ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ, ಜಿಲ್ಲಾ ಬಾಲಭವನ ಬೆಳಗಾವಿ, ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಬಾಲವೇದಿಕೆ ಕಾರ್ಯಕ್ರಮದಡಿಯಲ್ಲಿ ಹುಕ್ಕೇರಿ ತಾಲೂಕಿನ ಯರಗಟ್ಟಿ ಗ್ರಾಮದ ಜಗಜ್ಯೋತಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ ಜಿಲ್ಲಾ ಮಟ್ಟದ ಅಂತರ ಶಾಲಾ ಸಮೂಹ ನೃತ್ಯ ಸ್ಪರ್ಧೆಯಲ್ಲಿ ಗೋಕಾಕ ತಾಲೂಕಿನ ಕೊಳವಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಪ್ರಥಮ ಬಹುಮಾನ ಪಡೆದುಕೊಂಡಿತು.
ಬಹುಮಾನ ವಿತರಿಸಿ ಮಾತನಾಡಿದ ಸಂಸ್ಥೆಯ ಗೌರವ ಕಾರ್ಯದರ್ಶಿ ವೈಜಯಂತಿ ಚೌಗಲಾ, ಪಠ್ಯೇತರ ಚಟುವಟಿಕೆಗಳು ಮಕ್ಕಳಲ್ಲಿ ಆಸಕ್ತಿ ಬೆಳೆಸಲು ಸಹಕಾರಿಯಾಗಲಿವೆ. ಮಕ್ಕಳ ಸರ್ವಾಂಗೀಣ ಪ್ರಗತಿಯತ್ತ ಗಮನಿಸಿ ಜಿಲ್ಲೆ ಹಾಗೂ ತಾಲೂಕು ಬಾಲಭವನಗಳು ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಲಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯರಗಟ್ಟಿ ಗ್ರಾಮದ ಹಿರಿಯರಾದ ಬಿ. ಆರ್. ಪಾಟೀಲ ವಹಿಸಿದ್ದರು. ಜಿಲ್ಲೆಯ ವಿವಿಧ ೧೮ ಶಾಲಾ ತಂಡಗಳು ಸಮೂಹ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು, ದ್ವಿತೀಯ ಬಹುಮಾನವನ್ನು ಸರಕಾರಿ ಪ್ರೌಢ ಶಾಲೆ ಶಿರಗಾಂವ ಹಾಗೂ ತೃತೀಯ ಬಹುಮಾನವನ್ನು ಜಂಟಿಯಾಗಿ ಕರ್ನಾಟಕ ಪಬ್ಲಿಕ ಶಾಲೆ ಯರಗಟ್ಟಿ ಮತ್ತು ಸ್ವಾಮಿ ವಿವೇಕಾನಂದ ಗುರುಕುಲ ಶಾಲೆ ಕುರಣಿ ಪಡೆದುಕೊಂಡವು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹುಸೇನ ಮುಲ್ಲಾ, ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಮಲ್ಲಿಕಾರ್ಜುನ ನಂದಗಾವಿ, ಗ್ರಾಮ ಪಂಚಾಯತ ಸದಸ್ಯರು ಉಪಸ್ಥಿತರಿದ್ದರು.
ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ೧೦ ಸಾವಿರ, ದ್ವಿತೀಯ ೭ ಸಾವಿರ ಹಾಗೂ ತೃತೀಯ ೫ ಸಾವಿರ ರೂಪಾಯಿ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ಪರವಾಗಿ ಎಲ್ಲ ೧೮ ತಂಡಗಳಿಗೆ ತಲಾ ೫೦೧ ರೂಗಳಂತೆ ವಿಶೇಷ ಬಹುಮಾನವನ್ನು ನೀಡಲಾಯಿತು.