

`ನನ್ನ ವರ್ಗಾವಣೆ ಬಂದಿದೆ, ಕರಕುಶಲ ನಿಗಮದ ಎಂಡಿ ಎಂದು. ಸಿಬಿಐ ಈಗಾಗಲೇ ದೋಷಾರೋಪಣೆ ಸಲ್ಲಿಸಿ ನಿಂಬಾಳ್ಕರ್ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳಿ ಎಂದು ಕಳೆದ ಡಿಸೆಂಬರ್(1 ವರ್ಷ ಹಿಂದೆ) ಶಿಫಾರಸು ಮಾಡಿದ್ದರೂ, ಇನ್ನೂ ಶಿಸ್ತುಕ್ರಮ ತೆಗೆದುಕೊಂಡಿಲ್ಲ.ಈ ವರ್ಗಾವಣೆ ನನ್ನನ್ನೂ ದೋಷಾರೋಪಣೆ ಎದುರಿಸುತ್ತಿರುವ ಅಧಿಕಾರಿಯನ್ನೂ ಒಂದೇ ತಕ್ಕಡಿಯಲ್ಲಿ ಅಳೆದಂತೆ”  ಎಂದು ರೂಪಾ ನೇರವಾಗಿ ಹೇಳಿದ್ದಾರೆ.

ಐಎಂಎ ಪ್ರಕರಣದಲ್ಲಿ ನಿಂಬಾಳಕರ್ ವಿಚಾರಣೆಗೆ ಸಿಬಿಐ ಅನುಮತಿ ಕೇಳಿತ್ತು. ಅದು ಪೆಂಡಿಂಗ್ ಇತ್ತು. ರೂಪಾ ಗೃಹ ಇಲಾಖೆಗೆ ಹೋದ ನಂತರ ಸರಕಾರ ಅನುಮತಿ ನೀಡಿತ್ತು. ಈ ಸಿಟ್ಟಿನಿಂದ ತಮ್ಮ ಮೇಲೆ ಅನಗತ್ಯವಾಗಿ ನಿಂಬಾಳಕರ್ ಆರೋಪ ಮಾಡಿದ್ದಾರೆ. ಸೇಫ್ ಸಿಟಿ ಯೋಜನೆಯಲ್ಲಿ ನಿಂಬಾಳಕರ್ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ಮಾಡಲು ಹೊರಟಿದ್ದರು ಎಂದು ರೂಪಾ ನೇರವಾಗಿಯೇ ಆರೋಪಿಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button