Kannada NewsLatest

ರಾಜಕೀಯ ಭಾಷಣದಿಂದ ಅಭಿವೃದ್ಧಿ ಸಾಧ್ಯವಿಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ದೇಶದ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ. ಕಾರಣ ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಹೆಚ್ಚಿನ ಗಮನ ನೀಡಬೇಕು. ನಿಮಗೆ ಬೇಕಾದ ಸಹಾಯ, ಸಹಕಾರ ನೀಡಲು ನಾನು ಸದಾ ಬದ್ಧನಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದರು.

ಯಮಕನಮರಡಿ ಮತಕ್ಷೇತ್ರದ ಮುಚ್ಚಂಡಿ ಗ್ರಾಮದಲ್ಲಿ ಸರ್ಕಾರಿ ಮಾದರಿ ಕನ್ನಡ ಶಾಲೆ ಸನ್ 2022 – 23 ರಲ್ಲಿ ” 4059″ ಕಟ್ಟಡಗಳ ಯೋಜನೆಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದ 6 ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಧನೆ ಮಾಡುವ ಗುರಿ ಹೊಂದಬೇಕು. ಉನ್ನತ ಹುದ್ದೆಗಳ ಗುರಿಯೊಂದಿಗೆ ವ್ಯಾಸಂಗ ಮಾಡಬೇಕು. ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ ಮಾತ್ರ ಯಾವುದೇ ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ. ಈ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣದ ಬಗ್ಗೆ ವಿದ್ಯಾರ್ಥಿಗಳು ಗಮನಹರಿಸಬೇಕೆಂದು ತಿಳಿಸಿದರು.

ಈ ನೂತನ ಶಾಲಾ ಕೊಠಡಿಗಳಿಂದ ಮುಂದಿನ ಹತ್ತು ವರ್ಷಗಳ ಅವಧಿಗೆ ವಿದ್ಯಾರ್ಥಿಗಳಿಗೆ ಕೊಠಡಿಗಳ ಕೊರತೆ ಆಗಲ್ಲ. ಮತಕ್ಷೇತ್ರದಲ್ಲಿ ಕಳೆದ 15 ವರ್ಷದ ಶ್ರಮದಿಂದ ರಸ್ತೆಗಳ ಸುಧಾರಣೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲ ಸೌಕರ್ಯಗಳು ಜನರಿಗೆ ದೊರೆತಿವೆ. ನಿಮ್ಮ ಸಹಕಾರ ಸಿಕ್ಕಿದ್ದರಿಂದ ಯಮಕನಮರಡಿ ಮಾದರಿ ಕ್ಷೇತ್ರವನ್ನಾಗಿ ನಿರ್ಮಿಸಲು ಸಾಧ್ಯವಾಗಿದೆ ಎಂದರು.

ನನ್ನ ಮೊದಲ ಆದ್ಯತೆ ಶಿಕ್ಷಣಕ್ಕೆ, ಹೀಗಾಗಿ ಕಳೆದ 30 ವರ್ಷದ ಹಿಂದೆಯೇ ಎನ್‌ಎಸ್‌ಎಫ್‌ ಸ್ಕೂಲ್‌ ಪ್ರಾರಂಭಿಸಿ, 3 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿದ್ದೇನೆ. ನಂತರ ಶಾಸಕನಾದ ಮೇಲು ಶೈಕ್ಷಣಿಕ ಕಾಂತ್ರಿಗೆ ಪ್ರಾಮುಖ್ಯತೆ ನೀಡುತ್ತಿದ್ದೇನೆ. 224 ಮತಕ್ಷೇತ್ರದಲ್ಲಿ ಶಿಕ್ಷಣಕ್ಕೆ ನಾನು ನೀಡಿದ ಆದ್ಯತೆ ಯಾವ ಶಾಸಕರು ನೀಡಿಲ್ಲ. ಇದಕ್ಕೆ ಉದಾಹರಣೆ ಯಮಕನಮರಡಿ ಕ್ಷೇತ್ರದ ಸರ್ಕಾರಿ, ಖಾಸಗಿ ಶಾಲಾ ಕಾಲೇಜುಗಳಿಗೆ 5 ಸಾವಿರ ಡೆಸ್ಕ್‌ ಗಳನ್ನು ವಿತರಿಸಿದ್ದೇನೆ ಎಂದು ಹೇಳಿದರು.

ರಾಜಕೀಯ ಭಾಷಣದಿಂದ ಅಭಿವೃದ್ಧಿ ಸಾಧ್ಯವಿಲ್ಲ. ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಸರ್ಕಾರಿ ಆಸ್ಪತ್ರೆಗಳು ಜನತೆಗೆ ಗುಣಮಟ್ಟದ ಸೇವೆ ನೀಡಬೇಕು. ಎಲ್ಲಾ ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ಕಲಿಯಲು ಶಕ್ತಿ ಇರಲ್ಲ. ಇವೆಲ್ಲವೂ ದೊರೆಯಬೇಕಾದರೆ ನಾವು ಎಚ್ಚಗೊಳ್ಳಬೇಕು. ಗುಣಮಟ್ಟದ ಶಿಕ್ಷಣ ಸಿಕ್ಕಾಗ ಮಕ್ಕಳ ಭವಿಷ್ಯ ಉಜ್ವಲವಾಗಲು ಸಾಧ್ಯವಿದೆ. ಶಿಕ್ಷಣ ಕ್ಷೇತ್ರ ಸುಧಾರಣೆ ಆಗಲು ಹೋರಾಟ ನಡೆಸಬೇಕು. ಆದರೆ ಇವತ್ತು ಗುಡಿಗಳನ್ನು ಕಟ್ಟದಿದ್ದರೆ ವೋಟ್ ಹಾಕಲ್ಲ ಎನ್ನುವ ಕೂಗು ಕೇಳುತ್ತದೆ. ಇಂತಹ ವ್ಯವಸ್ಥೆ ಸರಿಯಲ್ಲ ಎಂದು ತಿಳಿಸಿದರು.

ಒಳ್ಳೆಯ ಕೆಲಸ ಮಾಡಿದವರನ್ನು ಆಯ್ಕೆ ಮಾಡಿ. ಮಾಜಿ ಸಿಎಂ ಬಂಗಾರಪ್ಪ ಅವರು ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗದೆ ಆಯ್ಕೆಯಾಗುತ್ತಿದ್ದರು. ಅವರ ಶಿಷ್ಯನಾದ ನಾನು ಅವರಂತೆ ಆಯ್ಕೆಯಾಗಬೇಕೆಂದು ಹಠ ಇತ್ತು. ಹೀಗಾಗಿ ಕಳೆದ ಬಾರಿ ಮತಕ್ಷೇತ್ರದಲ್ಲಿ ಪ್ರಚಾರ ಮಾಡದೇ ಆಯ್ಕೆಯಾದೆ. ನನ್ನನ್ನು ಆಯ್ಕೆ ಮಾಡಿದ ನಿಮ್ಮೆಲ್ಲರಿಗೂ ನಾನು ಚಿರಋಣಿಯಾಗಿದ್ದೇನೆ. ಅಭಿವೃದ್ಧಿಗೆ ಹೆಚ್ಚು ಓತ್ತು ನೀಡುವ ನನ್ನನ್ನು ಮುಂದೆಯೂ ಬೆಂಬಲಿಸುತ್ತೀರಿ ಎಂಬ ನಂಬಿಕೆ ನನಗೆದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿ ಸಿಇಓ ದರ್ಶನ್ ಅವಧಿಯಲ್ಲಿ ಕ್ಷೇತ್ರದ ಶಾಲೆಗಳು ಸುಧಾರಣೆ ಕಂಡಿವೆ. ಇಂತಹ ಕಾರ್ಯಗಳನ್ನು ಎಲ್ಲಾ ಅಧಿಕಾರಿಗಳು ಮಾಡಬೇಕು. ಅಭಿವೃದ್ಧಿ ಕಾರ್ಯಗಳಿಗೆ ಅಧಿಕಾರಿಗಳ ಇಚ್ಛಾಶಕ್ತಿ ಅಗತ್ಯವಿದೆ. ಈಗಾಗಲೇ ಪ್ರಣಾಳಿಕೆ ತಯಾರಿಸಿದ್ದು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡುತ್ತೇವೆ ಎಂದು ಭರವಸೆ ನೀಡಿದರು.

ತ್ರಿಚಕ್ರ ವಾಹನ ವಿತರಣೆ: 2019-20 ಹಾಗೂ 2021-2022ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮತಕ್ಷೇತ್ರದ 28 ಲಕ್ಷ ರೂ. ವೆಚ್ಚದಲ್ಲಿ ಅಂಗವಿಕಲರಿಗೆ 28 ತ್ರಿಚಕ್ರ ವಾಹನ ವಿತರಿಸಿದರು.

ಚೆಕ್ ವಿತರಣೆ: ಕರೋನಾ ಅವಧಿಯಲ್ಲಿ ಆತ್ಮಹತೆ ಮಾಡಿಕೊಂಡ ಮೂವರ ನೇಕಾರರ ಕುಟುಂಬಸ್ಥರಿಗೆ ಶಾಸಕ ಸತೀಶ್‌ ಜಾರಕಿಹೊಳಿಯವರು ತಲಾ 3 ಲಕ್ಷ ರೂಪಾಯಿ ಚೆಕ್‌ ವಿತಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ದಾಸಪ್ಪನವರ್, ಎಸ್ಡಿಎಂಸಿ ಅಧ್ಯಕ್ಷ ಸಿದ್ರಾಯಿ ಹುಲಕಾಯಿ, ಎಸ್ ಡಿಎಂಸಿ ಸದಸ್ಯರಾದ ಲಕ್ಷ್ಮಣ ಮೇಗಿನಮನಿ, ಸಂಜಯ ಭದ್ರಶೆಟ್ಟಿ, ಗಂಗಾಧರ ಹಿರೇಮಠ, ಬಾಬು ಗುಡ್ಡದೈಗೋಳ, ಉಮೇಶ್ ಅಸ್ಟಗಿ, ರಮೇಶ ನಾವಲಗಿ, ರೇಣುಕಾ ಬಂಡಿಹೊಳಿ, ಶಂಕರಮ್ಮ ಮೈಲಾಪ್ಪಗೋಳ, ಲಕ್ಷ್ಮಿ ಹುಲಕಾಯಿ, ರೇಷ್ಮಾ ಮೋಕಾಶಿ, ಯಲ್ಲವ್ವಾ ಬಸರಿಮರದ, ಗೌರಮ್ಮ ಕೊರಶೇಟ್ಟಿ, ಪ್ರಿಯಾ ಕೊಲಕಾರ್, ಗೀತಾ ಕುಂಬಾರ, ಗ್ರಾಪಂ ಅಧ್ಯಕ್ಷ ಅನಿತಾ ವಡೇಯರ್, ಸದಸ್ಯರಾದ ಸುನೀತಾ ಗುಡದೈಗೋಳ, ಸುಧಾ ಬಾತಕಾಂಡೆ, ಜೋತಿಪ್ರಭಾ ಕೋಲಕಾರ್, ರೂಪಾ ಕಾಕತಿ, ದೀಪಿಕಾ ಸೊಲಬನ್ನವರ್, ಸಂದೀಪ್ ಜಕ್ಕಾಣೆ, ಲಕ್ಷ್ಮಣ್ ಬುಡ್ರಿ, ಶಂಕರ ಕುಂಬಾರ, ಕಲ್ಲಪ್ಪಾ ನಾವಲಗಿ, ಮುಖಂಡರಾದ ಅರವಿಂದ ಕಾರ್ಚಿ ಸೇರಿದಂತೆ ಮುಚ್ಚಂಡಿ ಗ್ರಾಮದ ಹಿರಿಯರು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button