Kannada NewsKarnataka NewsNationalPolitics

*41 ದಿನಗಳ ಬಳಿಕ ಬಂಗಾಳದಲ್ಲಿ ವೈದ್ಯರು ಕರ್ತವ್ಯಕ್ಕೆ ಮತ್ತೆ ಹಾಜರ್*

ಪ್ರಗತಿವಾಹಿನಿ ಸುದ್ದಿ: ಕೋಲ್ಕತ್ತಾದ ಆರ್‌ಜೆ ಕರ್‌ ಆಸ್ಪತ್ರೆಯಲ್ಲಿ ತರಬೇತಿ ನಿರತ ವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಖಂಡಿಸಿ ಕಳೆದ 41 ದಿನಗಳಿಂದ ಸತತವಾಗಿ ಮುಷ್ಕರ ನಡೆಸುತ್ತಿದ್ದ ಕಿರಿಯ ವೈದ್ಯರು, ತಮ್ಮ ಪ್ರತಿಭಟನೆಯನ್ನು ಭಾಗಶಃ ಕೈಬಿಡಲು ನಿರ್ಧರಿಸಿದ್ದಾರೆ.

ಸರ್ಕಾರದೊಂದಿಗೆ ನಡೆದ ಮಾತುಕತೆ ಫಲ ಕೊಟ್ಟಿದ್ದು, ಬೇಡಿಕೆ ಈಡೇರಿಸಲು ಸರ್ಕಾರ ಸಮ್ಮತಿಸಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮುಷ್ಕರ ಹಿಂಪಡೆದು, ಶನಿವಾರದಿಂದ ಸೀಮಿತ ಪ್ರಮಾಣದಲ್ಲಿ ಕರ್ತವ್ಯಕ್ಕೆ ಹಾಜರಾಗುವುದಾಗಿ ಸಾವಿರಾರು ಕಿರಿಯ ವೈದ್ಯರು ಪ್ರಕಟಿಸಿದ್ದಾರೆ.

ಹೀಗಾಗಿ ಕಳೆದ ಒಂದೂವರೆ ತಿಂಗಳಿನಿಂದ ರಾಜ್ಯವ್ಯಾಪಿ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಅನುಭವಿಸಿದ್ದ ಸಂಕಷ್ಟ ಅಂತ್ಯಗೊಳುವ ಭರವಸೆ ವ್ಯಕ್ತವಾಗಿದೆ. ವೈದ್ಯರ ಮುಷ್ಕರದ ಪರಿಣಾಮ ಸೂಕ್ತ ಚಿಕಿತ್ಸೆ ಸಿಗದೇ 25ಕ್ಕೂ ಹೆಚ್ಚು ರೋಗಿಗಳು ಸಾವನ್ನಪ್ಪಿದ್ದರು. ಸುಪ್ರೀಂಕೋರ್ಟ್‌ ಸೂಚನೆ ಹೊರತಾಗಿಯೂ ವೈದ್ಯರು ಮುಷ್ಕರ ಕೈಬಿಡಲು ನಿರಾಕರಿಸಿದ್ದರು.

ಆರ್‌ಜಿ ಕರ್ ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೈದ್ಯರು ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ಸೋಮವಾರ ರಾತ್ರಿ ಕೊನೆಗೂ ಸಂಧಾನ ಸಭೆ ನಡೆದಿದ್ದು, ಬಹುತೇಕ ಫಲಪ್ರದವಾಗಿತ್ತು ಎಂದು ವರದಿಯಾಗಿತ್ತು. ಮಮತಾರ ಕಾಳಿಘಾಟ್ ಪ್ರದೇಶದ ನಿವಾಸದಲ್ಲಿ ಸೋಮವಾರ 1.45 ತಾಸು ಸಂಧಾನ ಸಭೆ ನಡೆದು, ಕೆಲವು ವಿಷಯಗಳ ಬಗ್ಗೆ ಒಮ್ಮತಕ್ಕೆ ಬರಲಾಯಿತು. ಸರ್ಕಾರಿ ಆಸ್ಪತ್ರೆಗಳ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕು ಹಾಗೂ ತಮಗೆ ಕೆಲಸದ ವೇಳೆ ಭದ್ರತೆ ನೀಡಬೇಕು ಎಂಬ ಕಿರಿಯ ವೈದ್ಯರ ಪ್ರಮುಖ ಬೇಡಿಕೆಯನ್ನು ಪ. ಬಂಗಾಳ ಸರ್ಕಾರ ಒಪ್ಪಿಕೊಂಡಿದೆ ಎಂದು ತಿಳಿದು ಬಂದಿತ್ತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button