
ಪ್ರಗತಿವಾಹಿನಿ ಸುದ್ದಿ ಬೆಳಗಾವಿ: ಕರ್ನಾಟಕ ಮಾಹಿತಿ ಆಯೋಗ ಪೀಠದಲ್ಲಿ ಜುಲೈ 28 ರಂದು ಮೇಲ್ಮನವಿಗಳ ವಿಚಾರಣೆ ನಡೆಸಿ ಅರ್ಜಿದಾರರಿಗೆ ಸಕಾಲದಲ್ಲಿ ಮಾಹಿತಿ ನೀಡದೆ ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘಿಸಿದ್ದರಿಂದ ಸಾರ್ವಜನಿಕ ಮಾಹಿತಿ ಅಧಿಕಾರಿ. ಪುರಸಭೆ ಸಿಂದಗಿ, ಹುಬ್ಬಳ್ಳಿ ತಾಲೂಕು ತಹಶೀಲ್ದಾರ್ ಮತ್ತು ಗಜೇಂದ್ರಗಡ ತಾಲೂಕಿನ ಇಟಗಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ರವರಿಗೆ ತಲಾ ರೂ.10,000 ದಂಡ ವಿಧಿಸಿ ಶಿಸ್ತು ಕ್ರಮ ಜರುಗಿಸಿಲಾಗಿದೆ.
ಮೇಲ್ಮನವಿದಾರರು ಅನುಭವಿಸಿದ ಕಷ್ಟ ಮತ್ತು ಇತರೆ ವೆಚ್ಚಗಳಿಗಾಗಿ 5,000 ರೂ. ಗಳ ಪರಿಹಾರವನ್ನು ನೀಡುವಂತೆ ಸಾರ್ವಜನಿಕ ಮಾಹಿತಿ ಅಧಿಕಾರಿ ಆಗಿರುವ ಉಪಲೆಕ್ಕ ನಿಯಂತ್ರಣಾಧಿಕಾರಿ (ಹಣಕಾಸು), ನಿಗಮ ಕಛೇರಿ, ಹೆಸ್ಕಾಂ, ನವನಗರ ತಾ: ಹುಬ್ಬಳ್ಳಿ ರವರಿಗೆ ಆದೇಶಿಸಿ. ಮುಂದೆ ಈ ತರಹ ಮರುಕಳಿಸದಂತೆ ಮಾಹಿತಿ ಆಯುಕ್ತರಾದ ಪ್ರಕಾಶ ನಾರಾಯಣ ಚನ್ನಾಳರವರು ಸೂಚಿಸಿದರು.
ಇಲಾಖೆ ಅಧಿಕಾರಿಗಳಿಗೆ ಮೇಲ್ಮಣವಿದಾರರ ಅರ್ಜಿಗಳಿಗೆ ಸ್ಪಂದಿಸಿ ಕಾಲಮಿತಿಯೊಳಗೆ ಸರಿಯಾದ ಮಾಹಿತಿ ನೀಡಲು ತಿಳಿಸಿರುತ್ತಾರೆ. ಮಾಹಿತಿ ನೀಡದೆ ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯ ತೋರಿದ್ದಲ್ಲಿ ಶಿಸ್ತು ಕ್ರಮ ಜರುಗಿಸಿ ವಿಚಾರಣೆಗೆ ಶಿಫಾರಸ್ಸು ಮತ್ತು ದಂಡ ವಿಧಿಸಲಾಗುವದು ಎಂದು ಕರ್ನಾಟಕ ಮಾಹಿತಿ ಆಯೋಗ ಬೆಳಗಾವಿ ಪೀಠ ರಾಜ್ಯ ಮಾಹಿತಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



