Kannada NewsKarnataka NewsLatestUncategorized

*ಬೆಳಗಾವಿ: 9070 ಜನರಿಗೆ ತಮ್ಮ ಮನೆಯಿಂದಲೇ ಮತ ಚಲಾವಣೆಗೆ ಅವಕಾಶ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜಿಲ್ಲೆಯಲ್ಲಿ ಒಟ್ಟು‌ 9070 ವಿಕಲಚೇತನರು ಮತ್ತು 80 ವರ್ಷ ಮೇಲ್ಪಟ್ಟ ಜನರು ಮನೆಯಿಂದಲೇ ತಮ್ಮ ಮತ ಚಲಾಯಿಸಲು ಇಚ್ಛಿಸಿ ಈಗಾಗಲೇ ನಿಗದಿತ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಿರುತ್ತಾರೆ. ಆಯಾ ಮತಕ್ಷೇತ್ರಗಳಲ್ಲಿ ನಿಯೋಜಿತ ಅಧಿಕಾರಿಗಳ ತಂಡವು ಏಪ್ರಿಲ್ 29 ರಿಂದ ಮೇ 1 ರವರೆಗೆ ಸದರಿ ಮತದಾರರ‌ ಮನೆ ಮನೆಗೆ ತೆರಳಿ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಮತಸಂಗ್ರಹ ಮಾಡಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ (ಏ.20) ನಡೆದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಒಟ್ಟು ಹದಿನೆಂಟು ಮತಕ್ಷೇತ್ರಗಳಲ್ಲಿ ಒಟ್ಟಾರೆ 9070 ಜನರು ಮನೆಯಿಂದಲೇ ಮತದಾನ‌ ಮಾಡಲು ಇಚ್ಛಿಸಿ ಈಗಾಗಲೇ ನಿಗದಿತ ನಮೂನೆಯಲ್ಲಿ ಒಪ್ಪಿಗೆ ಸಲ್ಲಿಸಿರುತ್ತಾರೆ. ಹೀಗೆ ಒಪ್ಪಿಗೆ ಸೂಚಿಸಿರುವ ಮತದಾರರು ಕಡ್ಡಾಯವಾಗಿ ಮನೆಯಿಂದಲೇ ಮತ ಚಲಾಯಿಸಬೇಕಾಗುತ್ತದೆ. ಆದರೆ ಮೇ 10 ರಂದು ಮತಗಟ್ಟೆಗಳಿಗೆ ತೆರಳಿ ಮತ ಚಲಾವಣೆಗೆ ಅವಕಾಶ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇದರಲ್ಲಿ 80 ವರ್ಷ ಮೇಲ್ಪಟ್ಟಿರುವವರು ಒಟ್ಟು 7362 ಜನರು ಹಾಗೂ 1708 ವಿಕಲಚೇತನರು ಇದ್ದಾರೆ.

80 ವರ್ಷ ಮೇಲ್ಪಟ್ಟಿರುವವರ ಮತಕ್ಷೇತ್ರವಾರು ವಿವರ:

ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟಿರುವ ಒಟ್ಟು 7362 ಜನರು ಮನೆಯಿಂದಲೇ ಮತ ಚಲಾಯಿಸಲಿದ್ದು, ಮತಕ್ಷೇತ್ರವಾರು ವಿವರ ಈ ಕೆಳಕಂಡಂತಿರುತ್ತದೆ.

ನಿಪ್ಪಾಣಿ(559), ಚಿಕ್ಕೋಡಿ-ಸದಲಗಾ(388), ಅಥಣಿ(299), ಕಾಗವಾಡ(365), ಕುಡಚಿ(211), ರಾಯಬಾಗ(314), ಹುಕ್ಕೇರಿ (151), ಅರಭಾವಿ(535), ಗೋಕಾಕ(351), ಯಮಕನಮರಡಿ (183), ಬೆಳಗಾವಿ ಉತ್ತರ(542), ಬೆಳಗಾವಿ ದಕ್ಷಿಣ (795), ಬೆಳಗಾವಿ ಗ್ರಾಮೀಣ (350), ಖಾನಾಪುರ(483), ಕಿತ್ತೂರು (347), ಬೈಲಹೊಂಗಲ (704), ಸವದತ್ತಿ-ಯಲ್ಲಮ್ಮ(407) ಹಾಗೂ ರಾಮದುರ್ಗ (378).

ವಿಕಲಚೇತನ ಮತದಾರರ ವಿವರ:

ಜಿಲ್ಲೆಯಲ್ಲಿ ಒಟ್ಟು 1708 ವಿಕಲಚೇತನರು ಮನೆಯಿಂದಲೇ ಮತ ಚಲಾಯಿಸಲಿದ್ದು, ಮತಕ್ಷೇತ್ರವಾರು ವಿವರ ಈ ಕೆಳಕಂಡಂತಿರುತ್ತದೆ.

ನಿಪ್ಪಾಣಿ(90), ಚಿಕ್ಕೋಡಿ-ಸದಲಗಾ(91), ಅಥಣಿ(52), ಕಾಗವಾಡ(54), ಕುಡಚಿ(50), ರಾಯಬಾಗ(85), ಹುಕ್ಕೇರಿ (92), ಅರಭಾವಿ(114), ಗೋಕಾಕ(105), ಯಮಕನಮರಡಿ (97), ಬೆಳಗಾವಿ ಉತ್ತರ(55), ಬೆಳಗಾವಿ ದಕ್ಷಿಣ (88), ಬೆಳಗಾವಿ ಗ್ರಾಮೀಣ (67), ಖಾನಾಪುರ(174), ಕಿತ್ತೂರು (143), ಬೈಲಹೊಂಗಲ (148), ಸವದತ್ತಿ-ಯಲ್ಲಮ್ಮ(77) ಹಾಗೂ ರಾಮದುರ್ಗ (126)

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು 20 ತಂಡಗಳು ಮೂರು ದಿನಗಳ ಕಾಲ ಮನೆ ಮನೆಗೆ ತೆರಳಿ‌ ಮತ ಸಂಗ್ರಹಿಸಲಿವೆ.
9070 ಜನರು ಮನೆಯಿಂದಲೇ ಮತದಾನ ಮಾಡಲು ಇಚ್ಛಿಸಿ ನಿಗದಿತ 12 ಡಿ ನಮೂನೆಯನ್ನು ಭರ್ತಿ‌ ಮಾಡಿ ನೀಡಿರುತ್ತಾರೆ. ನಿಗದಿತ ನಮೂನೆಯನ್ನು ಭರ್ತಿ ಮಾಡಿದವರ ಮನೆಗೆ ತೆರಳಿ ಮತದಾನ ಪ್ರಕ್ರಿಯೆ ನಡೆಸಲಾಗುತ್ತದೆ.

ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕೂಡ‌ ಉಪಸ್ಥಿತರಿರಲು ಅವಕಾಶವಿರುತ್ತದೆ. ಈ ರೀತಿ ಮತಸಂಗ್ರಹ ಸಂದರ್ಭದಲ್ಲಿ ಉಪಸ್ಥಿತರಿರುವ ಏಜೆಂಟರುಗಳ ಕುರಿತು ಎಲ್ಲ ರಾಜಕೀಯ ಪಕ್ಷಗಳು ಮುಂಚಿತವಾಗಿ ಹಾಗೂ ಲಿಖಿತವಾಗಿ ಮಾಹಿತಿಯನ್ನು ನೀಡಬೇಕು.
ಯಾವುದೇ ಕಾರಣಕ್ಕೂ ಮತದಾರರಿಗೆ ಆಮಿಷ ಒಡ್ಡಬಾರದು ಮತ್ತು ‌ಮತದಾನ ಗೌಪ್ಯತೆ ಕಾಪಾಡಬೇಕಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಇದೇ ಸಂದರ್ಭದಲ್ಲಿ ಕೆಲವು ಸಾಮಗ್ರಿಗಳ ದರಪಟ್ಟಿ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜತೆ ಚರ್ಚಿಸಿ ದರಪಟ್ಟಿಯನ್ನು ಅಂತಿಮಗೊಳಿಸಲಾಯಿತು.

ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಜಿಲ್ಲಾ ವೆಚ್ಚ ತಂಡದ ನೋಡಲ್ ಅಧಿಕಾರಿ ಪರಶುರಾಮ ದುಡಗುಂಟಿ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

https://pragati.taskdun.com/d-k-sureshnomination-filekanakapuravidhanasabha-election/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button