ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನಗರದ ಜೆಜಿಐ ಸಂಸ್ಥೆಯ ಜೈನ ಬಿಬಿಎ, ಬಿಸಿಎ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಎನ್ನೆಸ್ಸೆಸ್ ಘಟಕದ ವತಿಯಿಂದ ಇತ್ತೀಚೆಗೆ ಖಾನಾಪುರ ತಾಲೂಕಿನ ರೂಮೆವಾಡಿ ಗ್ರಾಮದಲ್ಲಿ ಒಂದು ವಾರ ಕಾಲ ವಿಶೇಷ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿಗಳಿಂದ ರೂಮೆವಾಡಿ ಗ್ರಾಮದ ಸ್ವಚ್ಛತೆ, ರಸ್ತೆ ಸುಧಾರಣೆ ಮಾಡಲಾಯಿತು. ಗ್ರಾಮದ ಪ್ರಾಥಮಿಕ ಶಾಲೆಯನ್ನು ಸೌಂದರೀಕರಣಗೊಳಿಸಿ ಸುಣ್ಣಬಣ್ಣ ಬಳೆಯಲಾಯಿತು. ಒಂದು ದಿನ ಗ್ರಾಮದ ಜನತೆ ಹಾಗೂ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ವೇಣುಗ್ರಾಮ ಆಸ್ಪತ್ರೆಯ ವೈದ್ಯರಿಂದ ವೈದ್ಯಕೀಯ ತಪಾಸಣೆ ಶಿಬಿರ ನಡೆಯಿತು.
ಶಿಬಿರದ ಅವಧಿಯಲ್ಲಿ ರೂಮೆವಾಡಿ ಗ್ರಾಮಸ್ಥರಿಗೆ ಸರಿಸೃಪಗಳ ಬಗ್ಗೆ ಮಾಹಿತಿ ನೀಡಲಾಯಿತು. ವಿಶೇಷವಾಗಿ ವಿವಿಧ ಹಾವುಗಳ ಪರಿಚಯ ಹಾಗೂ ವಿಷಕಾರಿ ಹಾವುಗಳ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆ ಬಗ್ಗೆ ಉರಗತಜ್ಞ ಆನಂದ ಚಿಟ್ಟಿ ಮಾಹಿತಿ ನೀಡಿದರು.
ಸಾಮಾಜಿಕ ಕಾರ್ಯಕರ್ತೆ ನಾಗರತ್ನ ರಾಮಗೌಡ ಶಿಬಿರಕ್ಕೆ ಚಾಲನೆ ನೀಡಿದರು. ಕಾಲೇಜಿನ ಪ್ರಾಚಾರ್ಯ ಸುನಿಲ ದೇಸಾಯಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಎನ್ನೆಸ್ಸೆಸ್ ಘಟಕದ ಅಧಿಕಾರಿ ಚಿದಂಬರ ಇನಾಮದಾರ ಉಸ್ತುವಾರಿ ವಹಿಸಿದ್ದರು. ಸಿದ್ಧಾರ್ಥ ಚೌರಿ ಸಹಾಯಕರಾಗಿ ಕಾರ್ಯನಿರ್ವಹಿಸಿದರು. ಜೈನ ಕಾಲೇಜಿನ ೫೦ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.