ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಎಚ್. ಕೋನರೆಡ್ಡಿ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೋದಿ ಗಾಳಿ ಇಲ್ಲ. ಮೈತ್ರಿ ಸರಕಾರ ಮಾಡಿದ ಸಾಲಮನ್ನಾದಿಂದ ಜನಸಾಮಾನ್ಯ, ರೈತರು ಮೈತ್ರಿ ಅಭ್ಯರ್ಥಿಗಳ ಪರ ಒಲವು ತೋರಿಸುತ್ತಿದ್ದಾರೆ. ಹಲವೆಡೆ ಮೋದಿ ಸರಕಾರದ ಕಿಸಾನ್ ಸಮ್ಮಾನ್ ಯೋಜನೆಯನ್ನು ತಿರಸ್ಕಾರ ಮಾಡುತ್ತೇವೆ ಎಂದು ರೈತರು ಹೇಳುತ್ತಿದ್ದಾರೆ. ಉತ್ತರ ಕರ್ನಾಟಕದ ಎಲ್ಲೆಡೆ ಪ್ರವಾಸ ಮಾಡಿದ್ದೇನೆ ಮೈತ್ರಿ ಅಭ್ಯರ್ಥಿಗಳ ಪರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಕಳೆದ ನಾಲ್ಕೂವರೆ ವರ್ಷದಲ್ಲಿ ಮಹದಾಯಿ ಕುರಿತು ಮಾತನಾಡದ ಸಂಸದ ಸುರೇಶ ಅಂಗಡಿ ಅವರು, ಈಗ ಚುನಾವಣೆ ಸಮಯದಲ್ಲಿ ಮಾತನಾಡುತ್ತಿದ್ದಾರೆ. ಧಾರವಾಡ ಸಂಸದ ಪ್ರಲ್ಲಾದ್ ಜೋಶಿ, ಹಾವೇರಿ ಸಂಸದ ಶಿವಕುಮಾರ ಉದಾಸಿ ಸೇರಿದಂತೆ ಬಿಜೆಪಿಯ ಯಾವುದೇ ನಾಯಕರು ಸಂಸತ್ತಿನಲ್ಲಿ ಮಾತನಾಡಲಿಲ್ಲ. ಬಿಜೆಪಿಯವರಿಗೆ ಚುನಾವಣೆಯಲ್ಲಿ ಮಹದಾಯಿ ನೆನಪಾಗುತ್ತಿದೆ ಎಂದು ಕಿಡಿಕಾರಿದರು.
ಗ್ರಾಮೀಣ ಕಾಂಗ್ರೆಸ್ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಮೊದಲಾದವರು ಉಪಸ್ಥಿತರಿದ್ದರು.
ಕತ್ತಿ ಬಿಜೆಪಿಯಿಂದ ಹೊರಕ್ಕೆ
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದರಿಂದ ಉಮೇಶ ಕತ್ತಿ ಅವರು ಬಿಜೆಪಿಯಿಂದ ಒಂದು ಹೆಜ್ಜೆ ಹೊರಗಡೆ ಇಟ್ಟಿದ್ದಾರೆ. ಕಾಂಗ್ರೆಸ್ ಹೋಗ್ತಾರೋ ಅಥವಾ ಜೆಡಿಎಸ್ ಸೇರ್ತಾರೋ ಗೊತ್ತಿಲ್ಲ. ಆದರೆ, ಬಿಜೆಪಿ ತೋರಿಯುವುದು ನಿಶ್ಚಿತ. ಈಗಾಗಲೇ ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಉಮೇಶ ಕತ್ತಿ ಮುಂದಾಗಿದ್ದಾರೆ. ಇದು ಎರಡು ಕ್ಷೇತ್ರದ ಮೈತ್ರಿ ಅಭ್ಯರ್ಥಿಗಳಿಗೆ ವರವಾಗಲಿದೆ ಎಂದು ಎನ್.ಎಚ್. ಕೋನರೆಡ್ಡಿ ತಿಳಿಸಿದರು.