*ಕಠಿಣ ಶ್ರಮಕ್ಕೆ ತಕ್ಕ ಬೆಲೆ ಸಿಕ್ಕೆ ಸಿಗುತ್ತದೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಗ್ರೇಸ್ ಕೋಚಿಂಗ್ ಸೆಂಟರ್ ನಲ್ಲಿ ಯುಪಿಎಸ್ಸಿ ಸಾಧಕರನ್ನು ಸನ್ಮಾನಿಸಿದ ಸಚಿವರು
ಪ್ರಗತಿವಾಹಿನಿ ಸುದ್ದಿ: ಜೀವನದಲ್ಲಿ ಕಠಿಣ ಶ್ರಮ ವಹಿಸಿದರೆ ದೇವರು ಕರುಣೆ ತೋರುತ್ತಾನೆ. ಕಠಿಣ ಶ್ರಮಕ್ಕೆ ಬೆಲೆ ಸಿಕ್ಕೆ ಸಿಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಂಗಳೂರಿನ ಚಂದ್ರಾ ಲೇಔಟ್ ನಲ್ಲಿರುವ ಗ್ರೇಸ್ ಐಎಎಸ್ ಕೋಚಿಂಗ್ ಸೆಂಟರ್ ನಲ್ಲಿ 2025ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಸಚಿವರು, ಜೀವನದಲ್ಲಿ ಯಶಸ್ಸು ಸಾಧಿಸುವವರ ಹಿಂದೆ ಒಂದು ಕಥೆಯೇ ಇರುತ್ತದೆ. ಸಾಧನೆಯ ಹಿಂದಿನ ಪರಿಶ್ರಮ, ಸಾಧಕರಿಗಷ್ಟೇ ಗೊತ್ತಿರುತ್ತದೆ ಎಂದರು.

ಇವತ್ತು ಐಎಎಸ್, ಕೆಎಎಸ್ ಪರೀಕ್ಷೆ ಅಷ್ಟು ಸುಲಭ ಅಲ್ಲ. ಅತ್ಯಂತ ಕಠಿಣ ಪರೀಕ್ಷೆಯಲ್ಲಿ ಪಾಸ್ ಆಗಿರುವುದು ಖುಷಿಯ ವಿಚಾರ, ನೀವೆಲ್ಲರೂ ನಮಗೆ ಆದರ್ಶ, ಅಭ್ಯರ್ಥಿಗಳ ಹಿಂದಿನ ಪರಿಶ್ರಮ ನಮಗೆ ಕಾಣುವುದಿಲ್ಲ. ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿರುವ ಕಿರಣ್ ಅಮಟೆ, ಸತತ ಪ್ರಯತ್ನದ ಫಲವಾಗಿ ತಮ್ಮ ಕಡೇ ಯತ್ನದಲ್ಲಿ ಯಶ ಕಂಡಿದ್ದಾರೆ. ಕಠಿಣ ಪರಿಶ್ರಮ ಪಟ್ಟರೆ ದೇವರು ಕೂಡ ಕರುಣೆ ತೋರುತ್ತಾನೆ ಎಂಬುದಕ್ಕೆ ಇವರೇ ಸಾಕ್ಷಿ ಎಂದು ಹೇಳಿದರು.
ನಿಮ್ಮ ತಂದೆ ತಾಯಿ ಕಂಡಿರುವ ಕನಸನ್ನು ಈಡೇರಿಸಿದ್ದೀರಿ, ಗ್ರೇಸ್ ಕೋಚಿಂಗ್ ಸೆಂಟರ್ ಪರಿಶ್ರಮ ಕೂಡ ನಿಮ್ಮ ಯಶಸ್ಸಿನ ಹಿಂದಿದೆ. ನಮ್ಮ ಸಾಧನೆಗೆ ನಮ್ಮನ್ನು ಪ್ರೀತಿಸುವವರ ಜೊತೆಗೆ ನಮ್ಮ ವೈರಿಗಳ ಪ್ರಚೋದನೆ ಕೂಡ ಕಾರಣ ಆಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ರಾಜಕಾರಣಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒಂದೇ ನಾಣ್ಯದ ಎರಡು ಮುಖಗಳು. ಸನ್ವಯತೆಯಿಂದ ಕೆಲಸ ಮಾಡಬೇಕು, ಅಧಿಕಾರಿಗಳು ಆಸಕ್ತಿ ವಹಿಸಿದರೆ ಸರ್ಕಾರದ ಸವಲತ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಬಹುದು. ಸೂಕ್ಷ್ಮ ಮನಸ್ಸು ಇಟ್ಟುಕೊಂಡು ಕೆಲಸ ಮಾಡಬೇಕು. ನಿಮ್ಮ ಸೇವಾವಧಿಯಲ್ಲಿ ಹೃದಯದಿಂದ ಕೆಲಸ ಮಾಡಿ, ಸಾವಿರಾರು, ಲಕ್ಷಾಂತರ ಜನರಿಗೆ ಪ್ರೇರಣೆ ಆಗಿ ಕೆಲಸ ಮಾಡಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಿವಿ ಮಾತು ಹೇಳಿದರು.
ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಸೂಕ್ತವಾಗಿ ಕೆಲಸ ನಿರ್ವಹಿಸಿ, ಗೆದ್ದವರ ಬೆನ್ನುತಟ್ಟಿ, ಸೋತವರಿಗೆ ಹುಮ್ಮಸ್ಸು ತುಂಬುವಂಥ ಕೆಲಸ ಮಾಡಬೇಕು. ತಂದೆ ತಾಯಿ ಪಟ್ಟಿರುವ ಕಷ್ಟವನ್ನು ನೆನೆಯಿರಿ. ನೂರಾರು ಜನರ ಪಾಲಿಗೆ ಇಂದು ಪ್ರೇರಣೆಯಾಗಿದ್ದೀರಿ ಎಂದರು.

ಸತತ ಫಲವೇ ನನ್ನ ಯಶಸ್ಸಿನ ಗುಟ್ಟು
ರಾಜಕಾರಣಿಗಳಿಗೂ ಅಷ್ಟೇ ಸತತ ಶ್ರಮ ಅಗತ್ಯ. ನಾವು ಪ್ರತಿ ಐದು ವರ್ಷಕ್ಕೊಮ್ಮೆ ಜನರ ಮುಂದೆ ಪರೀಕ್ಷೆ ಎದುರಿಸುತ್ತೇವೆ. ನಾನು 2006ರ ಜಿಲ್ಲಾ ಪಂಚಾಯತಿ, 2007ರ ಕಾರ್ಪೋರೇಷನ್ ಚುನಾವಣೆ, 2009ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೇಳಿದಾಗ ಕೊಡಲಿಲ್ಲ. ಬಳಿಕ ನನ್ನ ಸಾಮರ್ಥ್ಯವನ್ನು ಗಮನಿಸಿ 2013ರಲ್ಲಿ ವಿಧಾನಸಭೆ, 2014ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಿದರು. ಅಲ್ಪ ಮತಗಳ ಅಂತರದಿಂದ ಎರಡೂ ಚುನಾವಣೆಗಳನ್ನು ಸೋಲು ಕಂಡೆ. ಸತತ ಪರಿಶ್ರಮ 2018ರಲ್ಲಿ 52 ಸಾವಿರ ಮತಗಳ ಅಂತರದಿಂದ ಗೆದ್ದೆ, 2023ರ ಚುನಾವಣೆಯಲ್ಲಿ 58 ಸಾವಿರ ಮತಗಳಿಂದ ಗೆದ್ದು ರಾಜ್ಯ ಸಚಿವ ಸಂಪುಟದಲ್ಲಿ ಏಕೈಕ ಸಚಿವೆಯಾಗಿರುವೆ. ಇದಕ್ಕೆ ನಾನು ಮಾಡಿದ ಮರಳಿ ಯತ್ನವೇ ಕಾರಣ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ, ಆದಾಯ ತೆರಿಗೆ ಇಲಾಖೆ ಆಯುಕ್ತರಾದ ಶಿವಾನಂದ್ ಕಲ್ಕೇರಿ, ಗ್ರೇಸ್ ಐಎಎಸ್ ಸಂಸ್ಥೆಯ ನಿರ್ದೇಶಕರಾದ ನವೀನ್ ಕುಮಾರ್ ಹಾಗೂ ಯುಪಿಎಸ್ಸಿ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು ಉಪಸ್ಥಿತರಿದ್ದರು.


