ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಭಜಿಸುವ ಮೈತ್ರಿ ಸರಕಾರದ ನಿರ್ಧಾರದ ವಿರುದ್ಧ ಜಿಲ್ಲೆಯ ಯಾವೊಬ್ಬ ಕಾಂಗ್ರೆಸ್ ಶಾಸಕನೂ ಧ್ವನಿ ಎತ್ತದಿರುವುದು ಹಾಗೂ ಈ ವಿಷಯದಲ್ಲಿ ಗಾಢ ಮೌನಕ್ಕೆ ಶರಣಾಗಿರುವುದು ಆಘಾತಕಾರಿ ಸಂಗತಿಯಾಗಿದೆ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಬೀಳಿಸಲು ಹೊರಟಿದ್ದ ಜಿಲ್ಲೆಯ ಶಾಸಕರು ಸಹ ಈಗ ಮೌನ ವಹಿಸಿರುವುದು ಸೋಜಿಗವಾಗಿದೆ. ವಿಟಿಯು ವಿಭಜಿಸುವ ಸರಕಾರದ ನಿರ್ಧಾರದ ಬಗ್ಗೆ ಕಾಂಗ್ರೆಸ್ ತನ್ನ ನಿಲುವನ್ನು ಈ ಕೂಡಲೇ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಈಗ ಉತ್ತರ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ. ವಿಟಿಯು ವಿಭಜನೆ ವಿರುದ್ಧ ಹೋರಾಟದಲ್ಲಿ ಪಾಲ್ಗೊಳ್ಳುವುದು ಅವರದೂ ಕರ್ತವ್ಯವಾಗಿದೆ. ವಿಟಿಯು ವಿಭಜನೆ ತಡೆಯಲು ಫೆ.೧೬ ರಂದು ಬೆಳಗ್ಗೆ ೯.೩೦ಕ್ಕೆ ಬೆಳಗಾವಿಯಲ್ಲಿ ಆಯೋಜಿಸಲಾಗಿರುವ ಪ್ರತಿಭಟನೆ ಹಾಗೂ ಪಾದಯಾತ್ರೆಯಲ್ಲಿ ಬಿಜೆಪಿ ಸಕ್ರಿಯವಾಗಿ ಪಾಲ್ಗೊಳ್ಳಲಿದೆ. ಹಲವಾರು ಸಂಘ-ಸಂಸ್ಥೆಗಳು, ಶಿಕ್ಷಕರು, ವಿದ್ಯಾರ್ಥಿಗಳು, ವಾಣಿಜ್ಯೋದ್ಯಮಿಗಳು, ಮಠಾಧೀಶರು, ಸಾರ್ವಜನಿಕರು ಈಗಾಗಲೇ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು ಎಲ್ಲರೂ ಹೋರಾಟದಲ್ಲಿ ಪಾಲ್ಗೊಳ್ಳುವ ಸಂಕಲ್ಪ ಮಾಡಿದ್ದಾರೆ. ವಿಟಿಯು ಹಾಗೂ ಉತ್ತರ ಕರ್ನಾಟಕದ ಬಗ್ಗೆ ಕಾಂಗ್ರೆಸ್ ಜನಪ್ರತಿನಿಧಿಗಳಿಗೆ ನಿಜವಾಗಿಯೂ ಕಾಳಜಿ ಇದ್ದರೆ ಅವರು ಹೋರಾಟದಲ್ಲಿ ಭಾಗವಹಿಸಿ ತಮ್ಮ ಬದ್ಧತೆ ಪ್ರದರ್ಶಿಸಬೇಕು ಎಂದು ಸುರೇಶ ಅಂಗಡಿ ನುಡಿದರು.
ನ್ಯಾಯವಾದಿ ಎಂ.ಬಿ. ಝಿರಲಿ ಮಾತನಾಡಿ, ಸರಕಾರ ಕಾನೂನು ಬಾಹಿರವಾಗಿ, ಸಾರ್ವಜನಿಕರ ಗಮನಕ್ಕೆ ತಾರದೆ ವಿಟಿಯು ಒಡೆಯಲು ಮುಂದಾಗಿದೆ. ಸರಕಾರ ಉತ್ತರ ಕರ್ನಾಟಕಕ್ಕೆ ಮಾರಕವಾಗಿರುವ ಏಳಪಕ್ಷೀಯ ನಿರ್ಧಾರ ಕೈಗೊಂಡರೂ ಈ ಭಾಗದ ಕಾಂಗ್ರೆಸ್ ಶಾಸಕರು ಬಾಯಿ ಮುಚ್ಚಿಕೊಂಡು ಕುಳಿತಿರುವುದೇಕೆ ಎಂದು ಪ್ರಶ್ನಿಸಿದರು.
ಶಾಸಕ ಅನಿಲ ಬೆನಕೆ ಮಾತನಾಡಿ, ವಿಟಿಯು ವಿಭಜನೆ ಮಾಡಬಾರದೆಂದು ಆಗ್ರಹಿಸಿ ೫೦ ಶಾಸಕರ ಸಹಿ ಇರುವ ಪತ್ರವನ್ನು ನಾನು ಹಾಗೂ ಶಾಸಕ ಅಭಯ ಪಾಟೀಲ ಸೇರಿಕೊಂಡು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಸಲ್ಲಿಸಿದ್ದೇವೆ. ಪತ್ರ ಸ್ವೀಕರಿಸಿದ ಸಿಎಂ ವಿಟಿಯು ವಿಭಜನೆ ಮಾಡುವುದಿಲ್ಲ. ಕೇವಲ ಪ್ರಾದೇಶಿಕ ಕಚೇರಿ ತೆರೆಯಲಾಗುವುದು ಎಂದು ಹೇಳಿದ್ದರು. ಆದರೆ ಅವರು ತಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ ಎಂಬುದು ಈಗ ಸ್ಪಷ್ಟವಾಗುತ್ತಿದೆ. ಅವರು ಎಂದಿನಂತೆ ಮಾತು ತಪ್ಪಿದ ಮುಖ್ಯಮಂತ್ರಿಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ವಿ.ಐ. ಪಾಟೀಲ, ಬಿಜೆಪಿ ನಗರ ಅಧ್ಯಕ್ಷ ರಾಜೇಂದ್ರ ಹರಕುಣಿ, ರಾಜು ಚಿಕ್ಕನಗೌಡರ, ಉಜ್ವಲಾ ಬಡವಣ್ಣಾಚೆ, ರಾಜೀವ ಟೋಪಣ್ಣವರ ಮುಂತಾದವರು ಇದ್ದರು.