Karnataka News

*ಶಿಕ್ಷಣ ತಜ್ಞ ಪ್ರೊ. ಎಂ.ಆರ್ ದೊರೆಸ್ವಾಮಿ ವಿಧಿವಶ: ಅಂತಿಮ ದರ್ಶನ ಪಡೆದ ಡಿಸಿಎಂ, ಬಿಎಸ್ವೈ*

ಪ್ರಗತಿವಾಹಿನಿ ಸುದ್ದಿ: ಪಿಇಎಸ್ ಶಿಕ್ಷಣ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ, ಶಿಕ್ಷಣ ತಜ್ಞ ಪ್ರೊ. ಎಂ.ಆರ್ ದೊರೆಸ್ವಾಮಿ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.

ಪ್ರೊ. ಎಂ.ಆರ್ ದೊರೆಸ್ವಾಮಿ ಅವರ ಬೆಂಗಳೂರಿನ ಬನಶಂಕರಿ ನಿವಾಸಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ತೆರಳಿ, ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಮೃತರ ಪುತ್ರ ಪ್ರೊ. ಜವಾಹರ್ ಸೇರಿದಂತೆ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಶಾಸಕ ಕೃಷ್ಣಪ್ಪ ಮತ್ತಿತರರು ಇದ್ದರು.

ಪಿಇಎಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಆರ್. ದೊರೆಸ್ವಾಮಿ ಅವರ ನಿಧನಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಂತಾಪ

:

Home add -Advt

ಪಿಇಎಸ್‌ ಸಮೂಹ ಶೈಕ್ಷಣಿಕ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರು, ಶಿಕ್ಷಣ ತಜ್ಞ ಎಂ.ಆರ್. ದೊರೆಸ್ವಾಮಿ ಅವರ ನಿಧನಕ್ಕೆ ನಿಧನಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

“ನಗರದ ಬನಶಂಕರಿ ನಗರ 2ನೇ ಹಂತದಲ್ಲಿರುವ ಮೃತರ ನಿವಾಸಕ್ಕೆ ಗುರುವಾರ ರಾತ್ರಿ ಭೇಟಿ ನೀಡಿದ ಡಿಸಿಎಂ ಅವರು ಮೃತರ ಅಂತಿಮ ದರ್ಶನ ಪಡೆದರು. ದೊರೆಸ್ವಾಮಿ ಅವರ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿ, ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.”

“ಸ್ವಾಮಿ ವಿವೇಕಾನಂದರು ಹಾಗೂ ಮಹಾತ್ಮ ಗಾಂಧಿ ಅವರ ಜೀವನ ತತ್ವ ಆದರ್ಶಗಳನ್ನು ಮಾದರಿಯಾಗಿಟ್ಟುಕೊಂಡು ಪೀಪಲ್ಸ್ ಎಜುಕೇಷನ್ ಸೊಸೈಟಿ (ಪಿಇಎಸ್) ಎನ್ನುವ ಬೃಹದಾಕಾರದ ಶಿಕ್ಷಣ ಸಂಸ್ಥೆಯನ್ನು ಕಟ್ಟಿ, ಬೆಳೆಸಿದವರು, ದೇಶ-ವಿದೇಶಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಎಂ.ಆರ್. ದೊರೆಸ್ವಾಮಿ ಅವರು ಛಲಗಾರರಾಗಿದ್ದರು.

ಬೃಹತ್ ಶೈಕ್ಷಣಿಕ ಸಾಮ್ರಾಜ್ಯ ಕಟ್ಟಿರುವ ಎಂ.ಆರ್. ದೊರೆಸ್ವಾಮಿ ಅವರನ್ನು ಹತ್ತಿರದಿಂದ ಬಲ್ಲೆ. ಅವರಿಂದ ನೂರಾರು ಅಂಶಗಳನ್ನು ಕಲಿತಿದ್ದೇನೆ. ಅವರ ಸಾಹಸದ ಮನೋಭಾವ ಇಂದಿನ ಯುವ ಜನರಿಗೆ ಸ್ಪೂರ್ತಿದಾಯಕ.

ಮಾಜಿ ಸಚಿವ ದಯಾನಂದ ಸಾಗರ್ ಅವರ ಗರಡಿಯಲ್ಲಿ ಬೆಳೆದು ಚಿಕ್ಕ ವಯಸ್ಸಿಗೆ ಪ್ರಾಂಶುಪಾಲರಾಗಿ ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟವರು. ಹನುಮಂತನಗರದ ಕೆಂಪಣ್ಣ ಗರಡಿ ಮನೆ ಆವರಣದಲ್ಲಿ 1973 ರಲ್ಲಿ ಪಿಇಎಸ್ ಪಿಯು ಕಾಲೇಜು ಆರಂಭಿಸಿ, ಮುಂದೆ ಅದನ್ನು ಬೃಹದಾಕಾರವಾಗಿ ಬೆಳೆಸಿದ ಶಿಕ್ಷಣ ಸಾಹಸಿ. ಎಂಜಿನಿಯರಿಂಗ್ ಶಿಕ್ಷಣಕ್ಕೆ ಬ್ರಾಂಡ್ ಮೌಲ್ಯ ತಂದು ಕೊಟ್ಟವರು.

ಇವರ ಅಗಲಿಕೆ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟ.‌ ಇವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಕುಟುಂಬದ ಸದಸ್ಯರಿಗೆ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಪ್ರೊ.ದೊರೆಸ್ವಾಮಿ ನಿಧನಕ್ಕೆ ಸಚಿವ ಪ್ರಲ್ಹಾದ ಜೋಶಿ ಸಂತಾಪ; ಅಂತಿಮ ನಮನ ಸಲ್ಲಿಕೆ

ಬೆಂಗಳೂರು: ಪಿಇಎಸ್‌ ವಿಶ್ವವಿದ್ಯಾಲಯದ ಕುಲಾಧಿಪತಿ, ಮಾಜಿ ಎಂಎಲ್‌ಸಿ ಪ್ರೊ.ಎಂ.ಆರ್‌. ದೊರೆಸ್ವಾಮಿ ಅವರ ನಿಧನಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಂತಾಪ ವ್ಯಕ್ತಪಡಿಸಿದ್ದಾರೆ. ಇಂದು ರಾತ್ರಿ ಡಾ.ದೊರೆಸ್ವಾಮಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಪುಷ್ಪ ನಮನ ಸಲ್ಲಿಸಿದರು. ಅಲ್ಲದೇ, ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.

ದೊರೆಸ್ವಾಮಿ ಅವರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದಲ್ಲದೆ, ಸಮಾಜ ಸೇವೆಯಲ್ಲೂ ತೊಡಗಿ ಸಾರ್ಥಕ್ಯ ಜೀವನ ನಡೆಸಿದವರೆಂದು ಜೋಶಿ ಸ್ಮರಿಸಿದರು.

ಬೆಂಗಳೂರಿನ ಪಿಇಎಸ್‌ ವಿಶ್ವವಿದ್ಯಾಲಯದ ಕುಲಾಧಿಪತಿ, ರಾಜ್ಯ ಸರ್ಕಾರದ ಶೈಕ್ಷಣಿಕ ಸುಧಾರಣೆಗಳ ಸಲಹೆಗಾರರಾಗಿದ್ದ, ಮಾಜಿ ಎಂಎಲ್‌ಸಿಯೂ ಆಗಿದ್ದ ಪ್ರೊ.ಎಂ.ಆರ್‌. ದೊರೆಸ್ವಾಮಿ ಅವರ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸಚಿವ ಜೋಶಿ ವಿಷಾದ ವ್ಯಕ್ತಪಡಿಸಿದರು. ದೊರೆಸ್ವಾಮಿ ಅವರ ಕುಟುಂಬಕ್ಕೆ ಮತ್ತು ಶಿಷ್ಯ ವೃಂದಕ್ಕೆ ಭಗವಂತ ದುಃಖ ಸಹಿಸಿಕೊಳ್ಳುವ ಶಕ್ತಿ ಭರಿಸಲಿ ಎಂದು ಪ್ರಾರ್ಥಿಸಿದರು.

Related Articles

Back to top button