Belagavi NewsBelgaum NewsPolitics

*ಸೋಲು ತಾತ್ಕಾಲಿಕ, ಸಂಘಟನೆ, ಹೋರಾಟ ನಿರಂತರ: ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆಯ ಸೋಲಿನಿಂದ ಯಾರೂ ಧೈರ್ಯಗೆಡುವ ಅಗತ್ಯ ಇಲ್ಲ. ಸೂರ್ಯನಿಗೂ ಗ್ರಹಣ ಹಿಡಿಯುತ್ತದೆ. ಅದು ತಾತ್ಕಾಲಿಕ ಅಷ್ಟೆ. ಸಂಘಟನೆ ಮತ್ತು ಹೋರಾಟ ನಿರಂತರವಾಗಿರಲಿದೆ. ಅದರ ಮೂಲಕ ನಮ್ಮ ಶಕ್ತಿಯನ್ನು ಮರಳಿ ಪಡೆದುಕೊಳ್ಳೋಣ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.


ಹಲಗಾದ ಸುವರ್ಣ ಗಾರ್ಡನ್ ಕಾರ್ಯಾಲಯದಲ್ಲಿ ಹಲಗಾ ಮತ್ತು ಹಿರೇಬಾಗೇವಾಡಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಯಾರಿಗೂ ಹಿಂಜರಿಕೆ ಬೇಡ. ನಾವು ಯಾರಿಗೂ ಮೋಸ ಮಾಡಿಲ್ಲ. ಯಾರ ಆಸ್ತಿ ಕಬಳಿಸಿಲ್ಲ, ಎಲ್ಲರ ಕೆಲಸ ಮಾಡಿಕೊಟ್ಟಿದ್ದೇನೆ, ಎಲ್ಲ ಊರಲ್ಲಿ ಅಭಿವೃದ್ಧಿ ಮಾಡಿದ್ದೇನೆ. ಕ್ಷೇತ್ರದ ಜನರನ್ನು ಹೃದಯದಿಂದ ಪ್ರೀತಿಸಿದ್ದೇನೆ. ಹಾಗಾಗಿ ಇಂತಹ ಸೋಲಿನಿಂದ ಎದೆಗುಂದುವುದಿಲ್ಲ. ಪ್ರತಿ ದಿನ ಸಂಘಟನೆಯಲ್ಲಿ ತೊಡಗಿಕೊಳ್ಳೋಣ. ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸೋಣ. ಎಲ್ಲರನ್ನೂ ಜೋಡಿಸಿಕೊಂಡು ಹೋಗೋಣ, ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧರಾಗೋಣ ಎಂದು ಕಾರ್ಯಕರ್ತರಿಗೆ ಹುರುದುಂಬಿಸಿದರು.

ಕೆಪಿಸಿಸಿ ಸದಸ್ಯ ಸುರೇಶ ಇಟಗಿ ಮಾತನಾಡಿ, ಸಾಕಷ್ಟು ಅಭಿವೃದ್ಧಿ ಮಾಡಿದರೂ ಜನರು ಯಾವ ಕಾರಣದಿಂದ ಕೈ ಹಿಡಿಯಲಿಲ್ಲ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಗ್ಯಾರಂಟಿ ಯೋಜನೆಗಳನ್ನು ತಂದರೂ, ಪ್ರತಿ ಊರಿಗೆ ಸಾಕಷ್ಟು ಸಹಾಯ ಮಾಡಿದರೂ ಏಕೆ ಹಿನ್ನಡೆಯಾಯಿತು ಎಂದು ತಿಳಿದುಕೊಳ್ಳಬೇಕಿದೆ. ಇಂತಹ ಶಾಸಕರು, ಇಂತಹ ಸಚಿವರನ್ನು ಎಂದೂ ಕಳೆದುಕೊಳ್ಳಬಾರದು. ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರೆ ನಮ್ಮ ಶಕ್ತಿ ಇಮ್ಮಡಿಯಾಗುತ್ತಿತ್ತು ಎಂದರು.

ಶ್ರೀಕಾಂತ ಮಧುಬರಮಣ್ಣವರ್ ಮಾತನಾಡಿ, ಬೆಳಗಾವಿಯಲ್ಲಿ ಕಾಂಗ್ರೆಸ್ ಗೆಲ್ಲುವ ಬಗ್ಗೆ ಇಡೀ ರಾಜ್ಯದಲ್ಲಿ ವಿಶ್ವಾಸ ಇತ್ತು.ಆದಾಗ್ಯೂ ಏಕೆ ಹೀಗಾಯಿತು ಎನ್ನುವುದು ಯಕ್ಷಪ್ರಶ್ನೆಯಾಗಿದೆ ಎಂದರು.


ನಾಗನಗೌಡ, ಏನೇ ಆದರೂ ಲಕ್ಷ್ಮೀ ಹೆಬ್ಬಾಳಕರ್ ಅವರ ಋಣ ತೀರಿಸಲಾಗದು. ಮೃಣಾಲ ಅವರು ಸೋತರೂ ಅವರೇ ನಮ್ಮ ಸಂಸದರು. ಮುಂದಿನ ಚುನಾವಣೆಯಲ್ಲಿ ನಾಲ್ಕುಪಟ್ಟು ಹೆಚ್ಚು ಮತಗಳಿಂದ ಅವರನ್ನು ಆರಿಸಿ ತರೋಣ ಎಂದರು.


ಪ್ರಕಾಶ ಪಾಟೀಲ್, ಲಕ್ಷ್ಮೀ ಹೆಬ್ಬಾಳಕರ್ ಅವರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಚುನಾವಣೆಯಲ್ಲಿ ಓಡಾಡಿದರು. ಆದರೆ ಕೆಲವು ಹಿತಶತ್ರುಗಳಿಂದ ನಮಗೆ ಹಿನ್ನಡೆಯಾಯಿತು. ಅಭಿವೃದ್ಧಿಯಲ್ಲಿ ನಾವು ಯಾವತ್ತೂ ಹಿಂದೆ ಬಿದ್ದಿಲ್ಲ. ಗ್ಯಾರಂಟಿ ಯೋಜನೆ ಸೇರಿದಂತೆ ನಮ್ಮ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವಲ್ಲಿ ವಿಫಲರಾಗಿದ್ದೇವೆ. ಎಂಇಎಸ್ ನವರು ಬಿಜೆಪಿ ಜೊತೆ ಶಾಮೀಲಾಗಿದ್ದೂ ಸೋಲಿಗೆ ಒಂದು ಕಾರಣ. ಲಕ್ಷ್ಮೀ ಹೆಬ್ಬಾಳಕರ್ ಅಂತವರನ್ನು ಕಳೆದುಕೊಂಡರೆ ಕ್ಷೇತ್ರ ಅಧೋಗತಿಗೆ ಹೋಗುತ್ತದೆ ಎಂದರು.


ಮನ್ಸೂರ್ ಅತ್ತಾರ, ಲಕ್ಷ್ಮೀ ಹೆಬ್ಬಾಳಕರ್ ಅವರು 24 ಗಂಟೆ ನಮ್ಮ ಸಲುವಾಗಿ ಕೆಲಸ ಮಾಡಿದರು. ಸರಕಾರದಿಂದಷ್ಟೇ ಅಲ್ಲ ಸ್ವಂತ ಖರ್ಚಿನಿಂದ ಕೆಲಸ ಮಾಡಿಕೊಟ್ಟಿದ್ದಾರೆ. ಈಗ ಆಗಿರುವ ತಪ್ಪು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದರು.


ಚಾರುಕೀರ್ತಿ ಸೈಬಣ್ಣವರ್, ತಂತ್ರಕ್ಕಿಂತ ಕುತಂತ್ರ ಹೆಚ್ಚು ಕೆಲಸ ಮಾಡಿದೆ. ದೊಡ್ಡ ಶಕ್ತಿಗಳ ಕುತಂತ್ರದಿಂದ ಸೋಲಾಗಿದೆ, ಕಾರ್ಯಕರ್ತರಿಂದಲ್ಲ ಎಂದರು.


ಅಡಿವೇಶ ಇಟಗಿ, ಲಕ್ಷ್ಮೀ ಹೆಬ್ಬಾಳಕರ್ ಏಳ್ಗೆ ಸಹಿಸದವರ ಕುತಂತ್ರದಿಂದ ಸೋಲಾಗಿದೆ. ಎಂಇಎಸ್ ಪ್ರಬಲ ಅಭ್ಯರ್ಥಿ ಇರಲಿಲ್ಲ. ಎಲ್ಲವೂ ಚೆನ್ನಾಗಿದ್ದರೂ ಹಿನ್ನಡೆಗೆ ಕಾರಣ ಏನು ಎನ್ನುವ ಕುರಿತು ಅವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಮನೋಹರ ಬಾಂಡಗೆ, ಪ್ರಕಾಶ ಪಾಟೀಲ್, ಬಸವರಾಜ ತಳವಾರ ಮೊದಲಾದವರು ಮಾತನಾಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button