Latest

ಸುರ್ಜೇವಾಲಾ ಕಾಂಗ್ರೆಸ್ ಆಂತರಿಕ ಕಲಹವನ್ನು ಮೊದಲು ಪರಿಹರಿಸಿಕೊಳ್ಳಲಿ: ಸಿಎಂ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ: “ರಣದೀಪ್ ಸುರ್ಜೇವಾಲ ಅವರು ಕಾಂಗ್ರೆಸ್ ಒಳಜಗಳವನ್ನು ಮೊದಲು ಬಗೆಹರಿಸಿಕೊಂಡು ಆ ಮೇಲೆ ಕರ್ನಾಟಕದ ಬಗ್ಗೆ ಮಾತನಾಡಲಿ” ಎಂದು ಹೇಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಸುರ್ಜೇವಾಲಾ ಅವರಿಗೆ ಕರ್ನಾಟಕದ ಬಗ್ಗೆ ಏನು ಗೊತ್ತಿದೆ?” ಎಂದು ಪ್ರಶ್ನಿಸಿದ್ದಾರೆ.

ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ನರಕ ಸೃಷ್ಟಿಸಿದೆ ಎಂಬ ಸುರ್ಜೇವಾಲಾ ಅವರ ಹೇಳಿಕೆಗೆ ಪ್ರತ್ಯುತ್ತರ ನೀಡಿದ ಬೊಮ್ಮಾಯಿ”ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ ನರಕ ಸೃಷ್ಟಿಸಿದ್ದರಿಂದಲೇ ಜನ ಅವರನ್ನು ಮನೆಗೆ ಕಳುಹಿಸಿದ್ದಾರೆ. ಕಾಂಗ್ರೆಸ್ ಅತ್ಯಂತ ಬೇಜವಾಬ್ದಾರಿ ಪ್ರತಿಪಕ್ಷ. ಜನರಿಗೆ ನಮ್ಮ ವೈಫಲ್ಯಗಳಿದ್ದರೆ ಎತ್ತಿ ತೋರಿಸಲಿ, ಅದನ್ನು ಬಿಟ್ಟು ಇಂಥ ಮಾತುಗಳು ಶೋಭೆ ತರುವುದಿಲ್ಲ” ಎಂದರು.

“ಬಿಜೆಪಿ ಅಸುರರು, ಬೊಮ್ಮಾಯಿ ಅವರು ಭ್ರಷ್ಟಾಸುರ ಎಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, “ಜನರಿಗೆ ಯಾರು ಅಸುರರು, ಯಾರು ದೇವತೆಗಳು ಎಂದು ಗೊತ್ತಿದೆ. 70 ವರ್ಷ ಆಡಳಿತ ಮಾಡಿರುವ ಕಾಂಗ್ರೆಸ್ ನ್ನು ಕಿತ್ತೊಗೆದು ಅಸುರರು ಯಾರೆಂದು ತೋರಿಸಿದ್ದಾರೆ. ಕಾಂಗ್ರೆಸ್ ನಲ್ಲಿರುವ ಅಸುರರ ಪಟ್ಟಿ ಸಾಕಷ್ಟು ದೊಡ್ಡದಿದೆ” ಎಂದರು.

“ನಕಲು ಮಾಡುವಾಗಲೂ ಬುದ್ಧಿ ಇರಬೇಕು” ಎಂದು ಹೇಳಿರುವ ಸುರ್ಜೇವಾಲಾಗೆ ಟಾಂಗ್ ನೀಡಿದ ಸಿಎಂ, “ಅವರಿಗೂ ನಮಗೂ ಬಹಳ ವ್ಯತ್ಯಾವಿದೆ. ಅವರು ಚುನಾವಣೆಗಾಗಿ ಆಕಾಶವನ್ನು ತೋರಿಸಿ ಜನರನ್ನು ಮರಳು ಮಾಡುತ್ತ ಬಂದಿದ್ದಾರೆ. ನಾವು ಯಾವುದಕ್ಕಾಗಿ, ಯಾರಿಗೆ, ಎಷ್ಟು ಹಣವಾಗುತ್ತದೆ ಎಂದು ವಿವರಿಸಿದ್ದೇವೆ. ಅವರು ನಮ್ಮನ್ನು ನಕಲು ಮಾಡಿದ್ದಾರೆ. ನಾವು ಗೃಹಿಣಿ ಶಕ್ತಿ ನೀಡಿದ ಮೇಲೆ ಗೃಹಲಕ್ಷ್ಮಿ ಯೋಜನೆ ಘೋಷಿಸಿದ್ದಾರೆ. ಸುರ್ಜೇವಾಲಾ ಅವರ ಸ್ಮರಣ ಶಕ್ತಿ ಕುಂದಿದಂತಿದೆ” ಎಂದರು.

ಪ್ರತಿಪಕ್ಷದವರು ಕಿವಿ ಮೇಲೆ ಹೂವಿಟ್ಟುಕೊಳ್ಳುವ ಅಭಿಯಾನವನ್ನು ಲೇವಡಿ ಮಾಡಿದ ಬೊಮ್ಮಾಯಿ, “ಇಷ್ಟು ದಿನ ಜನರ ಕಿವಿಗೆ ಹೂವಿಟ್ಟು ಆಗಿದೆ. ಇನ್ನು ಮುಂದ ಜನರೇ ನಿಮ್ಮ ಕಿವಿಗೆ ಹೂವಿಡುತ್ತಾರೆ ಎಂದು ವಿಧಾನಸಭೆಯಲ್ಲಿಯೇ ಉತ್ತರಿಸಿದ್ದೇನೆ.  ಚುನಾವಣೆ ನಂತರ ಕಾಂಗ್ರೆಸ್ಸಿಗರ ಕಿವಿಗಳ ಮೇಲೆ ಕಾಯಂ ಆಗಿ ಹೂವಿರಲಿದೆ” ಎಂದರು.

“ಕಳೆದ ಬಾರಿ ಆಯವ್ಯಯ ಅನುಷ್ಠಾನಕ್ಕೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ  ಶೇ. 90 ರಷ್ಟು ಆದೇಶಗಳನ್ನು ಹೊರಡಿಸಲಾಗಿದೆ. ಅದೇ ರೀತಿ ಈ ಬಾರಿಯೂ  ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಅನುಷ್ಠಾನ ಸಮಿತಿ ರಚಿಸಿ ಅನುಷ್ಠಾನಗೊಳಿಸಲಾಗುವುದು” ಎಂದರು.

ಪ್ರತಿಪಕ್ಷದವರು ಒಗ್ಗೂಡಿದರೆ ಬಿಜೆಪಿಯನ್ನು ಸೋಲಿಸಬಹುದು ಎಂದಿರುವ ಬಿಹಾರದ ಮುಖ್ಯಮಂತ್ರಿ ನಿತೇಶಕುಮಾರ್ ಅವರ ಹೇಳಿಕೆಗೆ ಉತ್ತರಿಸಿ “ನಿತೇಶ್ ಕುಮಾರ್ ಅವರು ಎಷ್ಟು ಬಾರಿ ಬಣ್ಣ ಬದಲಾಯಿಸಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಸ್ವತಃ ಬಣ್ಣ ಬದಲಾಯಿಸುವ ವ್ಯಕ್ತಿಯ ಮಾತಿಗೆ ಏನು ಉತ್ತರ ನೀಡಲು ಸಾಧ್ಯ?” ಎಂದರು.

ಮಾಧ್ಯಮ ಅಕಾಡೆಮಿಯಿಂದ ಉತ್ತರ ಕರ್ನಾಟಕದ ಪತ್ರಕರ್ತರಿಗೆ ಅನ್ಯಾಯವಾಗುತ್ತಿರುವ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿಎಂ ಬೊಮ್ಮಾಯಿ,  “ಅಕಾಡೆಮಿಗೆ ನಾಮಕರಣವಾಗುವ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಪತ್ರಕರ್ತರಿಗೆ ಸೂಕ್ತ ಪ್ರಾತಿನಿಧ್ಯ ನೀಡಲು ಕ್ರಮ ವಹಿಸಲಾಗುವುದು” ಎಂದು ಭರವಸೆ ನೀಡಿದರು.
ರೋಹಿಣಿ IAS V/s ರೂಪಾ IPS; ಜಾಲತಾಣಕ್ಕೂ ತಲುಪಿದ ಜಟಾಪಟಿ

https://pragati.taskdun.com/a-star-studded-fight-between-rohini-sindhuri-and-roopa-moudgil/

ಸುರ್ಜೇವಾಲಾ ಸ್ವಾಗತಿಸಿದ ಹೆಬ್ಬಾಳಕರ್ ಹಟ್ಟಿಹೊಳಿ

https://pragati.taskdun.com/surjewala-welcomed/

ಟ್ರ್ಯಾಕ್ಟರ್ ಹಾಯಿಸಿ ಮಗನನ್ನೇ ಕೊಂದವನಿಗೆ ಶಿಕ್ಷೆ

https://pragati.taskdun.com/punishment-for-the-man-who-killed-his-son-by-passing-a-tractor/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button