Latest

*ಸ್ವಾತಂತ್ರ್ಯ ಹೋರಾಟಗಾರ ಸೋಮಲಿಂಗಪ್ಪ ಮೂಲಿಮನಿ ನಿಧನ*

ಪ್ರಗತಿವಾಹಿನಿ ಸುದ್ದಿ; ಹೊಸೂರ: ಕ್ರಾಂತಿಕಾರಿಗಳ ನಾಡು ಸವದತ್ತಿ ತಾಲೂಕಿನ ಹೊಸೂರ ಗ್ರಾಮದ 225 ಜನ ಸ್ವಾತಂತ್ರ್ಯ ಹೋರಾಟಗಾರರ ಕೊನೆಯ ಕೊಂಡಿಯಾಗಿದ್ದ ಸೋಮಲಿಂಗಪ್ಪ ಮೂಲಿಮನಿ (93) ಶನಿವಾರ ರಾತ್ರಿ ತೀವ್ರ ಹೃದಯಾಘಾತದಿಂದ ನಿಧನರಾದರು.

ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ದೊಡ್ಡದಾದ ತಂಡ ನಿರ್ಮಾಣವಾಗಿ ಇಂದಿಗೂ ಶೂರರ ನಾಡು ಎಂದರೆ ಹೊಸೂರ ಗ್ರಾಮ. ಗ್ರಾಮದ ಸೋಮಲಿಂಗಪ್ಪ ವಣ್ಣುರ, ರಾಚಪ್ಪ ಬೋಳೆ, ಸುತಗಟ್ಟಿ ಈರಪ್ಪನವರು, ದಾದಾ ಕಾಳೆಯವರ ನೆತೃತ್ವದಲ್ಲಿ ಗ್ರಾಮದಲ್ಲಿ ನಡೆಯುತಿದ್ದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಳ ಪ್ರಭಾವದಿಂದ ಚಿಕ್ಕ ವಯಸ್ಸಿನಲ್ಲಿಯೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದರು.

ಬ್ರಿಟಿಷ್ ಸರ್ಕಾರದ ವಿರುದ್ದ ಹೋರಾಟದಲ್ಲಿ ತೊಡಗಿ ಭೂಗತವಾಗಿ ಜಮೀನುಗಳಲ್ಲಿ ಅಗಿಕೊಂಡಿದ್ದ ಗ್ರಾಮದ ಹಿರಿಯರಿಗೆ ಇವರು ತಮ್ಮ 14 ನೆ ವಯಸ್ಸಿನಲ್ಲಿ ಧೈರ್ಯದಿಂದ ಹೊರಾಟಗಾರರ ಅಡಗು ತಾಣಗಳಿಗೆ ಊಟ ಉಪಚಾರ ನೀಡಲು ಹೋಗುತಿದ್ದರು.

ನಂತರ ಅಸಹಕಾರ ಚಳುವಳಿ ಅಂಗವಾಗಿ ನಡೆದ ತಾರ ತಂತಿ ಕಡಿಯುವದು, ಗ್ರಾಮದಲ್ಲಿದ್ದ ಬ್ರಿಟಿಷ್ ಬಂಗ್ಲೆ ಸುಡುವಲ್ಲಿ ಭಾಗವಹಿಸದ್ದ ಇವರು ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರ 225 ತಂಡದ ಅತ್ಯಂತ ಸಣ್ಣ ವಯಸ್ಸಿನ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದರು. ಬ್ರಿಟಿಷ್ ಅಧಿಕಾರಿಗಳಿಗೆ ಇವರನ್ನು ನೋಡಿದರೆ ಸಣ್ಣ ಹುಡುಗ ಇವನೇನು ಮಾಡಿಯಾನು ಎನ್ನುವ ಭ್ರಮೆ ಹುಟ್ಟಿಸಿ ಅವರಿಗೆ ಚಳ್ಳೆ ಹಣ್ಣು ತಿನಿಸಿ ಸಾಮಾನ್ಯ ಬಾಲಕನಂತೆ ಇದ್ದು ಗ್ರಾಮದಲ್ಲಿ ನಡೆಯುತಿದ್ದ ಬ್ರೀಟಿಷರ ಎಲ್ಲ‌ಮಾಹಿತಿಗಳನ್ನು ಹೋರಾಟಗಾರರಿಗೆ ನೀಡುತಿದ್ದರು.

ಸ್ವಾತಂತ್ರ್ಯೋತ್ಸೋಸವದ ಧ್ವಜಾರೋಹಣಗಾರರು ಗ್ರಾಮ ಕ್ರಾಂತಿಕಾರಿಗಳ ಬೀಡಾಗಿದ್ದರ ಪ್ರತೀಕವಾಗಿ ಪ್ರತಿ ವರ್ಷ ಅಗಷ್ಟ್ 14 ರಂದು ರಾತ್ರಿ12 ಘಂಟೆಗೆ ಗ್ರಾಮದಲ್ಲಿ ನಡೆಯುತಿದ್ದ ಧ್ವಜಾರೋಹಣ ಕಾರ್ಯಕ್ರಮ ಇವರ ಹಸ್ತದಿಂದ ನಡೆಸುತಿತ್ತು.

ಈ ಕಾರ್ಯಕ್ರಮಕ್ಕೆ ಇವರು ಎಂದು ಗೈರುಆಗಲಿಲ್ಲ. ಎಂತಹ ಅನಾರೋಗ್ಯದಲ್ಲಿದ್ದರು ಹಾಗೂ ಕರೋನಾದಂತಹ ಸಮಯದಲ್ಲಿ ಮತ್ತು ಬಾರಿ ಮಳೆಯ ನಡುವೆಯು ರಾತ್ರಿ ಧ್ವಜಾರೋಹಣ ನಡೆಸುತಿದ್ದರು.

ತಮ್ಮ 93ನೇ ವಯಸ್ಸಿನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದ ಇವರಿಗೆ, ನೀಲಪ್ಪ, ರುದ್ರಪ್ಪ, ಮಹಾಂತೇಶ, ಮಂಜುನಾಥ ಹಾಗೂ ಶಶಿಕಲಾ ಕಳಸಣ್ಣವರ ಮಕ್ಕಳಿದ್ದು ಅಪಾರ ಬಂದು ಬಳಗ ಹೊಂದಿದ್ದಾರೆ.

ಸ್ವಾತಂತ್ರ್ಯ ಸಂಗ್ರಾಮದಿಂದ ಹಳ್ಳಿಯಿಂದ ಕರುನಾಡಿಗೆ ಪರಿಚಿತವಾದ ಕುಟುಂಬ ಇವರ ಮೊಮ್ಮಗಾ ಸಿದ್ದು ಮುಲಿಮನಿ ಖ್ಯಾತ‌ ಸಿನಿಮಾ ತಾರೆಯಾಗಿದ್ದಾರೆ. ಗ್ರಾಮದ ಗೌರವವನ್ನು ಅಂದು ಸಣ್ಣ ವಯಸ್ಸಿನಲ್ಲಿ ಸ್ವಾತಂತ್ರ್ಯತ್ಸೋವದಲ್ಲಿ ಪಾಲ್ಗೊಂಡು ಹೆಚ್ಚಿಸಿದ್ದ ಅಜ್ಜ ಗ್ರಾಮದ ಹಿರೋ ಆದರೆ ಇಂದು ಸಿನಿಮಾ ರಂಗದಲ್ಲಿ ಮೊಮ್ಮಗ ಸಣ್ಣ ವಯಸ್ಸಿನಲ್ಲಿ ಕರುನಾಡಿನ ಹೀರೊ ಆಗಿ ಮಿಂಚುತ್ತಿರುವದು ಗ್ರಾಮದ ಹೆಮ್ಮೆಯಾಗಿದೆ.

ಸ್ವಾತಂತ್ರ್ಯ ಹೋರಾಟಗಾರರ ಬದುಕು ದೇಶಕ್ಕಾಗಿ ಮಿಸಲು ಮಾಡಿದ್ದರಿಂದ ಇವತ್ತು ಅವರ ಕುಟುಂಬ ಸಮಸ್ತ ಕರುನಾಡಕ್ಕೆ‌ ಪಸರಿಸಿದೆ. ಮಕ್ಕಳಿಬ್ಬರು ತಂದೆಯ ಖಾದಿ ಪ್ರಭಾವದಿಂದ ಮೈಸೂರಿನಲ್ಲಿ ಶ್ರೀ ವೆಂಕಟೇಶ ಮಾಗಡಿ ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಂಘ ಸ್ಥಾಪಿಸಿ ಇಂದು ಮೈಸೂರು ಭಾಗದಲ್ಲಿ ಪ್ರಭಾವಿಗಳಾಗಿದ್ದಾರೆ. ಹೊಸೂರ ಗ್ರಾಮದಲ್ಲಿದ್ದ‌ ಕುಟುಂಬ ರಾಜ್ಯಕ್ಕೆ ಪರಿಚಯವಾಗಿದೆ.

ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ, ಕಂದಾಯ ನೀರಿಕ್ಷಕ ಆರ್.ಎಸ್.ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಬಿ.ಸಿದ್ದನಗೌಡರ, ನೀರು ಬಳಕೆದಾರರ ಮಹಾಮಂಡಳ‌ ನಿರ್ದೆಶಕ ಸಿ.ವಾಯ್.ಬೂದಿಹಾಳ, ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ, ಎಸ್.ಕೆ.ಮೆಳ್ಳಿಕೇರಿ ಸಂತಾಪ‌ ವ್ಯಕ್ತಪಡಿಸಿದ್ದಾರೆ.

https://pragati.taskdun.com/belagavitoranahalli-homeraidliquer-seized

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button