
ಪ್ರಗತಿವಾಹಿನಿ ಸುದ್ದಿ, ಉಡುಪಿ: ಕಾಂಗ್ರೆಸ್ ರಾಷ್ಟ್ರೀಯ ನೇತಾರ ರಾಹುಲ್ ಗಾಂಧಿ ಅವರು ಮೀನು ಮುಟ್ಟಿದ್ದಕ್ಕೆ ದೇಗುಲ ಪ್ರವೇಶಕ್ಕೆ ಸ್ವತಃ ನಿರಾಕರಿಸಿದ್ದಾರೆ.
ಕಾಪು ತಾಲೂಕಿನ ಉಚ್ಚಿಲದಲ್ಲಿ ಮೀನುಗಾರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ ಅವರಿಗೆ ಮಹಿಳೆಯೊಬ್ಬರು ಅಂಜಲ್ ಮೀನು ಉಡುಗೊರೆಯಾಗಿ ನೀಡಿದರು. ಅತ್ಯಂತ ವಿನಮ್ರರಾಗಿ ರಾಹುಲ್ ಮೀನಿನ ಉಡುಗೊರೆಯನ್ನು ಸ್ವೀಕರಿಸಿ ಅದನ್ನು ಕೈಯ್ಯಲ್ಲಿಟ್ಟುಕೊಂಡು ನೋಡಿದ್ದರು.
ನಂತರದಲ್ಲಿ ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇಗುಲಕ್ಕೆ ಭೇಟಿ ನೀಡುವ ವೇಳೆ ರಾಹುಲ್ ದೇಗುಲದೊಳಗೆ ಪ್ರವೇಶಿಸುವ ಸಂದರ್ಭದಲ್ಲಿ ಮೀನು ಮುಟ್ಟಿದ್ದನ್ನು ನೆನಪಿಸಿಕೊಂಡು ಹಾಗೆಯೇ ದೇಗುಲ ಪ್ರವೇಶಿಸಲು ಅಳುಕಿದರು. “ಮೀನು ಉಟ್ಟಿ ಕೈ ತೊಳೆದಿಲ್ಲ, ದೇಗುಲದೊಳಗೆ ಬರಬಹುದೇ?” ಎಂದು ಪ್ರಶ್ನಿಸಿದರು.
ಇತರರು ದೇಗುಲ ಪ್ರವೇಶಕ್ಕೆ ಸಮ್ಮತಿಸಿದರೂ ಗರ್ಭಗುಡಿಯತ್ತ ಹೋಗದ ರಾಹುಲ್ ಎರಡು ಹೆಜ್ಜೆ ಹಿಂದೆಯೇ ನಿಂತು ದೇವಿಗೆ ನಮಸ್ಕರಿಸಿದರು. ನಂತರ ದೇಗುಲದ ಅರ್ಚಕರು ದೇವಿಗೆ ವಿಶೇಷಾರತಿ ಮಾಡಿ ತಂದು ರಾಹುಲ್ ಅವರಿಗೆ ಶಾಲು ಹೊದಿಸಿ ಹಣ್ಣು, ಪ್ರಸಾದ ನೀಡಿ ಸನ್ಮಾನಿಸಿದರು.
ರಾಹುಲ್ ಈ ನಡೆ ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ.