ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನಾಲ್ಕೂವರೆ ವರ್ಷದ ಹಿಂದೆ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಮಗುವನ್ನು ಬಿಟ್ಟು ಹೋದ ಮಹಿಳೆಯೊಬ್ಬಳು ನಾಪತ್ತೆಯಾಗಿದ್ದು, ಮಗುವಿನ ಪೋಷಕರ ಪತ್ತೆಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮನವಿ ಮಾಡಿದ್ದಾರೆ.
ಇಂದಿರಾ ಮಾರುತಿ ಬಾಗಾಡಿ ಇವಳಿಗೆ ವೈಷ್ಣವಿ (ವಯಸ್ಸು:4 ವರ್ಷ 7 ತಿಂಗಳು) ಎಂಬ ಹೆಣ್ಣು ಮಗುವಿದ್ದು, ತನ್ನ ಮಗುವನ್ನು ರಕ್ಷಣೆ ಮತ್ತು ಪೋಷಣೆ ಮಾಡಲಿಕ್ಕೆ ಸಾಧ್ಯವಾಗದೇ ಮಗುವಿನೊಂದಿಗೆ ದಿನಾಂಕ:೨೧-೧೨-೨೦೨೧ ರಂದು ಬೆಳಗಾವಿಯ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಾಗಿ ನನಗೆ ಯಾವುದೇ ಸ್ವಂತ ಮನೆ ಮತ್ತು ಜೀವನ ನಿರ್ವಹಣೆ ಮಾಡುವುದಕ್ಕೆ ಉದ್ಯೋಗ ಇಲ್ಲದೇ ಇರುವುದರಿಂದ ತಾತ್ಕಾಲಿಕವಾಗಿ ರಕ್ಷಣೆ ಮತ್ತು ಪೋಷಣೆಗಾಗಿ ಮಗುವಿಗೆ ಅಭಿರಕ್ಷಣೆ ಕೇಳಿ ಮೇಲಿಂದ ಮೇಲೆ ಮಗುವನ್ನು ನೋಡಿಕೊಂಡು ಹೋಗುವುದಾಗಿ ಸಮಿತಿಯವರಿಗೆ ತಿಳಿಸಿದ್ದಳು.
ನಂತರ ಮಗುವಿನ ಅತ್ಯುತ್ತಮ ಹಿತಾಸಕ್ತಿಯನ್ನು ಪರಿಗಣಿಸಿ ಸಮಿತಿಯವರು ಮಗುವನ್ನು ತಾತ್ಕಾಲಿಕವಾಗಿ ಸ್ವಾಮಿ ವಿವೇಕಾನಂದ ದತ್ತು ಸ್ವೀಕಾರ ಕೇಂದ್ರಕ್ಕೆ ಅಭಿರಕ್ಷಣೆಗಾಗಿ ದಾಖಲು ಮಾಡಿರುತ್ತಾರೆ. ಪ್ರಾರಂಭದಲ್ಲಿ ತಾಯಿ ಎರಡು ಬಾರಿ ಮಾತ್ರ ಬಂದು ಮಗುವನ್ನು ನೋಡಿಕೊಂಡು ಹೊಗಿದ್ದು, ಕಳೆದ ೦೩ ವರ್ಷದಿಂದ ತಾಯಿ ತನ್ನ ಮಗುವನ್ನು ಭೇಟಿ ಮಾಡಲು ಬಂದಿರುವುದಿಲ್ಲ.
ತಾಯಿಯ ಪತ್ತೆಗಾಗಿ ಪ್ರಕರಣವನ್ನು ದಾಖಲು ಮಾಡಲಾಗಿದ್ದು, ಸದರಿ ಮಗುವಿನ ಜೈವಿಕ ಪೋಷಕರು ಇದ್ದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪ್ಲಾಟ ನಂ.೨೬೮೮, ಸೆಕ್ಟರ್ ನಂ.೧೨ ಡಬಲ್ ರೋಡ ಶ್ರೀನಗರ, ಬೆಳಗಾವಿ ದೂ: ೦೮೩೧-೨೪೭೪೧೧೧ ಕ್ಕೆ ಸಂಪರ್ಕಿಸಬೇಕು. ಒಂದು ವೇಳೆ ವೈಷ್ಣವಿ ಮಗುವಿನ ಜೈವಿಕ ಪೋಷಕರು ಪತ್ತೆಯಾಗದೇ ಇದ್ದಲ್ಲಿ ಮಗವನ್ನು ಕಾನೂನಾತ್ಮಕ ದತ್ತು ಪ್ರಕ್ರಿಯೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದೆ.

