Belagavi NewsBelgaum NewsKannada NewsKarnataka News

ಕೆಎಲ್‌ಇ ಆಸ್ಪತ್ರೆಯಲ್ಲಿ 12 ಯಕೃತ್ತು ಕಸಿ ; ಅಂಗಾಂಗ ದಾನಕ್ಕೆ ಡಾ.ಕೋರೆ ಮನವಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಳೆದ ಒಂದು ವರ್ಷದ ಹಿಂದೆ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಯಕೃತ್ತು (ಲೀವರ) ಕಸಿ ಶಸ್ತ್ರಚಿಕಿತ್ಸೆಯನ್ನು ಪ್ರಾರಂಭಿಸಲಾಗಿದ್ದು, ಇಲ್ಲಿಯವರೆಗೆ ಸುಮಾರು 12 ಯಶಸ್ವಿ ಯಕೃತ್ತು ಕಸಿಗಳನ್ನು ನೆರವೇರಿಸಲಾಗಿದೆ. ಲೀವರ್ ಕಸಿ ಮಾಡಿಸಿಕೊಂಡ ಅರ್ಧದಷ್ಟು ಜನರು ಬೆಳಗಾವಿ ಜಿಲ್ಲೆಯವರು, ಉಳಿದ ಅರ್ಧದಷ್ಟು ರೋಗಿಗಳು ದೂರದ ಬೆಂಗಳೂರು, ಗುಲ್ಬರ್ಗ, ಹುಬ್ಬಳ್ಳಿ, ಹಾವೇರಿ ಮತ್ತು ಹಾಸನದಂತಹ ನಗರಗಳಿಂದ ಬಂದು ಲೀವರ ಕಸಿ ಮಾಡಿಸಿಕೊಂಡಿದ್ದಾರೆ.

ಅಂಗಾಂಗ ದಾನಗಳ ಕುರಿತು ಉತ್ತರ ಕರ್ನಾಟಕ ಭಾಗದಲ್ಲಿ ಅಂಗಾಂಗ ದಾನದ ಕುರಿತು ವ್ಯಾಪಕವಾದ ಜಾಗೃತಿಯಿಂದಾಗಿ ಅನೇಕ ಯಶಸ್ವಿ ಯಕೃತ್ತು ಕಸಿ ಸಾಧ್ಯವಾಗುತ್ತಿದೆ. ಇವುಗಳಲ್ಲಿ ಆರು ಯಕೃತ್ತುಗಳನ್ನು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿ, ಸ್ಪಂಧಿಸದೇ ಮೆದುಳು ನಿಷ್ಕ್ರೀಯಗೊಂಡ ರೋಗಿಗಳ ಕುಟುಂಬಗಳು ಲೀವರ ದಾನ ಮಾಡಿದರೆ, ಉಳಿದ 6 ಲೀವರಗಳನ್ನು ಧಾರವಾಡದ ಎಸ್‌ಡಿಎಂ ಆಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್ ಮತ್ತು ಸುಚಿರಾಯು ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳು ದಾನ ಮಾಡಿದ್ದಾರೆ. ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಡಗಾವಿಯ ಮುಕುಂದ ರಾಟಾ ಅವರು ಚಿಕಿತ್ಸೆಗೆ ಸ್ಪಂಧಿಸದೇ ಮೆದುಳು ನಿಷ್ಕ್ರಿಯಗೊಂಡಾಗ ಅವರ ಕುಟುಂಬವು ಅಂಗಾಂಗ ದಾನ ಮಾಡಿ ಇನ್ನೊಬ್ಬರಿಗೆ ಜೀವದಾನ ಮಾಡಿದರು.

ಅಂಗಾಂಗ ದಾನ ಮಾಡಿದ ಕುಟುಂಬ ಸದಸ್ಯರ ಕಾರ‍್ಯವನ್ನು ಶ್ಲಾಘಿಸಿದ ಕೆಎಲ್‌ಇ ಸಂಸ್ಥೆಯ ಕಾರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು, ಯಕೃತ್ತು( ಲೀವರ) ಹಾಳಾಗಿ ಕಸಿಗಾಗಿ ಸುಮಾರು 30ಕ್ಕೂ ಅಧಿಕ ರೋಗಿಗಳು ಕೆಎಲ್‌ಇ ಆಸ್ಪತ್ರೆಯೊಂದರಲ್ಲೇ ಕಾಯುತ್ತಿದ್ದಾರೆ. ಅವರ ಜೀವನವನ್ನು ಉಳಿಸಿಕೊಳ್ಳಲು ಯಕೃತ್ತಿನ ಅವಶ್ಯಕತೆಯಿದೆ. ಓರ್ವ ವ್ಯಕ್ತಿಯು ನೀಡುವ ಅಂಗಾಂಗದಿಂದ ಇನ್ನೊಬ್ಬರನ್ನು ಪ್ರೇರೆಪಿಸುವದಲ್ಲದೇ, ಇನ್ನೊಬ್ಬರ ಜೀವ ಉಳಿಸುತ್ತದೆ. ಯಾವುದೇ ರೋಗಿಯು ಒಳ್ಳೆಯ ಗುಣಮಟ್ಟದ, ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಯಿಂದ ವಂಚಿತರಾಗಬಾರದು ಹಾಗೂ ವೈದ್ಯಕೀಯ ಸೇವೆಗಳೆಲ್ಲವನ್ನೂ ಕೈಗೆಟುಕುವ ದರದಲ್ಲಿ ಲಭಿಸುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಲೀವರ ಸೇರಿದಂತೆ ಅಂಗಾಂಗಗಳ ಕಸಿ ಮಾಡಲು ಅತ್ಯಾಧುನಿಕ ಬೃಹತ್ ವೈದ್ಯಕೀಯ ಮೂಲಸೌಕರ್ಯ, ತರಬೇತಿ ಪಡೆದ ವೃತ್ತಿನಿರತ ಕಾರ್ಯಪಡೆ, ನಿಖರವಾದ ಯೋಜನೆ, ಕಸಿ ನಂತರದ ತೀವ್ರ ನಿಗಾ ವಹಿಸಬೇಕಾಗಿರುತ್ತದೆ. ವೃತ್ತಿನಿರತ ತಂಡದ ಕರ‍್ಯಕ್ಕೆ ಆಡಳಿತಾತ್ಮಕ ಸಹಕಾರದ ಅಗತ್ಯವೂ ಅಷ್ಟೇ ಮುಖ್ಯವಾಗಿರುತ್ತದೆ. ಅದೆಲ್ಲ ಇಲ್ಲಿ ಸಮ್ಮಿಳಿತಗೊಂಡಿದೆ. ಉತ್ತರ ಕರ್ನಾಟಕ ಮತ್ತು ಗೋವಾ ರಾಜ್ಯವನ್ನೊಳಗೊಂಡ ಏಕೈಕ ಕೇಂದ್ರ ನಮ್ಮ ಆಸ್ಪತ್ರೆ ಎಂದ ಅವರು, ಶೀಘ್ರದಲ್ಲಿ ಲಂಗ್ ಕಸಿ ಶಸ್ತ್ರಚಿಕಿತ್ಸೆ ಕೂಡ ನೆರವೇರಿಸಲಾಗುತ್ತದೆ ಎಂದು ತಿಳಿಸಿದರು. ನಮ್ಮ ಸಮಾಜದಲ್ಲಿ ಹೆಚ್ಚುತ್ತಿರುವ ಅಂಗಾಗ ದಾನದ ಅರಿವಿನಿಂದಾಗಿ ಇವೆಲ್ಲವೂ ಸಾಧ್ಯವಾಗಿದೆ. ಅಮೂಲ್ಯ ಜೀವಗಳನ್ನು ಉಳಿಸಲು ಕುಟುಂಬಗಳು ತಮ್ಮ ಆತ್ಮೀಯರ ಅಂಗಾಂಗಗಳನ್ನು ದಾನ ಮಾಡಲು ಸಿದ್ಧರಿದ್ದಾರೆ ಎಂದು ತಿಳಿಸಿದರು.

ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯು ಈಗ ಲಿವರ್ ಕಸಿಗಾಗಿ ಅತ್ಯಾಧುನಿಕ ಮೂಲಸೌಕರ್ಯಗಳೊಂದಿಗೆ ಸುಸಜ್ಜಿತವಾಗಿದೆ. ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಡಾ. ಸಂತೋಷ ಹಜಾರೆ, ಲೀವರ ಕಸಿ ಶಸ್ತ್ರಚಿಕಿತ್ಸಕರಾದ ಡಾ. ಸುದರ್ಶನ ಚೌಗಲೆ ಅವರು ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದು, ಅರವಳಿಕೆ ತಜ್ಞವೈದ್ಯರಾದ ಡಾ ರಾಜೇಶ ಮಾನೆ ಮತ್ತು ಡಾ. ಮಂಜುನಾಥ ಪಾಟೀಲ ಅವರು ಸಹಕಾರ ನೀಡಿದರು. ಗೀತಾ ದೇಸಾಯಿ, ಬಸವರಾಜ ಮಜತಿ ಅವರು ಸಹಕಾರ ನೀಡಿದರು.

ಯಶಸ್ವಿ ಕಸಿ ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯರ ತಂಡವನ್ನು ಕೆಎಲ್‌ಇ ಸಂಸ್ಥೆಯ ಕರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ ಅವರು ಅಭಿನಂದಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button