Latest

ರೈಲಿಗೆ ತಲೆಕೊಟ್ಟು ವಿಧಾನಪರಿಷತ್ ಉಪಸಭಾಪತಿ ಆತ್ಮಹತ್ಯೆಗೆ ಶರಣು

ವಿಧಾನಪರಿಷತ್ ಗಲಾಟೆಯಿಂದ ನೊಂದಿದ್ದ ಧರ್ಮೇಗೌಡ

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯ ವಿಧಾನಪರಿಷತ್ ಉಪಸಭಾಪತಿ ಧರ್ಮೇಗೌಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೋಮವಾರ ರಾತ್ರಿ ಚಿಕ್ಕಮಗಳೂರು ಜಿಲ್ಲೆ ಗುಣಸಾಗರ ಬಳಿ ಸೋಮವಾರ ರಾತ್ರಿಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಮಂಗಳವಾರ ಬೆಳಗಿನ ಜಾವ 1.30ರ ಹೊತ್ತಿಗೆ ಅವರ ಶವ ಸಿಕ್ಕಿದೆ.

ಸೋಮವಾರ ಸಂಜೆ ಕಾರಿನಲ್ಲಿ ಗುಣಸಾಗರದ ಬಳಿ ತೆರಳಿದ ಅವರು ನಂತರ ಕಾರು ಚಾಲಕನನ್ನು ಕಳಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಎಸ್.ಎಲ್. ಧರ್ಮೇಗೌಡ ಅವರು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸದೃಢ ಕುಟುಂಬದ ಹಿನ್ನೆಲೆಯವರು. ಅವರ ಕುಟುಂಬ ರಾಜಕೀಯವಾಗಿ ಶಕ್ತಿಶಾಲಿಯಾಗಿತ್ತು. ಆರ್ಥಿಕವಾಗಿಯೂ ಅವರು ಒಳ್ಳೆಯ ಸ್ಥಿತಿಯಲ್ಲಿದ್ದರು. ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನ ಮಟ್ಟದಿಂದ ವಿವಿಧ ಸ್ತರಗಳ ರಾಜಕೀಯದಲ್ಲಿ ಅನುಭವಿ ಎನಿಸಿದ್ದರು. ನಿನ್ನೆ ಚಿಕ್ಕಮಗಳೂರಿನ ಕಾರ್ಯಕ್ರಮವೊಂದರಲ್ಲಿ ಸಂತೋಷದಿಂದಲೇ ಅವರು ಪಾಲ್ಗೊಂಡರೆಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ಧಾರೆ.

ನಿನ್ನೆ ತಡರಾತ್ರಿ ಕಡೂರು ತಾಲೂಕು ಬಳಿ ರೈಲ್ವೆ ಹಳಿಯಲ್ಲಿ ಅವರ ರುಂಡ ಮುಂಡ ಬೇರ್ಪಟ್ಟ ದೇಹ ಪತ್ತೆಯಾಗಿದೆ. ಅವರು ಪತ್ನಿ ಮಮತಾ, ಮಗ ಸೋನಾಲ್, ಮಗಳು ಸೋನಾಲಿ ಅವರನ್ನು ಅಗಲಿದ್ದಾರೆ. ಸಖರಾಯಪಟ್ಟಣದಿಂದ ಸಂಜೆ 6:30ಕ್ಕೆ ಖಾಸಗಿ ಡ್ರೈವರ್ ಜೊತೆ ಕಾರಿನಲ್ಲಿ ಹೊರಟ ಅವರು ಕಡೂರು ತಾಲೂಕು ಗುಣಸಾಗರ ಬಳಿ ಕಾರು ನಿಲ್ಲಿಸಿದ್ದಾರೆ. ತಮ್ಮಎಸ್ಕಾರ್ಟ್ ಸಿಬ್ಬಂದಿಯನ್ನು ಅಲ್ಲಿಯೇ ಬಿಟ್ಟು ಖಾಸಗಿ ಡ್ರೈವರ್ ಜೊತೆ ಅವರು ಹೊರಟಿದ್ದರು. ಒಬ್ಬ ವ್ಯಕ್ತಿಯ ಜೊತೆ ಸ್ವಲ್ಪ ಕೆಲಸ ಇದ್ದು ಹೋಗಿ ಬರುತ್ತೇನೆ ಎಂದು ಹೇಳಿ ಹೋದರೆನ್ನಲಾಗಿದೆ.

ಇತ್ತೀಚೆಗೆ ವಿಧಾನಪರಿಷತ್​ನಲ್ಲಿ ನಡೆದ ಗಲಾಟೆ ಘಟನೆ ಧರ್ಮೇಗೌಡ ಅವರ ಮನಸಿಗೆ ಘಾಸಿ ತಂದಿತ್ತು. ಸಭಾಪತಿ ಪೀಠದ ಮೇಲೆ ಕುಳಿತಿದ್ದ ಅವರನ್ನ ಕಾಂಗ್ರೆಸ್ ಸದಸ್ಯರು ಎಳೆದಾಡಿದ್ದರು. ಇದು ಅವರಿಗೆ ಬಹಳ ನೋವು ತಂದಿತ್ತು. ತಮ್ಮ ಆಪ್ತವಲಯದಲ್ಲಿ ಸಾಕಷ್ಟು ನೋವು ತೋಡಿಕೊಂಡಿದ್ದರು. ಡೆತ್​ನೋಟ್​ನಲ್ಲಿ ಅವರು ಈ ವಿಚಾರವನ್ನು ಪ್ರಸ್ತಾಪ ಮಾಡಿ, ಘಟನೆಯಿಂದ ಬಹಳ ನೋವಾಗಿತ್ತು ಎಂದಿದ್ಧಾರೆ. ಡೆತ್ ನೋಟ್​ನಲ್ಲಿ ತಮ್ಮ ಪತ್ನಿ, ಮಗ ಮತ್ತು ಮಗಳ ಕ್ಷಮೆ ಕೂಡ ಅವರು ಯಾಚಿಸಿದ್ಧಾರೆ.

ಬಿಳಕಲ್ ಹಳ್ಳಿ ಗ್ರಾಮಪಂಚಾಯತ್ ಸದಸ್ಯರಾಜಿ ರಾಜಕೀಯ ಜೀವನ ಆರಂಭಿಸಿದ್ದ ಅವರು, ಚಿಕ್ಕಮಗಳೂರು ಟಿಎಪಿಸಿಎಂಎಸ್ ಅಧ್ಯಕ್ಷರಾಗಿ, ಚಿಕ್ಕಮಗಳೂರು ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ, ಉದ್ದೇಬೋರನಹಳ್ಳಿ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ, ಬಿಳೇಕಲ್ಲಹಳ್ಳಿ ಎಂಪಿಸಿಎಸ್ ಅಧ್ಯಕ್ಷರಾಗಿ, ಹಾಸನ ಹಾಲು ಒಕ್ಕೂಟ ವ್ಯಾಪ್ತಿಯ ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷರಾಗಿ, ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರಾಗಿ, ರಾಜ್ಯ ವಿಮಾ ಸಹಕಾರ ಸಂಘದ ನಿರ್ದೇಶಕರಾಗಿ, ದೆಹಲಿಯ ಕ್ರಿಬ್ಕೋ ಸಂಸ್ಥೆಯ ನಿರ್ದೇಶಕರಾಗಿ, ನ್ಯಾಫೆಡ್ ಸಂಸ್ಥೆ ನಿರ್ದೇಶಕರಾಗಿ, ಇಂಡಿಯನ್ ಪೋಟಾಸ್ ಲಿಮಿಟೆಡ್ ನಿರ್ದೇಶಕರಾಗಿ, ತಾಲೂಕು ಪಂಚಾಯತ್ ಸದಸ್ಯರಾಗಿ, ಜಿಲ್ಲಾಪಂಚಾಯತ್ 2 ಬಾರಿ ಸದಸ್ಯರಾಗಿ, ಬೀರೂರು ವಿಧಾನಸಭಾ ಕ್ಷೇತ್ರದ ಸದಸ್ಯರಾಗಿ
ಒಂದು ಬಾರಿ ವಿಧಾನಪರಿಷತ್ ಸದಸ್ಯರಾಗಿ ಅವರು ಕೆಲಸ ಮಾಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button