Kannada NewsKarnataka News

ಕೆರೆ ನೀರು ಕುಡಿದ್ರೆ ನಶೆ ಎರಬಹುದು ಹುಷಾರ್!

ಗ್ರಾಮದ ಕೆರೆ ಸುತ್ತ ಟೆಟ್ರಾ ಪಾಕೆಟ್   

* ಗ್ರಾಮದಲ್ಲಿ ಹೆಚ್ಚಿದ ಅಕ್ರಮ ಸಾರಾಯಿ ಮಾರಾಟ
* ಕಣ್ಮುಚ್ಚಿ ಕುಳಿತಿದೆಯಾ ಅಬಕಾರಿ ಇಲಾಖೆ
* ಅಕ್ರಮ ಸಾರಾಯಿ ಮಾರಾಟಕ್ಕೆ ಕಡಿವಾಣ ಯಾವಾಗ..?

ಪ್ರಗತಿವಾಹಿನಿ ಸುದ್ದಿ, ಸವದತ್ತಿ : ತಾಲೂಕಿನ ಹಂಚಿನಾಳ ಗ್ರಾಮದ ಕೆರೆಯೊಂದರಲ್ಲಿ ಬಿದ್ದ ಟೆಟ್ರಾ ಪಾಕೆಟ್ ನೋಡಿದರೆ ಇದೇನು ಸಾರಾಯಿ ಕೆರೆಯೊ ಅಥವಾ ನೀರಿನ ಕೆರೆಯೊ ಎಂಬ ಗೊಂದಲ ಪ್ರತಿಯೊಬ್ಬರಲ್ಲೂ ಮೂಡುತ್ತದೆ.

 ಗ್ರಾಮದಲ್ಲಿ 3 ಕೆರೆಗಳಿವೆ. 2 ಕೆರೆಗಳ ಕಾಮಗಾರಿ ನಡೆಯುತ್ತಿದ್ದು ಸಧ್ಯಕ್ಕೆ 1 ಕೆರೆಯಲ್ಲಿ ಮಾತ್ರ ನೀರಿದೆ. ಗ್ರಾಮದ ಜನ ನಿತ್ಯ ಬಳಕೆಗಾಗಿ ಈ ಕೆರೆಯ ನೀರನ್ನೇ ಅವಲಂಬಿಸಿದ್ದಾರೆ.

ಹಂಚಿನಾಳದ 6ನೇ ವಾರ್ಡನಲ್ಲಿರುವ ಈ ಕೆರೆಯಲ್ಲಿ ಕುಡುಕರು ನಿರ್ಭಯವಾಗಿ ಕುಡಿದು ಟೆಟ್ರಾ ಪಾಕೆಟ್‌ ಅನ್ನು ಕೆರೆ ಒಳಗೆ ಹಾಗೂ ದಡದ ಮೇಲೆ ಎಸೆದು ಹೋಗುತ್ತಿರುವ ಪರಿಣಾಮ ನೀರಲ್ಲಿ ಮತ್ತು ದಡದ ಮೇಲೆ ಸರಾಯಿ ಟೆಟ್ರಾ ಪಾಕೆಟ್‌ ರಾಶಿಯೆ ಬಿದ್ದದೆ. ಈ ನೀರಿನಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದ್ದು ನೀರು ಬಳಕೆ ಮಾಡಲು ಸಾರ್ವಜನಿಕರು ಹೆದರುವ ಸ್ಥಿತಿ ನಿರ್ಮಾಣವಾಗಿದೆ.

ಕೆರೆಯನ್ನು ಹೊರತುಪಡಿಸಿ ಗ್ರಾಮದ ಬಸ್ ನಿಲ್ದಾಣದ ಆವರಣ ಮತ್ತು ಇನ್ನೂ ಹಲವು ಕಡೆ ಸರಾಯಿ ಟೆಟ್ರಾ ಪಾಕೆಟ್ಗಳು ಬಿದ್ದಿರುವುದನ್ನು ನೋಡಿದರೆ ಗ್ರಾಮದಲ್ಲಿ ಅಕ್ರಮ ಸರಾಯಿ ಮಾರಾಟ ರಾಜಾ ರೋಷವಾಗಿ ನಡೆಯುತ್ತಿದ್ದಂತೆ ಕಾಣಬರುತ್ತದೆ.

Home add -Advt

ಅಕ್ರಮ ಸಾರಾಯಿಗೆ ಕಡಿವಾಣ ಯಾವಾಗ..?

ಗ್ರಾಮದಲ್ಲಿ ಅಕ್ರಮ ಸರಾಯಿ ಮಾರಾಟ ಹೆಚ್ಚಾಗಿದ್ದರಿಂದಾಗಿ ಕುಡುಕರು ಸರಾಯಿ ಕುಡಿದು ಕೆರೆ ಹಾಗೂ ಎಲ್ಲೆಂದರಲ್ಲಿ ಪಾಕೆಟ್‌ ಗಳನ್ನು ಎಸೆಯುತ್ತಿದ್ದಾರೆ, ಗ್ರಾಮದಲ್ಲಿ ಅಕ್ರಮ ಸರಾಯಿ ಮಾರಾಟ ಜೋರಾಗಿದ್ದು ಸಂಬಂಧಪಟ್ಟ ಅಬಕಾರಿ ಇಲಾಖೆ ಅಧಿಕಾರಿಗಳು ಕೈಕಟ್ಟಿ ಕುಳಿತಿರುವುದು ಗ್ರಾಮಸ್ಥರಲ್ಲಿ  ಆತಂಕ ಮೂಡಿಸಿದೆ.

ಗ್ರಾಮದ ಕೆರೆಯೊಂದರಲ್ಲಿ ಬಿದ್ದಿರುವ ಸರಾಯಿ ಟೆಟ್ರಾ ಪಾಕೆಟ್‌ ಗಳನ್ನು ನೋಡಿಯೂ ನೋಡದಂತಿರುವ ಗ್ರಾಮದ ಅಧಿಕಾರಿ ಮತ್ತು ಆಡಳಿತ ವರ್ಗಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಇನ್ನಾದರು ಸಂಬಂಧಪಟ್ಟವರು ಇತ್ತ ಗಮನ ಹರಿಸುತ್ತಾರಾ ಎಂದು ಕಾದು ನೋಡಬೇಕು.

ಗ್ರಾಮದಲ್ಲಿ ಅಕ್ರಮ ಸರಾಯಿ ಮಾರಾಟದ ವಿಷಯ ಈಗ ನನ್ನ ಗಮನಕ್ಕೆ ಬಂದಿದ್ದು ಅಕ್ರಮ ಸರಾಯಿ ಮಾರಾಟ ಮಾಡುವವರ ವಿರುದ್ಧ ಸೂಕ್ತವಾದ ಕ್ರಮ ಕೈಗೊಳ್ಳುತ್ತೇನೆ.

  • – ಶ್ರೀಶೈಲ ಅಕ್ಕಿ
    (ಅಬಕಾರಿ PSI ಸವದತ್ತಿ)

(ವರದಿ –  ಪ್ರಶಾಂತ ಹೂಗಾರ)

Related Articles

Back to top button