Latest

ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬ: ಶಾಸಕರಿಂದ ತೀವ್ರ ತರಾಟೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸ್ಮಾರ್ಟ್ ಸಿಟಿ ಯೋಜನೆಗಳ ಅನುಷ್ಠಾನದಲ್ಲಿ ಅನಗತ್ಯವಾಗಿ ವಿಳಂಬಕ್ಕೆ ಕಾರಣವಾಗುತ್ತಿರುವ ನಾನಾ ಇಲಾಖೆಗಳ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಮತ್ತು ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ತೀವ್ರವಾಗಿ ತಗೆದುಕೊಂಡರು.
ಇಲ್ಲಿನ ಟಿಳಕವಾಡಿಯಲ್ಲಿರುವ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಬುಧವಾರ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಹಾಗೂ ಇರುವ ತಾಂತ್ರಿಕ ಅಡಚಣೆಗಳನ್ನು ಪರಿಹರಿಸುವ ಪ್ರಯತ್ನ ಮಾಡಿದ ಅವರು, ನಾನಾ ಇಲಾಖೆಗಳ ನಡುವೆ ಸಮನ್ವಯ ಇಲ್ಲದಿರುವುದೇ ಯೋಜನೆಗಳ ಅನುಷ್ಠಾನ ವಿಳಂಬಕ್ಕೆ ಕಾರಣವಾಗಿದೆ. ಇನ್ನು ಮುಂದೆ ಹೀಗಾಗಬಾರದು ಎಂದು ತಾಕೀತು ಮಾಡಿದರು.
ಅನೇಕ ಕೆಲಸಗಳು ಆರಂಭಗೊಂಡಿವೆ. ಆದರೆ ಹೆಸ್ಕಾಂ ಕೇಬಲ್ ಶಿಫ್ಟ್ ಮಾಡಿಲ್ಲ. ಜಲಮಂಡಳಿ ಡ್ರೇನೇಜ್‍ಪೈಪ್ ಹಾಕಿಲ್ಲ. ದೂರಸಂಪರ್ಕ ಇಲಾಖೆ ಮತ್ತು ಖಾಸಗಿ ಕಂಪನಿಗಳು ಸ್ಪಂದಿಸಿಲ್ಲ. ಅರಣ್ಯ ಇಲಾಖೆ ಗಿಡ ತೆರವು ಗೊಳಿಸಲು ಅನುಮತಿಸಿಲ್ಲ. ಹೀಗಾದರೆ ಯೋಜನೆಗಳು ಮುಗಿಯುವುದು ಯಾವಾಗ? ಈಗ ಮತ್ತೆ ಹೊಸ ರಸ್ತೆ, ಅಭಿವೃದ್ಧಿ ಕೆಲಸಗಳು ಬರುತ್ತವೆ. ಆಗಲೂ ಇದೇ ರೀತಿ ವಿಳಂಬ ಕಂಡರೆ ನಾವಂತೂ ಸುಮ್ಮನೇ ಕೂಡ್ರುವುದಿಲ್ಲವೆಂದು ಎಚ್ಚರಿಸಿದರು.
ಹೊಸ ರಸ್ತೆ ಕಾಮಗಾಗಿ ಆರಂಭಕ್ಕೂ ಮೊದಲೇ ಹೆಸ್ಕಾಂ, ದೂರಸಂಪರ್ಕ, ಜಲಮಂಡಳಿ ಒಳಗೊಂಡು ಇತರೆ ಸೇವಾ ಇಲಾಖೆಯವರು 15 ದಿನಗಳೊಳಗೆ ತುರ್ತಿನ ಹಾಗೂ ಭವಿಷ್ಯದ ಯೋಜನೆಗಳಿಗೆ ಬೇಕಿರುವ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಒಮ್ಮೆ ರಸ್ತೆ ಕೆಲಸ ಪೂರ್ಣಗೊಂಡರೆ ಮತ್ತೆ ಅವುಗಳನ್ನು ಅಗೆಯಲು ಬಿಡುವುದಿಲ್ಲ. ಮುಂದಿನ 40 ವರ್ಷಗಳ ವರೆಗೂ ಅವು ಭದ್ರವಾಗಿರಬೇಕು ಎಂದರು.
ಇನ್ನು ಅನುಷ್ಠಾನದಲ್ಲಿ ತಾಳಮೇಳ ಇರಲೇಬೇಕು. ಯೋಜನೆ ವ್ಯಾಪ್ತಿಯಲ್ಲಿರುವ ಗಿಡಗಳನ್ನು ಅಗತ್ಯವಿದ್ದರೆ ಮಾತ್ರ ಕತ್ತರಿಸಬೇಕು. ಇದನ್ನು ಅರಣ್ಯ ಇಲಾಖೆ, ಸ್ಮಾರ್ಟ್ ಸಿಟಿಯವರು ಮತ್ತು ಗುತ್ತಿಗೆದಾರರು ಜಂಟಿ ಸಮೀಕ್ಷೆ ನಡೆಸಿ ನಿರ್ಧರಿಸಬೇಕು. ಅರಣ್ಯ ಇಲಾಖೆಯವರೂ ಅನಗತ್ಯವಾಗಿ ಅಡ್ಡಿ ಮಾಡಬಾರದು. ಗಿಡಗಳನ್ನು ಸ್ಥಳಾಂತರ ಮಾಡಿ ಪೋಷಣೆ ಮಾಡಲು ಸಾಧ್ಯವಿದ್ದರೆ ಅದನ್ನೂ ಪರಿಗಣಿಸಬೇಕು ಎಂದು ಸಲಹೆ ನೀಡಿದರು.
ಸ್ಮಾರ್ಟ್ ಸಿಟಿ ಲಿ.ಯ ವ್ಯವಸ್ಥಾಪಕ ನಿರ್ದೇಶಕ ಎಸ್. ಜಿಯಾವುಲ್ಲಾ, ಪಾಲಿಕೆ, ಬುಡಾ, ಹೆಸ್ಕಾಂ, ಕೆಯುಡಬ್ಲ್ಯುಎಸ್. ಕೆಯುಐಡಿಎಫ್‍ಸಿ, ದೂರ ಸಂಪರ್ಕ, ಜಲಮಂಡಳಿ, ಸ್ಮಾಟ್‍ಸಿಟಿ, ಪೆÇಲೀಸ್ ಒಳಗೊಂಡು 8-10 ಇಲಾಖೆಯ ಹಿರಿಯ ಅಧಿಕಾರಿಗಳು, ಗುತ್ತಿಗೆದಾರರು ಸಭೆಯಲ್ಲಿದ್ದು ಅಭಿಪ್ರಾಯಗಳನ್ನು ತಿಳಿಸಿದರು. ಸಭೆ ನಂತರ ಶಾಸಕರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೈಗೆತ್ತಿಕೊಂಡಿರುವ ಪೊಲೀಸ್ ಠಾಣೆ ಪಕ್ಕದ ವಿಶಾಲ ಉದ್ಯಾನವನದ ಅಭಿವೃದ್ಧಿ ಕಾಮಗಾರಿಗಳ ಪರಿವೀಕ್ಷಣೆ ಮಾಡಿದರು.

Related Articles

Back to top button