Latest

ಬಾಂಗ್ಲಾ ಸಚಿವರ ಆರೋಗ್ಯ ನೆರವಿಗೆ ಡಾ.ದೇವಿಪ್ರಸಾದ ಶೆಟ್ಟಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅನಾರೋಗ್ಯಕ್ಕೀಡಾಗಿರುವ ತಮ್ಮ ಹಿರಿಯ ಸಂಪುಟ ಸಹೋದ್ಯೋಗಿ, ದೇಶದ ರಸ್ತೆ ಸಾರಿಗೆ ಮತ್ತು ಸೇತುವೆ ಖಾತೆ ಸಚಿವ ಉಬೈದುಲ್ ಖಾದರ್ ಅವರ ಆರೋಗ್ಯ ತಪಾಸಣೆ ನಡೆಸಿ ಅವರಿಗೆ ಅಗತ್ಯವಾದ ಚಿಕಿತ್ಸಾ ಕ್ರಮವನ್ನು ಸೂಚಿಸಲು ಭಾರತದ ಖ್ಯಾತ ಹೃದ್ರೋಗ ತಜ್ಞ ಡಾ.ದೇವಿ ಪ್ರಸಾದ್ ಶೆಟ್ಟಿ ಅವರ ಸಹಾಯ ಯಾಚಿಸಿದ್ದಾರೆ.

ಬಾಂಗ್ಲಾ ಪ್ರಧಾನಿ ಹಸೀನಾ ರವಿವಾರ ಸಂಜೆ ಬೆಂಗಳೂರು ಮೂಲದ ಡಾ.ಶೆಟ್ಟಿಗೆ ಕರೆ ಮಾಡಿ ಢಾಕಾಗೆ ಬಂದು ತಮ್ಮ ಸಚಿವರ ಆರೋಗ್ಯ ತಪಾಸಣೆ ನಡೆಸುವಂತೆ ಕೋರಿದ್ದಾರೆ. ಬಾಂಗ್ಲಾದೇಶದ ಆಡಳಿತ ಆವಾಮಿ ಲೀಗ್ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಖಾದರ್ ಅವರನ್ನು ಢಾಕಾದ ಬಂಗಬಂಧು ಶೇಖ್ ಮುಜೀಬ್ ಮೆಡಿಕಲ್ ಯುನಿವರ್ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪರಿಧಮನಿಯ ಅಪಧಮನಿಯಲ್ಲಿ (ಕೊರೊನರಿ ಆರ್ಟರಿ) ಮೂರು ಕಡೆಗಳಲ್ಲಿ ಬ್ಲಾಕೇಜ್ ಇರುವುದನ್ನು ವೈದ್ಯರು ಪತ್ತೆ ಹಚ್ಚಿದ್ದಾರೆ.
ಆರಂಭದಲ್ಲಿ ಐಸಿಯುಗೆ ದಾಖಲಿಸಲ್ಪಟ್ಟಿದ್ದ ಉಬೈದುಲ್ ಖಾದರ್ರ ಆರೋಗ್ಯ ಸ್ಥಿತಿ ಹದಗೆಟ್ಟ ಕಾರಣ ನಂತರ ಕ್ರಿಟಿಕಲ್ ಕೇರ್ ಯುನಿಟ್ ಗೆ ಅವರನ್ನು ಸ್ಥಳಾಂತರಿಸಲಾಗಿದೆ. ಸಚಿವರಿಗೆ ಅನಿಯಂತ್ರಿತ ಮಧುಮೇಹ ಹಾಗೂ ಇಲೆಕ್ಟ್ರೋಲೈಟ್ ಅಸಮತೋಲನ ಸಮಸ್ಯೆಯಿದೆ ಎನ್ನಲಾಗಿದೆ.

ನಾರಾಯಣ ಸಮೂಹ ಆಸ್ಪತ್ರೆಯ ಅಧ್ಯಕ್ಷರೂ ಆಗಿರುವ ಶೆಟ್ಟಿ ಬಾಂಗ್ಲಾ ಪ್ರಧಾನಿಯ ಕೋರಿಕೆಯಂತೆ ಸೋಮವಾರ ಢಾಕಾಗೆ ತೆರಳಿ ಅಲ್ಲಿಂದ ನೇರವಾಗಿ ಸಚಿವರನ್ನು ದಾಖಲಿಸಲ್ಪಟ್ಟಿರುವ ಆಸ್ಪತ್ರೆ ತೆರಳಿದ್ದಾರೆ. ಆಲ್ಲಿ ಸಚಿವರ ಆರೋಗ್ಯ ತಪಾಸಣೆ ನಡೆಸಿ ಉಬೈದುಲ್ ಖಾದರ್ರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಜತೆ ಮಾತುಕತೆ ನಡೆಸಿ ಅವರಿಗೆ ಸಿಂಗಾಪುರದಲ್ಲಿ ಅತ್ಯುತ್ತಮ ಚಿಕಿತ್ಸೆ ದೊರೆಯಬಹುದೆಂಬ ಸಲಹೆ ನೀಡಿದ್ದಾರೆ.

Home add -Advt

”ಉಬೈದುಲ್ ಖಾದರ್ರನ್ನು ಉನ್ನತ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕರೆದುಕೊಂಡು ಹೋಗುವಂತೆ ಸಲಹೆಯನ್ನು ಬಿಎಸ್‌ಎಂಎಂಯು ವೈದ್ಯರಿಗೆ ನೀಡಿದ್ದೇನೆ” ಎಂದು ಡಾ.ಶೆಟ್ಟಿ ಹೇಳಿದ್ದಾರೆ. ಅವರ ಸಲಹೆಯಂತೆಯೇ ಸಚಿವರನ್ನು ಸಿಂಗಾಪುರಕ್ಕೆ ಸ್ಥಳಾಂತರಿಸಲು ನಂತರ ನಿರ್ಧರಿಸಲಾಯಿತು.

Related Articles

Back to top button