*ಪ್ರಧಾನಮಂತ್ರಿ ವಿಕಸಿತ ಭಾರತ ರೋಜಗಾರ ಯೋಜನೆಯ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮದ ನೇರಪ್ರಸಾರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದ, ಪ್ರಧಾನಮಂತ್ರಿ ವಿಕಸಿತ ಭಾರತ ಉದ್ಯೋಗ ಯೋಜನೆಯ ಅಡಿಯಲ್ಲಿ ಉದ್ಯೋಗಿಗಳಿಗೆ ಮತ್ತು ಉದ್ಯೋಗದಾತರಿಗೆ 2ನೇ ಕಂತಿನ ಪ್ರೋತ್ಸಾಹಧನ ವಿತರಣಾ ಕಾರ್ಯಕ್ರಮದ ನೇರಪ್ರಸಾರ ಕಾರ್ಯಕ್ರಮ ಬೆಳಗಾವಿಯಲ್ಲಿ ಶುಕ್ರವಾರ ಸಂಜೆ ನಡೆಯಿತು.
ಬೆಳಗಾವಿಯ ಫೌಂಡ್ರಿ ಕ್ಲಸ್ಟರ್ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿದ ಲೋಕಸಭಾ ಸದಸ್ಯ ಜಗದೀಶ್ ಶೆಟ್ಟರ್ ಮಾತನಾಡಿ, 99,446 ಕೋಟಿಯ ಯೋಜನೆ ಇದಾಗಿದ್ದು, ದೇಶದಲ್ಲಿ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಸುವುದು ಯೋಜನೆಯ ಉದ್ದೇಶವಾಗಿದೆ ಎಂದರು.
ಉದ್ಯೋಗಿಗಳಿಗಷ್ಟೇ ಅಲ್ಲದೆ ಉದ್ಯೋಗದಾತರಿಗೂ ಪ್ರೋತ್ಸಾಹಧನ ನೀಡುವ ಮೂಲಕ ಹೆಚ್ಚಿನ ಉದ್ಯೋಗ ಸೃಷ್ಟಿಸಲು ಪ್ರೋತ್ಸಾಹಿಸಲಾಗುವುದು. ಮಧ್ಯವರ್ತಿ ಗಳಿಲ್ಲದೆ ನೇರವಾಗಿ ಫಲಾನುಭವಿಗಳ ಕೈಗೆ ತಲುಪಿಸುವ ಯೋಜನೆ ಇದಾಗಿದೆ ಎಂದ ಅವರು, ಭಾರತ ಪ್ರಭಲ ರಾಷ್ಟ್ರವಾಗಿ ಬೆಳೆಯಲು ಮೋದಿ ನಾಯಕತ್ವ ಬಲಾಢ್ಯವಾಗಿ ನಿಂತಿದೆ ಎಂದರು.
ಇಪಿಎಫ್ಒ ಸೆಂಟ್ರಲ್ ಬೋರ್ಡ್ ಟ್ರಸ್ಟ್ ಮೆಂಬರ್ ಸಚಿನ್ ಸಬ್ನಿಸ್ ಮಾತನಾಡಿ, ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಗೂ ಪ್ರಧಾನಮಂತ್ರಿ ವಿಕಸಿತ ಭಾರತ್ ರೋಜಗಾರ ಯೋಜನೆ ಅನುಕೂಲವಾಗಿದೆ. ಬಹಳಷ್ಟು ಜನರಿಗೆ ಈ ಯೋಜನೆಯ ಮಾಹಿತಿ ಇಲ್ಲ. ಎಲ್ಲ ಉದ್ಯೋಗದಾತರು, ಉದ್ಯೋಗಸ್ಥರು ಇದರ ಪ್ರಯೋಜನ ಪಡೆಯಬೇಕು ಎಂದರು.
ರಾಜ್ಯಸಭೆಯ ಮಾಜಿ ಸದಸ್ಯ ಪದ್ಮಶ್ರೀ ಡಾ. ಪ್ರಭಾಕರ ಕೋರೆ, ಮೇಯರ್ ಪ್ರೀತಿ ಕಾಮಕರ್ ಅತಿಥಿಗಳಾಗಿ ಭಾಗವಹಿಸಿದ್ದರು. ಸಂದೀಪ ಬಾಗೇವಾಡಿ ಉದ್ಯೋಗದಾತರ ಪರವಾಗಿ, ಶಂಕರ ಉದ್ಯೋಗಿಗಳ ಪರವಾಗಿ ಮಾತನಾಡಿದರು. ಇಪಿಎಫ್ಒ ಅಧಿಕಾರಿ ನಂದರಾಮ ಮೀನಾ, ಶುಭಂ ಮೀನಾ ಉಪಸ್ಥಿತರಿದ್ದರು.




