Latest

*ಬೃಹತ್ ಸಮಾವೇಶ, ಅಪಾರ ಜನಸ್ತೋಮದ ನಡುವೆ ಕಾಂಗ್ರೆಸ್ ಗೆ ಸೇರ್ಪಡೆಯಾದ ಜೆಡಿಎಸ್ ನಾಯಕ ಶಿವಲಿಂಗೇಗೌಡ*

ಪ್ರಗತಿವಾಹಿನಿ ಸುದ್ದಿ; ಅರಸಿಕೆರೆ: ಜೆಡಿಎಸ್ ನಾಯಕ, ಮಾಜಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಇಂದು ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆಯಾದರು. ಅರಸಿಕೆರೆಯಲ್ಲಿ ನಡೆದ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶಿವಲಿಂಗೇಗೌಡ ಅವರನ್ನು ಕಾಂಗ್ರೆಸ್ ಗೆ ಬರಮಾಡಿಕೊಂಡರು.

ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಇತ್ತೀಚಿನ ದಿನಗಳಲ್ಲಿ ಇತಿಹಾಸ ಸೃಷ್ಟಿಸುವ ರೀತಿಯಲ್ಲಿ ಜೆಡಿಎಶ್ ನಿಂದ ಕಾಂಗ್ರೆಸ್ ಪಕ್ಷಕ್ಕೆ ಅನೇಕ ನಾಯಕರು ಸೇರ್ಪಡೆಯಾಗುತ್ತಿದ್ದಾರೆ. ಅಧಿಕಾರ ನಶ್ವರ, ಶಿವಲಿಗೇಗೌಡರು ಮಾಡಿರುವ ಸಾಧನೆ ಅಜರಾಮರ. ಆದರೆ ಕೊನೆಗೆ ಮತದಾರರೇ ಈಶ್ವರ ಎಂದು ನಿಮ್ಮ ಬದುಕು ಹಸನ ಮಾಡಲು ಶಿವಲಿಂಗೇಗೌಡರು ಹಾಗೂ ಅವರ ಆಪ್ತರು ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ ಎಂದರು.

ಪಕ್ಷದ ಅಧ್ಯಕ್ಷನಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಪರವಾಗಿ, ಪಕ್ಷದ ಇತರ ನಾಯಕರ ಪರವಾಗಿ ಶಿವಲಿಂಗೇಗೌಡರಿಗೆ ತುಂಬು ಹೃದಯದ ಸ್ವಾಗತ ಮಾಡಿಕೊಳ್ಳುತ್ತೇನೆ. ಇಂದು ನಾವು ಚುನಾವಣೆ ಹಂತದಲ್ಲಿದ್ದೇವೆ. ನಾನು ಶಿವಲಿಂಗೇಗೌಡರಿಗೆ 10 ವರ್ಷಗಲಿಂದ ಗಾಳ ಹಾಕುತ್ತಿದ್ದೆ. ಸಿದ್ದರಾಮಯ್ಯನವರು ಕೂಡ ಇವರಿಗೆ ಗಾಳ ಹಾಕುತ್ತಿದ್ದರು. ಆದರೆ ಇವರು ಗಾಳಕ್ಕೆ ಬಿದ್ದಿರಲಿಲ್ಲ. ಕೊನೆಗೆ ಇವರು ಕ್ಷೇತ್ರದ ಜನರ ಅಭಿವೃದ್ಧಿಯ ಗಾಳಕ್ಕೆ ಬಿದ್ದಿದ್ದಾರೆ. ನಾನು ಕ್ಷೇತ್ರದ ಋಣ ತೀರಿಸಬೇಕು ಎಂದು ಎಂದು ಸಂಕಲ್ಪ ಮಾಡಿ ಪಕ್ಷಕ್ಕೆ ಬಂದಿದ್ದಾರೆ.

ನಾನು ಇಲ್ಲಿಗೆ ಬರುವಾಗ ನನ್ನ ಮಿತ್ರ ಶಶಿಧರ್ ಅವರ ಜತೆ ಮಾತನಾಡಿದೆ. ಅವರು ನಮಗೆ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಅವರ ಜತೆಯಲ್ಲಿ ಗುರುತಿಸಿಕೊಂಡಿರುವ ಎಲ್ಲ ಕಾರ್ಯಕರ್ತರಿಗೆ ಒಂದು ಭರವಸೆ ನೀಡಲು ಬಯಸುತ್ತೇನೆ. ನೀವು ನಮ್ಮ ಕಷ್ಟ ಕಾಲದಲ್ಲಿ ನಮ್ಮ ಧ್ವಜ ಹಿಡಿದಿದ್ದೀರಿ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಧ್ವಜವನ್ನು ಹಾಕಿ ಮೆರೆಸಿ ನೀವು ತೊಂದರೆ ಅನುಭವಿಸಿದ್ದೀರಿ. ರಾಜಕಾರಣದಲ್ಲಿ ದ್ವೇಷ ಸಹಜ. ಆದರೆ ಕಾಲ ಬದಲಾದಂತೆ ನಾವು ನಮ್ಮ ವೈಯಕ್ತಿಕ ವಿಚಾರ ಬಿಟ್ಟು ಬಹಳ ದೂರದೃಷ್ಟಿಯಿಂದ ಬಹಳ ಯೋಚನೆ ಮಾಡಬೇಕಿದೆ.

ನನಗೆ ಕುಮಾರಸ್ವಾಮಿ ಹಾಗೂ ದೇವೇಗೌಡರಿಗೆ ರಾಜಕಾರಣದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯವಿದೆ. ನಾನು ದೇವೇಗೌಡರ ವಿರುದ್ಧ ಸ್ಪರ್ಧಿಸಿ ಸೋತಿದ್ದೇನೆ, ಕುಮಾರಸ್ವಾಮಿ ಅವರ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದೇನೆ. ಕುಮಾರಸ್ವಾಮಿ ಅವರ ಧರ್ಮಪತ್ನಿ ವಿರುದ್ಧ ನನ್ನ ಸಹೋದರನನ್ನು ನಿಲ್ಲಿಸಿ ಗೆಲ್ಲಿಸಿದ್ದೇನೆ. ಇವೆಲ್ಲಾ ರಾಜಕಾರಣದಲ್ಲಿ ನಡೆದಿದೆ. ಕಳೆದ ಚುನಾವಣೆಯಲ್ಲಿ ಸಪಷ್ಟ ಬಹುಮತ ಸಿಗದಿದ್ದಾಗ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ನಮ್ಮ ಪಕ್ಷದ ತೀರ್ಮಾನಕ್ಕೆ ತಲೆಬಾಗಿ ಜೆಡಿಎಸ್ ಪಕ್ಷಕ್ಕೆ ಬೇಷರತ್ ಬೆಂಬಲ ನೀಡಿದೆವು. ಆದರೆ ಈ ಅಧಿಕಾರವನ್ನು ಕುಮಾರಣ್ಣ ಉಳಿಸಿಕೊಳ್ಳಲಿಲ್ಲ. ನಾನು ಶಿವಲಿಂಗೇಗೌಡರು ಸರ್ಕಾರ ಉಳಿಸಲು ಬಾಂಬೆಗೆ ಹೋಗಿ ಬೀದಿಯಲ್ಲಿ ನಿಂತು ಎಷ್ಟು ಹೋರಾಟ ಮಾಡಿದ್ದೇವೆ ಎಂದು ನಮಗೆ ಗೊತ್ತು. ಪೊಲೀಸರು ನಮ್ಮನ್ನು ಹೇಗೆ ನಡೆಸಿಕೊಂಡರು ಎಂದು ನೀವೆಲ್ಲ ನೋಡಿದ್ದೀರಿ. ನಮಗೆ ಕುಮಾರಣ್ಣನ ಸರ್ಕಾರ ಉಳಿಸಿಕೊಳ್ಳಬೇಕು ಎಂಬ ನಿಷ್ಠೆಯಿಂದ ಆ ಹೋರಾಟ ಮಾಡಿದ್ದೆವು. ಆದರೆ ಉಲಿಸಿಕೊಳ್ಳಲು ಆಗಲಿಲ್ಲ. ನಮಗೆ ಜಾತ್ಯಾತೀತ ತತ್ವದ ಮೇಲೆ ನಂಬಿಕೆ ಇದ್ದ ಕಾರಣ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿದ್ದೆವು.

ಈ ಹಿಂದೆ ಕಾಂಗ್ರೆಸ್ ಪಕ್ಷ ದೇವೇಗೌಡರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿತ್ತು. ಇತಿಹಾಸವನ್ನು ಮರೆತವರು ಇತಿಹಾಸ ಸೃಷ್ಟಿಸಲಾರರು ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ. ಶಿವಲಿಗೇಗೌಡರೂ ಹೊರಾಟ ಮಾಡಿಕೊಂಡು ಬಂದಿದ್ದಾರೆ. ಹೋರಾಟ ಮಾಡುವವರು ಗೆದ್ದೇ ಗೆಲ್ಲುತ್ತಾರೆ. ಅವರಿಗೆ ಸೋಲು ಹಾಗೂ ಸಾವಿನ ಭಯ ಇರುವುದಿಲ್ಲ ಎಂಬ ಮಾತನ್ನೂ ಅಂಬೇಡ್ಕರ್ ಅವರು ಹೇಳಿದ್ದಾರೆ.

ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಆ ಅವಕಾಶವನ್ನು ನೀವು ಹೇಗೆ ಬಳಸಿಕೊಳ್ಳುತ್ತೀರ ಎಂಬುದು ಬಹಳ ಮುಖ್ಯ. ನೀವೆಲ್ಲರೂ ರೈತನ ಮಕ್ಕಳು. ನಿಮಗೆ ಸಂಬಳ, ಪಿಂಚಣಿ, ಬಡ್ತಿ, ಲಂಚ ಯಾವುದೂ ಇಲ್ಲ. ಬಿಜೆಪಿಯವರು ನಿಮ್ಮ ಆದಾಯ ಡಬಲ್ ಮಾಡುತ್ತೇವೆ, 1 ಲಕ್ಷದವರೆಗಿನ ಸಾಲ ಮನ್ನಾ ಮಾಡುತ್ತೇವೆ, ನಿಮ್ಮ ಖಾತೆಗಳಿಗೆ 15 ಲಕ್ಷ ಹಣ ಹಾಕುತ್ತೇವೆ ಎಂದಿದ್ದರು. ಆದರೆ ಯಾವುದನ್ನು ಮಾಡಲಿಲ್ಲ. ಈ ಬಗ್ಗೆ ನೀವು ಬಿಜೆಪಿಯನ್ನು ಪ್ರಶ್ನಿಸಬೇಕು.

ಜೀವನದಲ್ಲಿ ನಂಬಿಕೆ ಬಹಳ ಮುಖ್ಯ. ನಾವು ಬದುಕುತ್ತಿರುವುದೇ ನಂಬಿಕೆ ಮೇಲೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಪಕ್ಷ ಸಮಾಜಕ್ಕೆ ನೀಡಿರುವ ಬದ್ಧತೆ, ಬಡವರನ್ನು ರಕ್ಷಣೆ ಮಾಡಿಕೊಂಡು ಬರುವ ಸಿದ್ಧಾಂತ ಇಟ್ಟುಕೊಂಡಿದ್ದು, ಅದರ ಮೇಲೆ ನಾವು ಕೆಲಸ ಮಾಡಿಕೊಂಡು ಬಂದಿದ್ದೇವೆ.

ರಾಜ್ಯ, ದೇಶದ ಹಿತಕ್ಕಾಗಿ ನಾವು ನಮ್ಮ ಸ್ವಾರ್ಥವನ್ನು ತ್ಯಾಗ ಮಾಡಬೇಕು. ಮೇ 10 ರಂದು ಚುನಾವಣೆ ನಡೆಯುತ್ತಿದ್ದು, ಆ ದಿನ ಕೇವಲ ಮತದಾನ ಮಾಡುವ ದಿನ ಮಾತ್ರವಲ್ಲ. ಕರ್ನಾಟಕದಲ್ಲಿ ಬದಲಾವಣೆ ತರುವ ದಿನ. ಭ್ರಷ್ಟ ಬಿಜೆಪಿಯನ್ನು ಬಡಿದೋಡಿಸುವ ದಿನ, ನಿಮ್ಮ ಭವಿಷ್ಯವನ್ನು ನೀವೇ ನಿರ್ಧಾರ ಮಾಡಿಕೊಳ್ಳುವ ದಿನ.

ಕಾಂಗ್ರೆಸ್ ಪಕ್ಷ ಪ್ರಜಾಧ್ವನಿ ಯಾತ್ರೆ ಮಾಡುತ್ತಾ ರಾಜ್ಯದ ಜನರ ಸಂಕಷ್ಟಗಳನ್ನು ಆಲಿಸಿದೆ. ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು 4 ಗ್ಯಾರಂಟಿ ಯೋಜನೆ ಘೋಷಿಸಿದ್ದೇವೆ. ಬೆಲೆ ಏರಿಕೆಯಿಂದ ರಾಜ್ಯದ ಜನಸಾಮಾನ್ಯರ ಬದುಕು ಬೀದಿಗೆ ಬಿದ್ದಿದೆ. ಹೀಗಾಗಿ ಅವರಿಗೆ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಮೊದಲನೇ ಗ್ಯಾರಂಟಿ ಯೋಜನೆಯಾಗಿ ಗೃಹಜ್ಯೋತಿ ಪ್ರಕಟಿಸಿದೆ. ಈ ಯೋಜನೆ ಮೂಲಕ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಆಮೂಲಕ ಈ ಕ್ಷೇತ್ರದ ಬಹುತೇಕ ಮಂದಿ ಇನ್ನುಮುಂದೆ ಕರೆಂಟ್ ಬಿಲ್ ಕಟ್ಟುವ ಅಗತ್ಯ ಇರುವುದಿಲ್ಲ. ಈ ಯೋಜನೆ ಮೂಲಕ ಪ್ರತಿ ಕುಟುಂಬ ಪ್ರತಿ ತಿಂಗಳು 1500 ರೂ ಉಳಿತಾಯ ಮಾಡಬಹುದು. ಇನ್ನು ಎರಡನೇ ಯೋಜನೆಯಾಗಿ ಗೃಹಲಕ್ಷ್ಮಿ ಯೋಜನೆ ಪ್ರಕಟಿಸಿದ್ದೇವೆ. ಆಮೂಲಕ ಸಂಸಾರ ನಡೆಸಲು ಪರದಾಟ ನಡೆಸುತ್ತಿರುವ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು. ಆಮೂಲಕ ವರ್ಷಕ್ಕೆ 24 ಸಾವಿರ ನೀಡಲಾಗುವುದು. ಇನ್ನು ರಾಜ್ಯದಲ್ಲಿ ಯಾವುದೇ ಬಡ ವ್ಯಕ್ತಿ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆಯಲ್ಲಿ ನೀಡಲಾಗುತ್ತಿರುವ ಉಚಿತ ಅಕ್ಕಿ ಪ್ರಮಾಣವನ್ನು 10 ಕೆ.ಜಿಗೆ ಏರಿಕೆ ಮಾಡಲಾಗುವುದು. ಇನ್ನು ನಿರುದ್ಯೋಗ ಸಮಸ್ಯೆಯಿಂದ ಬಳಲಿರುವ ಯುವಕರಿಗೆ ಧೈರ್ಯ ತುಂಬುವ ಉದ್ದೇಶದಿಂದ ನಿರುದ್ಯೋಗ ಪಧವೀದರರಿಗೆ ಪ್ರತಿ ತಿಂಗಳು 3 ಸಾವಿರ, ಡಿಪ್ಲೋಮಾ ಪದವೀಧರರಿಗೆ 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು. ನಾವು ಈ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡದಿದ್ದರೆ, ನಾವು ಮತ್ತೆ ನಿಮ್ಮ ಮನೆ ಮುಂದೆ ಬಂದು ಮತ ಕೇಳುವುದಿಲ್ಲ. ನೀವೆಲ್ಲರೂ ಕಾಂಗ್ರೆಸ್ ಪಕ್ಷದ ಈ ಯೋಜನೆಗಳ ಗ್ಯಾರಂಟಿ ಕಾರ್ಡ್ ಗಳನ್ನು ನೀವು ಮನೆ ಮನೆಗೆ ತಲುಪಿಸಬೇಕು.

ಬಿಜೆಪಿ ಸರ್ಕಾರ 80 ವರ್ಷ ಮೇಲ್ಪಟ್ಟ ಮತದಾರರು ಮನೆಯಿಂದಲೇ ಮತದಾನ ಮಾಡುವ ಕಾನೂನು ತಂದಿದೆ. ನೀವುಗಳು ಈ ಅಕಾಶವನ್ನು ಬಳಸಿಕೊಂಡು ಮತ ಹಾಕಬೇಕು. ನೀವು ಈ ಮತ ಹಾಕಿದಿದ್ದರೆ ನಿಮ್ಮ ಮತಗಳನ್ನು ದುರುಪಯೋಗ ಮಾಡಿಕೊಳ್ಳುವ ಅವಕಾಶವಿದೆ. ಹೀಗಾಗಿ ನೀವು ಎಚ್ಚರಿಕೆಯಿಂದ ಇರಬೇಕು.

ಪುರಂದರ ದಾಸರ ಇದು ಭಾಗ್ಯ ಇದು ಭಾಗ್ಯ, ಇದು ಭಾಗ್ಯವಯ್ಯಾ, ಪದುಭನಾಭನ ಪಾದ ಭಜನೆ ಪರಮ ಸುಖವಯ್ಯ ಎಂಬ ಕೀರ್ತನೆಯಂತೆ ಅರಸಿಕೆರೆಯ ಮಹಾ ಜನತೆ ಮುಂದೆ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿ ಶಕ್ತಿ ತುಂಬಿರುವುದು ಶಿವಲಿಂಗೇಗೌಡರ ಭಾಗ್ಯ.

ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಅದೇ ರೀತಿ ಇಂದು ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೆ, ಎಲ್ಲ ವರ್ಗದ ಜನ ಅಧಿಕಾರದಲ್ಲಿ ಇದ್ದಂತೆ. ನೀವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ನಿಮ್ಮ ಸೇವೆ ಮಾಡಲು ನಮಗೆ ಶಕ್ತಿ ತುಂಬಬೇಕು ಎಂದು ಕರೆ ನೀಡಿದರು.

https://pragati.taskdun.com/nagaraj-chabbibjpjoincongress-leader/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button