ಬೌದ್ಧಿಕ ಆಸ್ತಿ ಹಕ್ಕು ರಕ್ಷಣೆಯಿಂದ ಆರ್ಥಿಕ ಬೆಳವಣಿಗೆಗೆ ; ಸಿ.ಎನ್. ಶಶಿಧರ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬೌದ್ಧಿಕ ಆಸ್ತಿಯ ಹಕ್ಕಿನ ಪ್ರಚಾರ ಮತ್ತು ರಕ್ಷಣೆ ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಹೊಸ ಉದ್ಯೋಗಗಳು ಮತ್ತು ಉದ್ಯಮಗಳನ್ನು ಸೃಷ್ಟಿಸುತ್ತದೆ ಹಾಗೂ ಜೀವನದ ಗುಣಮಟ್ಟ ಹೆಚ್ಚಿಸುತ್ತದೆ ಎಂದು ಚೆನ್ನೈನ ಪೇಟೆಂಟ್ ಕಚೇರಿಯ ಉಪ ನಿಯಂತ್ರಕ ಸಿ.ಎನ್. ಶಶಿಧರ ಹೇಳಿದರು.
ನಗರದ ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ(ಜಿಐಟಿ )ದಲ್ಲಿ ಕೆಎಸ್ಸಿಎಸ್ ಟಿ ಮಾರ್ಗದರ್ಶನ ಮತ್ತು ಸಹಯೋಗದಲ್ಲಿ ಆರಂಭಿಸಲಾದ ಬೌದ್ಧಿಕ ಆಸ್ತಿ ಹಕ್ಕು ಮಾಹಿತಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಯೋಗಕ್ಷೇಮಗಳ ವೇಗವರ್ಧಕವಾಗಿ ಬೌದ್ಧಿಕ ಆಸ್ತಿ ಹಕ್ಕು ಕೆಲಸ ಮಾಡುತ್ತದೆ. ಒಂದು ರಾಷ್ಟ್ರದ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಮರ್ಥ ಮತ್ತು ಸಮಂಜಸವಾದ ಬೌದ್ಧಿಕ ಆಸ್ತಿ ಹಕ್ಕಿನ ವ್ಯವಸ್ಥೆಯು ಎಲ್ಲಾ ದೇಶಗಳಿಗೆ ಸಹಾಯ ಮಾಡುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ರಾಷ್ಟ್ರದ ಗೌರವವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.
ಅತಿಥಿಗಳಾದ ಪ್ರಕಾಶ ಮುಗಳಿ, ವಿವೇಕ ಆನಂದ ಸಾಗರ, ಸಂಪನ್ಮೂಲ ವ್ಯಕ್ತಿಗಳಾದ ಸೂಸೇನ್, ಅಂಶುಮನ್, ರಾಹುಲ್ ಮತ್ತು ಕು. ಸುಚೇತಾ ಬೌದ್ಧಿಕ ಆಸ್ತಿ ಹಕ್ಕುಗಳ ಕುರಿತು ಹಲವಾರು ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಯು. ಎನ್. ಕಾಲಕುಂದ್ರಿಕರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ. ಎ.ಎಸ್. ದೇಶಪಾಂಡೆ ಸ್ವಾಗತಿಸಿದರು. ಡಾ. ವಿ.ಎಸ್. ಮಜಲಿ ವಂದಿಸಿದರು. ವಿದ್ಯಾರ್ಥಿನಿ ವಿಭಾ ಎಂ.ವಿ. ನಿರೂಪಿಸಿದರು. ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಡಾ. ಎಂ.ಎಸ್. ಪಾಟೀಲ, ಎಲ್ಲ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.