Kannada NewsKarnataka NewsLatestPolitics

*ರಾಜ್ಯ ಸರ್ಕಾರ ಮೊದಲು ನೀರಿನ ಗ್ಯಾರೆಂಟಿ ಕೊಡಲಿ: ಮಾಜಿ ಸಿಎಂ ಬೊಮ್ಮಾಯಿ ಆಗ್ರಹ*

ನಾಳೆ ಬಿಜೆಪಿ ಪ್ರತಿಭಟನೆ:

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಉಡಾಫೆಯಾಗಿ ನಡೆದುಕೊಳ್ಳುತ್ತಿದೆ. ಇವರು ಹೀಗೆ ನಿರ್ಲಕ್ಷ್ಯ ಮಾಡಿದರೆ ಸ್ವಾಮೀಜಿಗಳು, ರೈತರು, ಬೆಂಗಳೂರಿನ ನಾಗರಿಕರು ದಂಗೆ ಏಳುತ್ತಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.


ಕಾವೇರಿ ವಿಚಾರದಲ್ಲಿ ಬಿಜೆಪಿಯ ಮುಂದಿನ ಹೋರಾಟದ‌ ಕುರಿತು ಪಕ್ಷದ ಕಚೇರಿಯಲ್ಲಿ ತಮ್ಮ ನೇತೃತ್ವದಲ್ಲಿ ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳ ಪಕ್ಷದ ಪದಾಧಿಕಾರಿಗಳ ಸಭೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೆರಿ ವಿಚಾರದಲ್ಲಿ ಈ ಸರ್ಕಾರ ತೀವ್ರವಾದ ಗಂಡಾಂತರ ತಂದಿದೆ. ಮೊದಲಿಂದಲೂ ಎಡವಟ್ಟು ಮಾಡಿಕೊಂಡು ಬಂದಿದೆ. ಸುಪ್ರೀಂಕೋರ್ಟ್ ನಲ್ಲಿ ಸರಿಯಾಗಿ ವಾದ ಮಾಡದೇ ಮತ್ತೆ 7.5 ಟಿಎಂಸಿ ನಿರು ಬಿಡುವ ಪರಿಸ್ಥಿತಿಗೆ ತಂದಿದೆ.‌ಇಷ್ಟೆಲ್ಲಾ ಆದರೂ ರಾಜ್ಯಸ ಜನರಿಗೆ ಸರ್ಕಾರ ಮುಂದೇನು ಮಾಡುತ್ತದೆ ಅಂತ ಹೇಳಿಲ್ಲ. ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದರು.


ನೀರಿನ‌ ಗ್ಯಾರೆಂಟಿ ಬೇಕು:
ರಾಜ್ಯ ಸರ್ಕಾರ ಆರಂಭದಿಂದಲೂ ಗ್ಯಾರೆಂಟಿ ಹೆಸರು ಹೇಳಿ ಈಗ ಕಂಡಿಷನ್ ಹಾಕಿ ಅರ್ಧಂಬರ್ಧ ಜಾರಿ ಮಾಡುತ್ತದೆ. ಬೆಂಗಳೂರು ಅಂತಾರಾಷ್ಟ್ರೀಯ ನಗರ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತೆತ್ತಿದರೆ ಬ್ರಾಂಡ್ ಬೆಂಗಳೂರು ಅಂತ ಹೇಳುತ್ತಾರೆ. ಆದರೆ, ಬೆಂಗಳೂರಿನ ಕುಡಿಯುವ ನೀರಿನ ಬಗ್ಗೆ ಮಾತನಾಡುವುದಿಲ್ಲ. ನಮಗೆ ಬೇಕಿರುವುದು ನೀರಿನ‌ ಗ್ಯಾರೆಂಟಿ. ಬೆಂಗಳೂರಿಗೆ ಪ್ರತ್ಯೆಕವಾಗಿ 4.5 ಟಿಎಂಸಿ ನೀರು ಕೊಡಲು ಟ್ರಿಬುನಲ್ ಹೇಳಿದೆ. ಈ ಬಗ್ಗೆ ರಾಜ್ಯ ಸರ್ಕಾರ ಎಲ್ಲಿಯೂ ಪ್ರಸ್ತಾಪ ಮಾಡುತ್ತಿಲ್ಲ. ತಮಿಳಿನಾಡು ಹೆಚ್ಚುವರಿ ನೀರು ಬಳಕೆ ಮಾಡಿ ಅಕ್ರಮವಾಗಿ ಬೆಳೆ ಬೆಳೆದಿದ್ದು, ಅದರ ಬಗ್ಗೆ ರಾಜ್ಯ ಸರ್ಕಾರ ಮಾತನಾಡಿಲ್ಲ. ನಮಗೆ ಮುಂಗಾರು ಮುಕ್ತಾಯವಾಗಿದೆ, ತಮಿಳುನಾಡಿಗೆ ಮುಂದಿನ ದಿನಗಳಲ್ಲಿ ಮಳೆ ಬರಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗಮನಕ್ಕೆ ತರಬೇಕು. ಈ ವಿಷಯ ಹೇಳಿದರೆ ನಾವು ರಾಜಕಾರಣ ಮಾಡುತ್ತೇವೆ ಎನ್ನುತ್ತಾರೆ. ಇದರ ಮೇಲೆ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ರಾಜಕಾರಣ ಮಾಡುತ್ತಾರೆ. ತಮಿಳುನಾಡು ಸಿಎಂ ಜೊತೆ ಮಾತನಾಡಿ ಅಂದರೆ ಮಾತನಾಡುವುದಿಲ್ಲ. ಅದರ ಬದಲು ಕೇಂದ್ರದ ಕಡೆ ಬೊಟ್ಟು ಮಾಡುತ್ತಾರೆ. ಅದರಲ್ಲಿ ಸಿದ್ದರಾಮಯ್ಯ ಪರಿಣಿತರು ಎಂದು ವಾಗ್ದಾಳಿ ನಡೆಸಿದರು.


ಸರ್ಕಾರದ ವಿರುದ್ದ ಪ್ರತಿಭಟನೆ
ಬರ ಬಂದರೆ ಕೇಂದ್ರದ ಕಡೆ ತೊರಿಸುತ್ತಾರೆ. ರಾಜ್ಯ ಸರ್ಕಾರ ಪರಿಹಾರ ಕೊಡಬಾರದು ಎಂದು ಏನು ನಿಯಮ ಇಲ್ಲ. ನಾವು ಪ್ರವಾಹ ಬಂದಾಗ ಕೇಂದ್ರದ ಎರಡು ಪಟ್ಟು ಪರಿಹಾರ ಕೊಟ್ಡಿದ್ದೇವೆ. ಜನ ನಿಮಗೆ ಅಧಿಕಾರ ಕೊಟ್ಟಿದ್ದಾರೆ. ಆದರೆ ನೀವು ಜನರಿಗೆ ದ್ರೋಹ ಮಾಡಿದ್ದೀರಿ, ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ನಾಳೆ (ಶನಿವಾರ) ಪ್ರತಿಭಟನೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ 28 ಲೋಕಸಭೆ ಕ್ಷೇತ್ರಗಳಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.


ಕಾವೇರಿ ನೆಲ ಜಲ ವಿಚಾರ ಬಂದಾಗ ನಾವು ಒಗಟ್ಟು ಪ್ತದರ್ಶನ ಮಾಡಬೇಕು. ಆ ದೃಷ್ಟಿಯಿಂದ ನಾವು ಸಹಕಾರ ಕೊಡುತ್ತೇವೆ. ಸರ್ವಪಕ್ಷದ ಸಭೆಯಲ್ಲಿ ನೀರು ಬಿಡುವುಸಿಲ್ಲ ಎಂದು ತೆಗೆದುಕೊಂಡ ತೀರ್ಮಾನ ಪಾಲನೆ ಮಾಡದಿದ್ದರೆ ನಾವು ಮಾತನಾಡುತ್ತೇವೆ. ಸುಪ್ರೀಂ ಕೋರ್ಟ್ ನಲ್ಲಿ ಇವರು ಮಧ್ಯಂತರ ಅರ್ಜಿ (ಐಎ) ಹಾಕಲಿಲ್ಲ ಎಂದರು.


ರಾಜ್ಯ ಸರ್ಕಾರ ಸುಗ್ರೀವಾಜ್ಞೆ ತರಬೇಕಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ರಾಜ್ಯ ಸರ್ಕಾರ ಸುಗ್ರಿವಾಜ್ಞೆ ತಂದಾಗ ಸುಪ್ರೀಂ ಕೋರ್ಟ್ ಅದನ್ನು ತಳ್ಳಿ ಹಾಕಿದೆ. ಅದರ ಬದಲು ಈಗಲಾದರೂ ಸರ್ಕಾರ ಮೇಲ್ಮನವಿ ಸಲ್ಲಿಸಿ ಇದುವರೆಗೂ ವಿಚಾರಣೆಯಲ್ಲಿ ಚರ್ಚೆಗೆ ಬಾರದ ಬೆಂಗಳೂರಿನ ಕುಡಿಯುವ ನೀರು, ತಮಿಳುನಾಡು ಹೆಚ್ಚಿಗೆ ನೀರು ಬಳಕೆ ಮಾಡಿಕೊಂಡಿದ್ದು, ನಮ್ಮಲ್ಲಿ ಮುಂಗಾರು ಮುಕ್ತಾಯವಾಗಿದ್ದು, ತಮಿಳುನಾಡಿಗೆ ಹಿಂಗಾರು ಮಳೆ ಬರುವ ವಿಚಾರಗಳನ್ನು ಸುಪ್ರೀಂ ಕೋರ್ಟ್ ಮುಂದೆ ಹಾಕಬೇಕು. ಅದನ್ನು ಸುಪ್ರೀಂ ಕೋರ್ಟ್ ಪರಿಗಣಿಸುವ ಸಾಧ್ಯತೆ ಇದೆ ಎಂದರು.


ಪರಿಹಾರ ನೀಡಲಿ
ರಾಜ್ಯ ಸರ್ಕಾರ ಕ್ಯಾಬಿನೆಟ್ ನಲ್ಲಿ ಈಗ ಬಿಟ್ಟಿರುವ ನೀರಿನ ಬಗ್ಗೆ ಸ್ಪಷ್ಟ ನಿರ್ಣಯ ಕೈಗೊಳ್ಳಬೇಕು. ಬರ ತಾಲೂಕಿನ ಕಾರ್ಯಕ್ರಮದ ಬಗ್ಗೆ ಘೊಷಣೆ ಮಾಡಬೇಕು. ಕಾವೇರಿ ಕೊಳ್ಳದ ತಾಲೂಕುಗಳ ರೈತರಿಗೆ ಪರಿಹಾರ ನೀಡಬೇಕು. ನಗರಗಳ ನೀರಿಗೆ ಮುಂದಿನ ಯೋಜನೆ ಏನು ಎಂದು ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಬೇಕು ಎಂದು ಆಗ್ರಹಿಸಿದರು.


ಮೈತ್ರಿ ಬಗ್ಗೆ ಹೈಕಮಾಂಡ್ ನಾಯಕರು ಮಾತನಾಡುತ್ತಾರೆ
ಇದೇ ವೇಳೆ ಜೆಡಿಎಸ್ ಜೊತೆಗಿನ ಮೈತ್ರಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೈತ್ರಿ ಬಗ್ಗೆ ಹೈಕಮಾಂಡ್ ನಾಯಕರು ಮಾತುಕತೆ ನಡೆಸುತ್ತಾರೆ ಆ ನಂತರ ರಾಜ್ಯದ ನಾಯಕರ ಜೊತೆ ಮಾತನಾಡುತ್ತಾರೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button