
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬರೋಬ್ಬರಿ 24 ಗಂಟೆಗಳ ಕಾಲ ಶಾಸಕ ಜಮೀರ್ ಅಹ್ಮದ್ ಮನೆ ಪರಿಶೀಲನೆ ನಡೆಸಿರುವ ಇಡಿ ಇಧಿಕಾರಿಗಳು ದಾಳಿ ಅಂತ್ಯಗೊಳಿಸಿದ್ದಾರೆ. ಬೆಂಗಳೂರು ಕಂಟೇನ್ಮೆಂಟ್ ಬಳಿಯ ಜಮೀರ್ ಅಹ್ಮದ್ ಮನೆಯೊಳಗಿನ ಇಂಟಿರಿಯರ್ ಡಿಸೈನ್, ವೈಭವೋಪೇತವಾದ ಅರೆಬಿಕ್ ಶೈಲಿಯ ಪೀಠೋಪಕರಣಗಳನ್ನು ಕಂಡು ಇಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ಇಡಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್, ನನ್ನ ಮನೆ ನಿರ್ಮಾಣದ ಬಗ್ಗೆ ಯಾರೋ ದೂರು ನೀಡಿದ್ದರು. ಈ ಕಾರಣಕ್ಕೆ ದಾಳಿ ನಡೆದಿದೆ. ಮನೆ ನಿರ್ಮಿಸಲು 7 ವರ್ಷ ಬೇಕಾಗಿದೆ. ಎಲ್ಲವೂ ವೈಟ್ ಮನಿಯಿಂದ, ನನ್ನ ಸ್ವಂತ ಸಂಪಾದನೆಯಿಂದಲೇ ನಿರ್ಮಿಸಿದ್ದು. ಮೊದಲಿನಿಂದಲೂ ಆದಾಯ ತೆರಿಗೆ ಎಲ್ಲವನ್ನೂ ಸರಿಯಾಗಿಯೇ ಪಾವತಿ ಮಾಡಿದ್ದೇನೆ. ಮನೆಯ ಮೇಲೆ ಹಲವರಿಗೆ ಕಣ್ಣಿತ್ತು. ಹಾಗಾಗಿ ಯಾರೋ ಇಡಿಗೆ ದೂರು ನೀಡಿದ್ದರು. ದಾಳಿ ನಡೆಸಿದ್ದಾರೆ ಎಂದರು.
ನಿನ್ನೆ ನಡೆದಿದ್ದ ದಾಳಿ ಇಂದು ಅಂತ್ಯವಾಗಿದೆ. ಅಧಿಕಾರಿಗಳಿಗೆ ಎಲ್ಲಾ ದಾಖಲೆಗಳನ್ನು, ಮಾಹಿತಿಯನ್ನು ನೀಡಿದ್ದೇನೆ. ಎಲ್ಲವನ್ನು ಪರಿಶೀಲನೆ ನಡೆಸಿ, ಸರಿಯಾಗಿ ಇರುವುದರಿಂದಲೇ ಸಮಾಧಾನವಾಗಿ ವಾಪಸ್ ಹೋಗಿದ್ದಾರೆ. ಅಗತ್ಯಬಿದ್ದರೆ ವಿಚಾರಣೆಗೆ ಕರೆಯುತ್ತೇವೆ ಎಂದಿದ್ದಾರೆ. ರಾಜಕೀಯದಲ್ಲಿ ವಿರೋಧಿಗಳು ಸಹಜ. ನನಗೆ ಆಗದವರು ದೂರು ನೀಡಿದ್ದಾರೆ. ಇಂದಲ್ಲ ನಾಳೆ ಇಡಿ ಅಧಿಕಾರಿಗಳಿಂದ ಮನೆ ಪರಿಶೀಲನೆ ನಡೆಯಲೇ ಬೇಕಿತ್ತು. ಈಗಲೇ ಅಧಿಕಾರಿಗಳು ಬಂದು ಪರಿಶೀಲಿಸಿದ್ದು ಒಳ್ಳೆಯದಾಯಿತು. ಇದರಿಂದ ನನಗೂ ನೆಮ್ಮದಿ. ಅಧಿಕಾರಿಗಳ ತನಿಖೆಗೆ ಎಲ್ಲಾ ರೀತಿಯಲ್ಲು ಸಹಕರಿಸುತ್ತೇನೆ ಎಂದು ಹೇಳಿದರು.
ಕೋವಿಡ್ -19: ಇಂದು ಮುಖ್ಯಮಂತ್ರಿ ಬೊಮ್ಮಾಯಿ ಮೊದಲ ಮಹತ್ವದ ಸಭೆ