Latest

ಜಿಲ್ಲೆಯಲ್ಲಿ ಒಟ್ಟು 37.22 ಲಕ್ಷ ಮತದಾರರು, 4434 ಮತಗಟ್ಟೆಗಳು

ಮಾ.೨೮ರಂದು ಅಧಿಸೂಚನೆ: ಡಾ.ಬೊಮ್ಮನಹಳ್ಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

 ಏಪ್ರಿಲ್ ೨೩ ರಂದು ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಮಾರ್ಚ ೨೮ ರಂದು ಅಧಿಸೂಚನೆ ಪ್ರಕಟಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ೧೬-೧-೨೦೧೯ಕ್ಕೆ ೩೭,೨೨,೦೩೪ ಮತದಾರರು ಇದ್ದು, ಅದರಲ್ಲಿ ೧೮,೮೭,೨೮೩ ಪುರುಷರು; ೧೮,೩೪,೬೨೯ ಮಹಿಳೆಯರು ಮತ್ತು ೧೨೨ ಜನರು ಇತರೆ ವರ್ಗದವರು ಇದ್ದಾರೆ. ಜಿಲ್ಲೆಯಾದ್ಯಂತ ಒಟ್ಟಾರೆ ೪೪೩೪ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ೩೨೫೫ ಹಾಗೂ ನಗರ ಪ್ರದೇಶದಲ್ಲಿ ೧೧೭೯ ಮತಗಟ್ಟೆಗಳು ಇರಲಿವೆ.
ಒಟ್ಟು ೨೩,೩೩೨ ವಿಕಲಚೇತನ ಮತದಾರರು ಪಟ್ಟಿಯಲ್ಲಿದ್ದು, ೧೮-೧೯ ವಯೋಮಾನದ ಒಟ್ಟು ೬೦,೬೫೪ ಯುವಕ/ಯುವತಿಯರು ಮತದಾರರ ಪಟ್ಟಿಯಲ್ಲಿದ್ದಾರೆ.
ಬೆಳಗಾವಿ, ಚಿಕ್ಕೋಡಿ ಹಾಗೂ ಕೆನರಾ(ಉ.ಕ) ಹೀಗೆ ಒಟ್ಟು ಮೂರು ಲೋಕಸಭಾ ಕ್ಷೇತ್ರಗಳು ಜಿಲ್ಲೆಯ ವ್ಯಾಪ್ತಿಗೆ ಬರಲಿವೆ. ಜಿಲ್ಲೆಯ ಒಟ್ಟು ೧೮ ವಿಧಾನಸಭಾ ಕ್ಷೇತ್ರಗಳ ಪೈಕಿ ಖಾನಾಪುರ ಹಾಗೂ ಕಿತ್ತೂರು ವಿಧಾನಸಭಾ ಕ್ಷೇತ್ರಗಳು ಕೆನರಾ(ಉ.ಕ). ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತವೆ. ಉಳಿದ ಹದಿನಾರು ವಿಧಾನಸಭಾ ಕ್ಷೇತ್ರಗಳ ಪೈಕಿ ತಲಾ ಎಂಟು ವಿಧಾನಸಭಾ ಕ್ಷೇತ್ರಗಳು ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ ಎಂದು ಅವರು ತಿಳಿಸಿದರು.

ಕ್ಷೇತ್ರವಾರು ಮತದಾರರ ವಿವರ:
ಚಿಕ್ಕೋಡಿ ಲೋಕಸಭಾ ಕ್ಷೇತ್ರ- ಒಟ್ಟು ಮತದಾರರು-೧೫,೭೯,೩೦೯; ಪುರುಷರು-೮,೦೬,೦೫೨, ಮಹಿಳೆಯರು-೭,೭೩,೨೦೨, ಇತರೆ-೫೫
ಬೆಳಗಾವಿ ಲೋಕಸಭಾ ಕ್ಷೇತ್ರ-ಒಟ್ಟು ಮತದಾರರು-೧೭,೪೯,೦೦೫; ಪುರುಷರು-೮,೭೯,೬೧೯; ಮಹಿಳೆಯರು-೮,೬೯,೩೩೩, ಇತರೆ-೫೩
ಕೆನರಾ(ಉ.ಕ.) ಲೋಕಸಭಾ ಕ್ಷೇತ್ರ- ಒಟ್ಟು ಮತದಾರರು-೩,೯೩,೭೨೦; ಪುರುಷರು-೨,೦೧,೬೧೨; ಮಹಿಳೆಯರು-೧,೯೨,೦೯೪; ಇತರೆ-೧೪

ಚುನಾವಣಾ ವೇಳಾಪಟ್ಟಿ:
ರಾಜ್ಯಪತ್ರ ಹೊರಡಿಸುವ ದಿನಾಂಕ: ೨೮-೦೩-೨೦೧೯(ಗುರುವಾರ)
ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ: ೦೪-೦೪-೨೦೧೯(ಗುರುವಾರ)
ನಾಮಪತ್ರಗಳ ಪರಿಶೀಲನೆ ದಿನಾಂಕ: ೦೫-೦೪-೨೦೧೯(ಶುಕ್ರವಾರ)
ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಕಡೆಯ ದಿನಾಂಕ: ೦೮-೦೪-೨೦೧೯(ಸೋಮವಾರ)
ಮತದಾನ ದಿನಾಂಕ: ೨೩-೦೪-೨೦೧೯(ಮಂಗಳವಾರ)
ಮತಗಳ ಎಣಿಕೆ ದಿನಾಂಕ: ೨೩-೦೫-೨೦೧೯(ಗುರುವಾರ)

Home add -Advt

ಮೊಬೈಲ್ ಆಪ್, ಮತದಾರರ ಸಹಾಯವಾಣಿ:
ಸಾರ್ವಜನಿಕರು, ಮತದಾರರು ತಮ್ಮ ಗಮನಕ್ಕೆ ಬರುವ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ನೇರವಾಗಿ ಚುನಾವಣಾ ಆಯೋಗದ ಗಮನಕ್ಕೆ ತರಲು ಅನುಕೂಲವಾಗುವಂತೆ ಈ ಬಾರಿ ಸಿವಿಜಿಲ್ ಎಂಬ ಮೊಬೈಲ್ ಅಪ್ಲಿಕೇಶನ್ ಸಿದ್ಧಪಡಿಸಲಾಗಿದೆ. ಅಂಡ್ರಾಯಿಡ್ ಸೌಲಭ್ಯವುಳ್ಳ ಮೊಬೈಲ್ ಬಳಕೆದಾರರು ಗೂಗಲ್ ಪ್ಲೇಸ್ಟೋರ್ ಮೂಲಕ ಸಿವಿಜಿಲ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು.
ದೂರು ಸಲ್ಲಿಸುವವರು ಬಯಸಿದರೆ ಅವರ ಮಾಹಿತಿಯನ್ನು ಗೌಪ್ಯವಾಗಿರಿಸುವ ಸೌಲಭ್ಯವೂ ಇದರಲ್ಲಿದ್ದು, ಯಾವುದೇ ದೂರು ನೀಡಿದ ೧೦೦ ನಿಮಿಷಗಳಲ್ಲಿ ಕೈಗೊಂಡ ಕ್ರಮದ ಕುರಿತು ದೂರುದಾರರಿಗೆ ಮಾಹಿತಿ ನೀಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.
ಅದೇ ರೀತಿ ಮತದಾರರ ಸಹಾಯವಾಣಿ ೦೮೩೧-೧೯೫೦ ಮೂಲಕ ಸಾರ್ವಜನಿಕರು ತಮ್ಮ ಮತಗಟ್ಟೆ ವಿಳಾಸ ತಿಳಿದುಕೊಳ್ಳಬಹುದು. ವಿಶೇಷಚೇತನ ಮತದಾರರಿಗೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಪ್ರಚಾರ ಸೇರಿದಂತೆ ವಿವಿಧ ಬಗೆಯ ಅನುಮತಿಗಳನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ಸುವಿಧಾ ಆಪ್ ಅಭಿವೃದ್ಧಿಪಡಿಸಲಾಗಿದೆ ಎಂದರು.

ಜಾಹೀರಾತು ಪೂರ್ವಾನುಮತಿ ಕಡ್ಡಾಯ:
ಟಿವಿ, ಚಿತ್ರಮಂದಿರ, ಲೋಕಲ್ ಕೇಬಲ್, ಸಾಮಾಜಿಕ ಜಾಲತಾಣಗಳು ಸೇರಿದಂತೆ ಯಾವುದೇ ಬಗೆಯ ದೃಶ್ಯ-ಶ್ರವಣ ಮಾಧ್ಯಮದ ಮೂಲಕ ಯಾವುದೇ ಚುನಾವಣಾ ಜಾಹೀರಾತು ಪ್ರಕಟಿಸಬೇಕಾದರೂ ಜಿಲ್ಲಾಮಟ್ಟದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ(ಎಂಸಿಎಂಸಿ)ಯಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಡಾ.ಬೊಮ್ಮನಹಳ್ಳಿ ತಿಳಿಸಿದರು.
ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಮಾಹಿತಿ ಹರಡುವುದು ಅಥವಾ ಪ್ರಚೋದನಾಕಾರಿ ವಿಷಯಗಳನ್ನು ಹಂಚಿಕೊಂಡರೆ ಭಾರತೀಯ ದಂಡಸಂಹಿತೆ ಪ್ರಕಾರ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.

ಹಣದ ವಹಿವಾಟು-ಬ್ಯಾಂಕುಗಳಿಗೆ ಸೂಚನೆ:
ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನಡೆಯುವ ಪ್ರತಿಯೊಂದು ವ್ಯವಹಾರಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ಒದಗಿಸಬೇಕು ಎಂದು ಎಲ್ಲ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಅದೇ ರೀತಿ ಸಾರ್ವಜನಿಕರು ೫೦ ಸಾವಿರಕ್ಕಿಂತ ಹೆಚ್ಚಿನ ನಗದು ಹಣ ತೆಗೆದುಕೊಂಡು ಹೋಗಬೇಕಾದರೆ ಸೂಕ್ತ ದಾಖಲಾತಿಗಳನ್ನು ಹೊಂದಿರುವುದು ಕಡ್ಡಾಯ. ಅಕ್ರಮವಾಗಿ ಹಣ ಸಾಗಿಸುವುದು ಕಂಡುಬಂದಲ್ಲಿ ಹಣವನ್ನು ನಿಯಮಾವಳಿ ಪ್ರಕಾರ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇನ್ನು ಮದುವೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅಥವಾ ಪತ್ರಿಕಾಗೋಷ್ಠಿಗಳನ್ನು ನಡೆಸಲು ಪೂರ್ವಾನುಮತಿಯ ಅಗತ್ಯವಿರುವುದಿಲ್ಲ. ಆದರೆ ಮದುವೆ ಅಥವಾ ಧಾರ್ಮಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಮಾಡುವುದಕ್ಕೆ ನಿರ್ಭಂಧ ವಿಧಿಸಲಾಗಿರುತ್ತದೆ.
ಅಭ್ಯರ್ಥಿ ಅಥವಾ ಪಕ್ಷಗಳು ಪತ್ರಿಕಾಗೋಷ್ಠಿ ಮಾಡಿದರೆ ಅದರ ಖರ್ಚುವೆಚ್ಚವನ್ನು ಆಯಾ ಅಭ್ಯರ್ಥಿ ಅಥವಾ ಪಕ್ಷದ ವೆಚ್ಚಕ್ಕೆ ಸೇರ್ಪಡೆ ಮಾಡಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಬೊಮ್ಮನಹಳ್ಳಿ ವಿವರಿಸಿದರು.

ಶೇ.೧೫ರಷ್ಟು ಮತದಾನ ಹೆಚ್ಚಳ ಗುರಿ:
ಸ್ವೀಪ್ ಸಮಿತಿಯ ಮೂಲಕ ಮತದಾನ ಹಾಗೂ ಮತದಾರರ ನೋಂದಣಿ ಕುರಿತು ಜಿಲ್ಲೆಯಾದ್ಯಂತ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದ್ದು, ಕಳೆದ ಲೋಕಸಭಾ ಚುನಾವಣೆಗಿಂತ ಕನಿಷ್ಠ ಶೇ.೧೫ರಷ್ಟು ಮತದಾನ ಪ್ರಮಾಣ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ.ತಿಳಿಸಿದರು.
ಇದೇ ವೇಳೆ ಮಾತನಾಡಿದ ಉತ್ತರ ವಲಯ ಐಜಿಪಿ ಎಚ್.ಜಿ.ಆರ್.ಸುಹಾಸ್ ಅವರು, ಮಾದರಿ ನೀತಿ ಸಂಹಿತೆ ಜಾರಿ ಹಾಗೂ ಗಡಿಭಾಗದ ಚೆಕ್‌ಪೋಸ್ಟ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ನೆರೆಯ ಗೋವಾ ಹಾಗೂ ಮಹಾರಾಷ್ಟ್ರದ ಅಧಿಕಾರಿಗಳ ಜತೆ ಶೀಘ್ರ ಸಭೆ ನಡೆಸಲಾಗುವುದು ಎಂದು ಹೇಳಿದರು.
ಶಾಂತಿಯುತ ಚುನಾವಣೆ ನಡೆಸಲು ಕೈಗೊಳ್ಳಲಾಗಿರುವ ಭದ್ರತಾ ಕ್ರಮಗಳ ಕುರಿತು ನಗರ ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಎಚ್.ಸುಧೀರಕುಮಾರ್ ರೆಡ್ಡಿ ಮಾಹಿತಿ ನೀಡಿದರು.

ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ., ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಜಗದೀಶ್ ರೂಗಿ, ಚುನಾವಣಾ ವೆಚ್ಚ ನಿಗಾ ಸಮಿತಿಯ ನೋಡಲ್ ಅಧಿಕಾರಿ ಅನಿತಾ ಎಂ.ಪಿ., ಎಂಸಿಎಂಸಿ ನೋಡಲ್ ಅಧಿಕಾರಿ ಗುರುನಾಥ ಕಡಬೂರ ಸೇರಿದಂತೆ ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

( ಈ ಸುದ್ದಿಯನ್ನು ನಿಮ್ಮ ಪರಿಚಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ)

Related Articles

Back to top button